ಮಥುರಾ-(ಉತ್ತರ ಪ್ರದೇಶ),ಫೆ.7- ಯಮುನಾ ಎಕ್ಸ್ಪ್ರೆಸ್ವೇನಲ್ಲಿ ಕಂಟೇನರ್ ಟ್ರಕ್ ಬಸ್ಗೆ ಡಿಕ್ಕಿ ಹೊಡೆದು, ನಿಲ್ಲಿಸಿದ್ದ ವಾಹನದ ಮುಂದೆ ನಿಂತಿದ್ದ ಪ್ರಯಾಣಿಕರ ಮೇಲೆ ಹರಿದ ಪರಿಣಾಮ ಆರು ಜನರು ಸಾವನ್ನಪ್ಪಿ, ಮತ್ತು ಮೂವರು ಗಾಯಗೊಂಡಿರುವ ಘಟನೆ ಮುಂಜಾನೆ ನಡೆದಿದೆ. ಮೃತರನ್ನು ಸೋನು (32), ದೇವೇಶ್ (32), ಅಸ್ಲಾಂ (27), ಸಂತೋಷ್ (45), ಅನುರಾಗ್ (27) ಮತ್ತು ಪ್ರಮೋದ್ (35) ಎಂದು ಗುರುತಿಸಲಾಗಿದೆ.
ಗಾಯಾಳುಗಳಲ್ಲಿ ಶಿವಕಾಂತ್ ದುಬೆ (46) ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಪ್ರಕಾಶ್ ಸಿಂಗ್ ಮತ್ತು ಎಸ್ಎಸ್ಪಿ ಶ್ಲೋಕ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಪ್ರಯಾಣಿಕರ ಸ್ಥಿತಿಯ ಬಗ್ಗೆ ವಿಚಾರಿಸಿ, ಸಾಧ್ಯವಿರುವ ಎಲ್ಲಾ ಸಹಾಯವನ್ನು ನೀಡುವ ಭರವಸೆ ಕೊಟ್ಟಿದ್ದಾರೆ.
ಸುರೇರ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಬೆಳಗಿನ ಜಾವ 2.45 ರ ಸುಮಾರಿಗೆ ಈ ಘಟನೆ ಸಂಭವಿಸಿದೆ.ಕಾನ್ಪುರ್ ದೇಹತ್ ಜಿಲ್ಲೆಯ ನೋಯ್ಡಾದಿಂದ ರಸೂಲಾಬಾದ್ಗೆ ಹೋಗುತ್ತಿದ್ದ ಬಸ್ ಯಮುನಾ ಎಕ್್ಸಪ್ರೆಸ್ವೇಯಲ್ಲಿ ಬದಿಯಿಂದ ಕಂಟೇನರ್ ಟ್ರಕ್ ಡಿಕ್ಕಿ ಹೊಡೆದಾಗ ಪ್ರಯಾಣಿಕರು ವಿಶ್ರಾಂತಿ ಪಡೆಯಲು ನಿಂತಿದ್ದರು. ನಿಲ್ಲಿಸಿದ್ದ ಬಸ್ನ ಮುಂದೆ ನಿಂತಿದ್ದ ಪ್ರಯಾಣಿಕರ ಮೇಲೂ ಅದು ಹರಿದಿದೆ ಎಂದು ಮಥುರಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶ್ಲೋಕ್ ಕುಮಾರ್ ತಿಳಿಸಿದ್ದಾರೆ.
ಮೃತರ ಕುಟುಂಬಗಳಿಗೆ ಮತ್ತು ಗಾಯಾಳುಗಳಿಗೆ ನಿಯಮಗಳ ಪ್ರಕಾರ ಪರಿಹಾರ ನೀಡಲಾಗುವುದು.ಪ್ರಕರಣ ದಾಖಲಿಸಲಾಗಿದ್ದು, ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.ಅಪಘಾತದ ನಂತರ ಪರಾರಿಯಾಗಿರುವ ಟ್ರಕ್ ಚಾಲಕನನ್ನು ಪತ್ತೆಹಚ್ಚಲು ಶೋಧ ಕಾರ್ಯವನ್ನು ಪೊಲೀಸರು ಮುಂದುವರೆಸಿದ್ದಾರೆ.
