ಬೆಂಗಳೂರು, ಜೂ. 18- ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ಆತ್ಮಸಾಕ್ಷಿ ಅನುಗುಣವಾಗಿ ನಾನು ಮತ ಚಲಾಯಿಸಿದ್ದೇನೆ. ಅಡ್ಡ ಮತದಾನ ಮಾಡಿದ್ದೇನೆ ಎಂದು ಹೇಳುವವರು ಅದನ್ನು ಸಾಬೀತು ಪಡಿಸಲಿ ಎಂದು ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಸವಾಲು ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮಗೆ ಅನಾರೋಗ್ಯದ ಕಾರಣಕ್ಕಾಗಿ ಪಕ್ಷದ ಶಾಸಕರಗಿಂತಲೂ ಮೊದಲೇ ಮತದಾನ ಮಾಡಿದ್ದೇನೆ ಎಂದರು.
ಜಿ.ಟಿ.ದೇವೇಗೌಡ ಅಡ್ಡ ಮತದಾನ ಮಾಡಿದ್ದಾರೆ ಎಂದು ಹೇಳುವವರು ಅದನ್ನು ಸಾಬೀತು ಪಡಿಸಲಿ. ನಾನು ಆತ್ಮಸಾಕ್ಷಿ ಅನುಗುಣವಾಗಿ ಮತ ಚಲಾಯಿಸಿದ್ದೇನೆ. ರಹಸ್ಯ ಮತದಾನವಾಗಿರುವುದರಿಂದ ಯಾರಿಗೆ ಮತ ಹಾಕಿದ್ದೇನೆ ಎಂದು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದರು. ಜೆಡಿಎಸ್ನ ಅಭ್ಯರ್ಥಿ ಗೋವಿಂದರಾಜ್ ಗೆದ್ದೇ ಗೆಲ್ಲುತ್ತಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಗೋವಿಂದರಾಜ್ ಅವರನ್ನು ಗೆಲ್ಲಿಸಿಕೊಳ್ಳುವುದು ಗೊತ್ತಿದೆ ಎಂದರು.
ಜಿ.ಟಿ.ದೇವೇಗೌಡ ಅವರ ಪುತ್ರರೂ ಆಗಿರುವ ಹುಣಸೂರು ಕ್ಷೇತ್ರದ ಶಾಸಕ ಹರೀಶ್ಗೌಡ ಅವರು ಜೆಡಿಎಸ್ನಲ್ಲಿ ಯಾರು ಅಡ್ಡ ಮತದಾನ ಮಾಡಿಲ್ಲ ಎಂದು ಪುನರುಚ್ಚರಿಸಿದರು. ತಮ್ಮ ತಂದೆ ಜಿ.ಟಿ.ದೇವೇಗೌಡರವರೇ ಎನ್ಡಿಎ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಹೇಳಿದ ಮೇಲೆ ಅವರು ಅಡ್ಡ ಮತದಾನ ಮಾಡಿದ್ದಾರೆ ಎಂದು ಅನುಮಾನಿಸುವುದರಲ್ಲಿ ಅರ್ಥವಿಲ್ಲ. ಆತ್ಮಸಾಕ್ಷಿ ಅನುಗುಣವಾಗಿ ಮತ ಹಾಕಿದ್ದೇನೆ ಎಂದು ಯಾವ ಕಾರಣಕ್ಕೆ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಈ ಬಗ್ಗೆ ಅವರೇ ಸ್ಪಷ್ಟಪಡಿಸಬೇಕು ಎಂದು ಹೇಳಿದರು.
