Friday, May 3, 2024
Homeರಾಜಕೀಯಯಡಿಯೂರಪ್ಪ ಹಾಗೂ ಪುತ್ರ ವಿಜಯೇಂದ್ರಗೆ ಸವಾಲಾದ ಲೋಕಸಭೆ ಚುನಾವಣೆ

ಯಡಿಯೂರಪ್ಪ ಹಾಗೂ ಪುತ್ರ ವಿಜಯೇಂದ್ರಗೆ ಸವಾಲಾದ ಲೋಕಸಭೆ ಚುನಾವಣೆ

ಬೆಂಗಳೂರು,ಏ.5- ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಲೋಕಸಭೆ ಚುನಾವಣೆ ನಿಜಕ್ಕೂ ಸವಾಲಿನ ಚುನಾವಣೆಯಾಗಿದೆ. ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡುವುದಲ್ಲದೆ ಸಪಕ್ಷೀಯ ವಿರೋಧಿಗಳಿಗೂ ಉತ್ತರ ನೀಡಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ.

ಬಿವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲು ಪಕ್ಷದಲ್ಲೇ ಒಂದು ಬಣ ತೀವ್ರ ವಿರೋಧವನ್ನು ವ್ಯಕ್ತಪಡಿಸಿತ್ತು. ಅದರಲ್ಲೂ ಬಿ.ಎಲ್.ಸಂತೋಷ್ ಬಣದ ಜೊತೆಗೆ ಗುರುತಿಸಿಕೊಂಡ ನಾಯಕರು ಈ ಆಯ್ಕೆಯನ್ನು ಸಮ್ಮತಿಸಿರಲಿಲ್ಲ. ಇನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಂತೂ ಬಹಿರಂಗವಾಗಿಯೇ ವಿಜಯೇಂದ್ರ ಆಯ್ಕೆಯನ್ನು ವಿರೋಧಿಸಿದ್ದರು.

ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಾಗುತ್ತಿದೆ. ಇದು ಸರಿಯಲ್ಲ ಎನ್ನುತ್ತಿರುವ ಈ ತಂಡ, ಲೋಕಸಭೆ ಚುನಾವಣೆಯ ಬಳಿಕ ಅಧ್ಯಕ್ಷ ಸ್ಥಾನ ಬದಲಾವಣೆಯಾಗಲಿದೆ ಎಂದೂ ಭವಿಷ್ಯ ನುಡಿಯುತ್ತಿದೆ. ಇದಕ್ಕೆ ಪೂರಕ ಎಂಬಂತೆ ಟಿಕೆಟ್ ಹಂಚಿಕೆಯ ಸಂದರ್ಭದಲ್ಲೂ ಬಿಎಸ್‍ವೈ ತಂಡದ ಕೈ ಮೇಲಾಗಿದ್ದು, ಈ ಅಸಮಾಧಾನವನ್ನು ಮತ್ತಷ್ಟು ವೃದ್ದಿಸಿದೆ.

ಇವೆಲ್ಲಾ ವಿರೋಧದ ನಡುವೆಯೂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿ.ವೈ.ವಿಜಯೇಂದ್ರ ಅವರು ಪಕ್ಷವನ್ನು ತಮ್ಮ ಹಿಡಿತದಲ್ಲಿ ತರುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಆದರೆ ಅವರ ಮುಂದೆ ಇರುವುದು ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಿಸುವ ಸವಾಲು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ಬಿಜೆಪಿಯ ಹೀನಾಯ ಪ್ರದರ್ಶನಕ್ಕೆ ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದೇ ಕಾರಣ ಎಂಬ ವಾದ ಇದೆ. ಯಡಿಯೂರಪ್ಪನವರ ನಿಗೂಢ ನಡೆಯಿಂದಾಗಿಯೇ ಬಿಜೆಪಿಯ ಹೀನಾಯವಾಗಿ ಸೋಲು ಕಾಣುವಾಯಿತು ಎಂಬುವುದು ಒಂದು ಬಣದ ವಾದವಾಗಿದೆ. ಆದರೆ ಈ ವಾದವನ್ನು ಬಿಜೆಪಿಯಲ್ಲಿರುವ ಮತ್ತೊಂದು ಬಣ ನಿರಾಕರಿಸುತ್ತಿದೆ.

ಹೀಗಿದ್ದರೂ ಇದೀಗ ಪಕ್ಷದ ಹಿಡಿತ ಯಡಿಯೂರಪ್ಪ ಕುಟುಂಬದ ಕೈಗೆ ಮತ್ತೆ ಸಿಕ್ಕಿದೆ. ಸದ್ಯ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿ ಲೋಕಸಭೆ ಚುನಾವಣೆಯನ್ನು ಎದುರಿಸುತ್ತಿದೆ. ಇದೀಗ ಪಕ್ಷದ ಹಿಡಿತವನ್ನು ತಮ್ಮೊಂದಿಗೆ ಇಟ್ಟುಕೊಂಡಿರುವ ವಿಜಯೇಂದ್ರ ಅವರ ಮುಂದೆ ಬಹುದೊಡ್ಡ ಸವಾಲಿದ್ದು, 28 ಕ್ಷೇತ್ರಗಳ ಪೈಕಿ ಈ ಬಾರಿ ಹೆಚ್ಚಿನ ಸ್ಥಾನವನ್ನು ಬಿಜೆಪಿ ರಾಜ್ಯದಲ್ಲಿ ಗಳಿಸುವಂತೆ ಮಾಡುವ ಜವಾಬ್ದಾರಿ ಅವರ ಮೇಲಿದೆ.

ರಾಜ್ಯದಲ್ಲಿ ಕಳೆದ ಲೋಕಸಭೆ ಚುನಾವಣೆಯ ಮಾದರಿಯಂತೆ ಪರಿಸ್ಥಿತಿ ಇಲ್ಲ. ಆಡಳಿತದಲ್ಲಿ ಕಾಂಗ್ರೆಸ್ ಇದೆ. ಕಾಂಗ್ರೆಸ್ ಕೂಡ ಅಬ್ಬರದ ಪ್ರಚಾರ ಹಾಗೂ ಕಾರ್ಯತಂತ್ರದ ಮೂಲಕ ಹೆಚ್ಚಿನ ಸ್ಥಾನಗಳನ್ನು ಗಳಿಸುವ ತಂತ್ರಗಾರಿಕೆ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಗರಿಷ್ಠ ಸ್ಥಾನಗಳನ್ನು ಗೆದ್ದು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡುವ ಜವಾಬ್ದಾರಿ ವಿಜಯೇಂದ್ರ ಅವರದ್ದು. ಒಂದು ವೇಳೆ ಇದರಲ್ಲಿ ಯಶಸ್ವಿ ಆಗಿಲ್ಲ ಅಂದಲ್ಲಿ ಪಕ್ಷದಲ್ಲಿರುವ ವಿರೋ ಬಣಕ್ಕೆ ಇದೊಂದು ಅಸ್ತ್ರವಾಗಿ ದೊರಕುವ ಸಾಧ್ಯತೆ ಇದೆ.

RELATED ARTICLES

Latest News