ನವದೆಹಲಿ,ಫೆ.1- ಜಾಗತಿಕ , ಆರ್ಥಿಕ ಕುಸಿತ ಹಾಗೂ ಕೋವಿಡ್ನಂತಹ ಕಾರಣಗಳಿಂದಾಗಿ ಹಳಿತಪ್ಪಿದ ಆರ್ಥಿಕತೆಯನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕ್ರಮೇಣ ಸರಿಯಾದ ಹಾದಿಗೆ ತರುವ ಪ್ರಯತ್ನ ಮಾಡಿದ್ದು, ಮುಂದಿನ ವರ್ಷದ ವಿತ್ತೀಯ ಕೊರತೆ ಶೇ.4.3ರ ಮಿತಿಯಲ್ಲಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2026-27ನೇ ಸಾಲಿಗೆ 53.5 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡನೆ ಮಾಡಿರುವ ನಿರ್ಮಲಾ ಸೀತಾರಾಮನ್ ಅವರು ವಿತ್ತೀಯ ಕೊರತೆಯನ್ನು ಕಳೆದ ವರ್ಷಕ್ಕಿಂತಲೂ ಶೇ.0.1ರಷ್ಟು ನಿಯಂತ್ರಣದಲ್ಲಿ ಇಡುವುದಾಗಿ ತಿಳಿಸಿದ್ದಾರೆ. ಪ್ರಸ್ತಕ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆ ಶೇ.4.4ರಷ್ಟಾಗುವ ಅಂದಾಜಿದೆ.
ರಾಜ್ಯಗಳಿಗೆ 1.4 ಲಕ್ಷ ಕೋಟಿ ತೆರಿಗೆ ವಿಕೇಂದ್ರೀಕರಣ ಘೋಷಿಸಿರುವ ನಿರ್ಮಲಾ ಸೀತಾರಾಮನ್ ಸುಮಾರು 28.7 ಲಕ್ಷ ಕೋಟಿ ರೂ.ಗಳ ತೆರಿಗೆ ಸ್ವೀಕೃತಿಯನ್ನು ಅಂದಾಜಿಸಿದ್ದಾರೆ. ಪ್ರಮುಖವಾಗಿ ಸಾಲದ ಹೊರೆಯನ್ನು ಕಡಿಮೆ ಮಾಡುವ ಬಹು ಮಹತ್ವದ ವಿಶ್ವಾಸವನ್ನು ವಿವೇಚನಾಯುತವಾಗಿ ಬಳಸುವುದಾಗಿ ಹೇಳಿದ್ದಾರೆ.
ವಿತ್ತೀಯ ಕೊರತೆಯನ್ನು ಸರ್ಕಾರಿ ವೆಚ್ಚಗಳು ಹಾಗೂ ಆದಾಯದ ನಡುವಿನ ವ್ಯತ್ಯಾಸ ಸರಿದೂಗಿಸುವ ಮೂಲಕ ನಿಯಂತ್ರಿಸುವುದಾಗಿ ಹೇಳಿದ್ದಾರೆ. ಕೇಂದ್ರದ ಸಾಲ 2026-27ರ ಬಳಿಕ ಕ್ರಮೇಣ ಕಡಿಮೆಯಾಗಲಿದೆ ಎಂದು ಕಳೆದ ಎರಡು ವರ್ಷಗಳ ಹಿಂದಿನ ಬಜೆಟ್ನಲ್ಲೇ ನಿರ್ಮಲಾ ಸೀತಾರಾಮನ್ ಹೇಳಿದ್ದರು.
2024ರಲ್ಲಿ ಕೇಂದ್ರ ಸರ್ಕಾರದ ಶೇ.57ರಷ್ಟು ಸಾಲವನ್ನು ಒಳಗೊಂಡು ದೇಶದ ಒಟ್ಟು ಸರ್ಕಾರಿ ಸಾಲ ಶೇ.85ರಷ್ಟಿತ್ತು. ನಿಯಮಗಳ ಪ್ರಕಾರ ವಿತ್ತೀಯ ಕೊರತೆಯನ್ನು ಶೇ.3-4ರ ಪ್ರಮಾಣದಲ್ಲಿ ನಿಯಂತ್ರಿಸಬೇಕಿದೆ. ಇದು ನಿಗದಿತ ಗುರಿಯ ಅಭಿವೃದ್ದಿ, ಭಾರತದ ಆರ್ಥಿಕತೆ ಚೇತರಿಕೆ ಹಾಗೂ ಆರ್ಥಿಕ ಸುಸ್ಥಿರತೆಯ ವಿಸ್ತರಣೆಗೆ ನೆರವಾಗಲಿದೆ.
2025 ಹೊಸ ಆದಾಯ ತೆರಿಗೆ ಕಾಯ್ದೆ ಏ.1ರಿಂದ ಜಾರಿಗೆ ಬರಲಿದೆ. ಇದಕ್ಕೆ ಸಂಬಂಧಪಟ್ಟ ನಿಯಮಗಳು ಮತ್ತು ತೆರಿಗೆ ಪಾವತಿ ವ್ಯವಸ್ಥೆಯನ್ನು ಶೀಘ್ರವೇ ಪ್ರಕಟಿಸುವುದಾಗಿ ಹೇಳಿದ್ದಾರೆ.
