ಬೆಂಗಳೂರು, ಮಾ.18- ದೇಶದ ವಿವಿಧೆಡೆ ಉಂಟಾಗಿರುವ ಅಡುಗೆ ಅನಿಲ ಕೊರತೆ ವಿಧಾನ ಪರಿಷತ್ನಲ್ಲೂ ಪ್ರತಿಧ್ವನಿಸಿ ಹಲವಾರು ದಿನಗಳಿಂದ ಸರಿಯಾಗಿ ಊಟ, ತಿಂಡಿ ಸಕಾಲಕ್ಕೆ ಸರಿಯಾಗಿ ಸಿಗುತ್ತಿಲ್ಲ ಎಂದು ಸದಸ್ಯರು ತಮ ನೋವು ಹೊರಹಾಕಿದ ಪ್ರಸಂಗ ಜರುಗಿತು. ದಿನದ ಕಲಾಪ ಆರಂಭವಾಗು ತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಶ್ನೋತ್ತರ ಕಲಾಪವನ್ನು ಪ್ರಾರಂಭಿಸಲು ಮುಂದಾದರು.
ಈ ವೇಳೆ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ಅವರು ವಿಷಯ ಪ್ರಸ್ತಾಪಿಸಿ ಶಾಸಕರಿಗೆ ಶಾಸಕರ ಭವನ ಮತ್ತು ಹೋಟೆಲ್ಗಳಲ್ಲಿ ಸರಿಯಾದ ಊಟ-ತಿಂಡಿ ಸಿಗುತ್ತಿಲ್ಲ. ಕಳೆದ ಒಂದು ವಾರದಿಂದ ನಾವೆಲ್ಲಾ ಪರದಾಡುವಂತಾಗಿದೆ ಎಂದು ಆಸಮಾಧಾನ ಹೊರಹಾಕಿದರು.
ಕಡೆಪಕ್ಷ ಇಂದಿರಾಕ್ಯಾಂಟೀನ್ಗೆ ಹೋಗಿ ತಿನ್ನೋಣವೆಂದರೆ ಅಲ್ಲಿಯೂ ಗ್ಯಾಸ್ ಸಮಸ್ಯೆಯಿಂದ ಊಟ-ತಿಂಡಿ ಸಿಗುತ್ತಿಲ್ಲ. ಇದು ಕೇವಲ ಶಾಸಕರ ಸಮಸ್ಯೆಯಲ್ಲ. ಗ್ಯಾಸ್ ತೊಂದರೆಯಿಂದಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ದಯಮಾಡಿ ಸಮಸ್ಯೆಯನ್ನು ಪರಿಹರಿಸಿ ಎಂದು ಸರ್ಕಾರದಕ್ಕೆ ಮನವಿ ಮಾಡಿಕೊಂಡರು.
ಈ ವೇಳೆ ಸಭಾಪತಿ ಬಸವರಾಜ್ ಹೊರಟ್ಟಿ ಅವರು, ಅದಕ್ಕೆಲ್ಲ ಸರ್ಕಾರವೇ ಉತ್ತರ ಕೊಡಬೇಕು. 10 ನಿಮಿಷ ಅನುಮತಿ ಕೊಡುತ್ತೇನೆ ತಿಂದು ಬಾ ಎಂದು ಡಿಸೋಜಾಗೆ ಹೇಳಿದರು.ಅವರು ಹಸಿದು ಬಂದಿದ್ದಾರೆ, ದಯವಿಟ್ಟು ಇಡ್ಲಿ ವಡಾ ಕೊಡಿ ಎಂದು ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಸ್ಯ ಚಟಾಕಿ ಹಾರಿಸಿದರೆ, ಇಡ್ಲಿ ವಡೆ ಸಿಗುತ್ತಿಲ್ಲ, ಏಕೆಂದರೆ ಗ್ಯಾಸ್ ಸಿಗುತ್ತಿಲ್ಲ ಎಂದ ಸಚಿವ ಜಮೀರ್ ಅಹದ್ ಹೇಳಿದರು.
ಮಾತು ಮುಂದುವರೆಸಿದ ಐವಾನ್ ಡಿಸೋಜಾ, ದರ ಜಾಸ್ತಿ ಮಾಡಿದ್ದಾರೆ ಸರ್ ಎಂದರು., ಇದು ಗ್ಯಾಸ್ ಟ್ರಬಲ್ ಕತೆ ಎಂದು ಸದಸ್ಯರುಗಳು ಪರೋಕ್ಷವಾಗಿ ಪ್ರತಿಪಕ್ಷದ ಸದಸ್ಯರ ಮೇಲೆ ಮಾತಿನ ಬಾಣ ಬಿಟ್ಟರು.
