ಲಖನೌ, ಏ.26: ಮಗ್ಗಿ ಬಾರದ ವರನನ್ನು ನಿರಾಕರಿಸಿದ ವಧು ಮದುವೆಯನ್ನೇ ರದ್ದುಗೊಳಿಸಿರುವ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ನಡೆದಿದೆ.
ಮದುವೆ ಸಮಾರಂಭದ ಸಮಯದಲ್ಲಿ ವರ ಕೆಲವು ವಿಚಿತ್ರ ನಡವಳಿಕೆಯನ್ನು ಪ್ರದರ್ಶಿಸಿದ್ದ. ಅದು ವಧುವಿನ ಮನಸ್ಸಿನಲ್ಲಿ ಅನುಮಾನಗಳನ್ನು ಹುಟ್ಟುಹಾಕಿದ್ದರಿಂದ ಆಕೆ ಅವನಿಗೆ ಗುಣಾಕಾರ ಮಗ್ಗಿ ಬಗ್ಗೆ ನೇರ ಪ್ರಶ್ನೆ ಮಾಡಿ, ಎರಡರ ಮಗ್ಗಿ ಹೇಳುವಂತೆ ಒತ್ತಡ ಹಾಕಿದ್ದಳು. ವರ ತಡವರಿಸಿದಾಗ ತಕ್ಷಣವೇ ಆತನನ್ನು ತಿರಸ್ಕರಿಸಿ ಮದುವೆ ಬೇಡ ಎಂದು ಹಠ ಹಿಡಿದಿದ್ದಾಳೆ.
ರಾತ್ರಿಯಿಡೀ ಕುಟುಂಬ ಸದಸ್ಯರು ವಧುವಿನ ಮನವೊಲಿಸಲು ಪ್ರಯತ್ನಿಸಿದರೂ, ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಪರಿಸ್ಥಿತಿ ಉಲ್ಬಣಗೊಂಡು ಪೊಲೀಸರ ಮಧ್ಯಪ್ರವೇಶಕ್ಕೆ ಕಾರಣವಾಗಿದೆ.
ಕೊನೆಗೆ ಎರಡೂ ಕುಟುಂಬಗಳು ಮದುವೆಗೆ ಮಾಡಿದ ವೆಚ್ಚಗಳಿಗೆ ಮರುಪಾವತಿಗೆ ಒತ್ತಾಯ ಮಾಡಿವೆ. ಅಂತಿಮವಾಗಿ ಎರಡೂ ಕಡೆಯವರು ಮದುವೆಗೆ ನೀಡಿದ್ದ ಆಭರಣಗಳು ಮತ್ತು ಉಡುಗೊರೆಗಳನ್ನು ಪರಸ್ಪರ ಹಿಂಪಡೆದುಕೊಂಡಿದ್ದಾರೆ.ಎರಡೂ ಕಡೆಯವರು ಒಪ್ಪಂದಕ್ಕೆ ಬಂದ ಕಾರಣ ಯಾವುದೇ ಔಪಚಾರಿಕ ಪ್ರಕರಣ ದಾಖಲಾಗಿಲ್ಲ.
