ನವದೆಹಲಿ ,ಫೆ.2- ಭೂಮಿಯಲ್ಲಿನ ಅಪರೂಪದ ಅಯಸ್ಕಾಂತಗಳ ಉತ್ಪಾದನೆ-ಬಳಕೆ ಹಾಗೂ ಎಲೆಕ್ಟ್ರಿಕ್ ವಾಹನಗಳ ಉತ್ತೇಜನಕ್ಕೆ ಕೇಂದ್ರ ಬಜೆಟ್ನಲ್ಲಿ ದೊಡ್ಡ ಪ್ರಮಾಣದ ಘೋಷಣೆ ಮಾಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇವಿ ಬ್ಯಾಟರಿಗಳು ಮತ್ತು ಇವಿ ವಾಹನಗಳ ಚಲನಶೀಲತೆಯನ್ನು ಉತ್ತೇಜಿಸಲು ಬಜೆಟ್ನಲ್ಲಿ ಒತ್ತು ನೀಡಲಾಗಿದ್ದು, ಬ್ಯಾಟರಿ ತಯಾರಿಕೆಗೆ ಕಸ್ಟಮ್ಸೌ ಸುಂಕ ವಿನಾಯಿತಿಯನ್ನು ಮುಂದುವರಿಸಲಾಗಿದೆ. ಅಲ್ಲದೆ ಬ್ಯಾಟರಿ ಉತ್ಪಾದನೆ ಮತ್ತು ಇವಿ ಪೂರೈಕೆ ಸರಪಳಿಯನ್ನು ಬಲಪಡಿಸಲು ಲಿಥಿಯಂ-ಐಯಾನ್ ಕೋಶಗಳನ್ನು ತಯಾರಿಸಲು ಬಳಸುವ ಬಂಡವಾಳ ಸರಕುಗಳ ಮೇಲೆ ಮೂಲ ಕಸ್ಟಮ್ಸೌ ಸುಂಕ ವಿನಾಯಿತಿಯನ್ನು ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ.
ಸೌರ ಗಾಜಿನ ತಯಾರಿಕೆಯಲ್ಲಿ ಬಳಸುವ ಸೋಡಿಯಂ ಆಂಟಿಮೋನೇಟ್ ಆಮದಿನ ಮೇಲೆ ಮೂಲ ಅಬಕಾರಿ ಸುಂಕ ವಿನಾಯಿತಿ ನೀಡಲಾಗಿದೆ. ದೇಶೀಯ ಸೌರ ಉತ್ಪಾದನೆಯನ್ನು ಬಲಪಡಿಸಲು ಮತ್ತು ಇವಿ, ನವೀಕರಿಸಬಹುದಾದ ಪೂರೈಕೆ ಸರಪಳಿಗಳನ್ನು ಬೆಂಬಲಿಸಲು ಉತ್ತೇಜನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಒಡಿಶಾ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ರೇರ್ ಅರ್ಥ್ ಕಾರಿಡಾರ್ ಗಳನ್ನು ಸ್ಥಾಪಿಸುವ ಬಗ್ಗೆ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ಅಪರೂಪದ ಭೂಮಿಯ ಶಾಶ್ವತ ಮ್ಯಾಗ್ನೆಟ್ ಯೋಜನೆಯಡಿ ಸಚಿವ ಸಂಪುಟವು ಅನುಮೋದಿಷಸಿರುವ 7,280 ಕೋಟಿ ರೂ. ವೆಚ್ಚದ ಯೋಜನೆ ಮುಂದುವರಿದ ಭಾಗವಾಗಿ ರೇರ್ ಅರ್ಥ್ ಕಾರಿಡಾರ್ಗಳು ತಲೆ ಎತ್ತಲಿವೆ ಎಂದು ಅವರು ಹೇಳಿದ್ದಾರೆ.
ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ ಒತ್ತು: ಉಕ್ಕು ಸಚಿವಾಲಯಕ್ಕೆ ಸಂಬಂಧಿಸಿ ಉಕ್ಕು ವಲಯದ ಸುಸ್ಥಿರತೆಯನ್ನು ಉತ್ತೇಜಿಸುವುದು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸುವ ನಿಟ್ಟಿನಲ್ಲಿ ಬಜೆಟ್ ಒತ್ತು ನೀಡಿದೆ. ಉಕ್ಕು, ಸಿಮೆಂಟ್ ಮತ್ತು ಸಂಸ್ಕರಣಾಗಾರಗಳಿಂದ ಇಂಗಾಲದ ಹೊರಸೂಸುವಿಕೆ ವಲಯಗಳಿಗೆ 20,000 ಕೋಟಿ ರೂ.ಗಳ ಪ್ರಸ್ತಾವಿತ ಹೂಡಿಕೆಯೊಂದಿಗೆ ಇಂಗಾಲದ ನಿವಾರಣೆಗೆ ಒತ್ತು ಕೊಡಲಾಗಿದೆ ಎಂದಿದ್ದಾರೆ.
ಈ ಉಪಕ್ರಮವು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಯನ್ನು ಬೆಂಬಲಿಸುತ್ತದೆ. ಅದೇ ಸಮಯದಲ್ಲಿ ಭಾರತದ ಪ್ರಮುಖ ಕೈಗಾರಿಕೆಗಳು ಜಾಗತಿಕವಾಗಿ ಸ್ಪರ್ಧಾತಕ ಮತ್ತು ಪರಿಸರ ಜವಾಬ್ದಾರಿಯುತವಾಗಿ ಉಳಿಯುವುದನ್ನು ಖಚಿತಪಡಿಸುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
