ನವದೆಹಲಿ,ಜು.18- ಭಾರತದ ರಾಷ್ಟ್ರೀಯ ಗೀತೆಗಳಲ್ಲೊಂದಾದ ಮತ್ತು ದೇಶಭಕ್ತಿಯ ಸಂಕೇತವಾಗಿರುವ ವಂದೇ ಮಾತರಂಗೆ ವಿಶೇಷ ಕಾನೂನು ರಕ್ಷಣೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಗಟ್ಟುವಿಕೆ (ತಿದ್ದುಪಡಿ) ಮಸೂದೆಯನ್ನು ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ಈ ಮಸೂದೆಯು ಅಂಗೀಕಾರಗೊಂಡರೆ, ವಂದೇ ಮಾತರಂ ಗೀತೆಗೆ ಅವಮಾನ ಮಾಡಿದರೆ ಅಥವಾ ಹಾಡುವಾಗ ಅಡ್ಡಿಪಡಿಸಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಕಾನೂನು ರಕ್ಷಣೆ: ಪ್ರಸ್ತುತ ರಾಷ್ಟ್ರಗೀತೆ, ರಾಷ್ಟ್ರಧ್ವಜ ಮತ್ತು ಸಂವಿಧಾನಕ್ಕೆ ಇರುವಂತೆಯೇ, ವಂದೇ ಮಾತರಂಗೂ ಸಮಾನವಾದ ಕಾನೂನು ಸ್ಥಾನಮಾನ ಸಿಗಲಿದೆ. ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಗಟ್ಟುವಿಕೆ ಕಾಯ್ದೆ-1971ನ್ನು ತಿದ್ದುಪಡಿ ಮಾಡುವ ಮೂಲಕ ಈ ಹೊಸ ನಿಬಂಧನೆಯನ್ನು ಸೇರಿಸಲಾಗುತ್ತಿದೆ.
ಈ ಗೀತೆಯನ್ನು ಹಾಡುವಾಗ ಅಥವಾ ನುಡಿಸುವಾಗ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿದರೆ ಅಥವಾ ಅವಮಾನಿಸಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ. ರಾಜಕೀಯ ಸಂಘರ್ಷ ಈ ಮಸೂದೆಯು ಕೇವಲ ಕಾನೂನಾತಕ ಬದಲಾವಣೆಯಲ್ಲ, ಬದಲಾಗಿ ದಶಕಗಳ ಹಳೆಯ ರಾಜಕೀಯ ಸಂಘರ್ಷವನ್ನೂ ಮತ್ತೆ ಮುನ್ನೆಲೆಗೆ ತಂದಿದೆ.
1875ರಲ್ಲಿ ಬಂಕಿಮಚಂದ್ರ ಚಟ್ಟೋಪಾಧ್ಯಾಯರು ರಚಿಸಿದ ಈ ಗೀತೆಯ ಸಂಪೂರ್ಣ ಆವೃತ್ತಿಯನ್ನು ಹಾಡುವ ಕುರಿತು ಭಿನ್ನಾಭಿಪ್ರಾಯಗಳಿವೆ.ಕಳೆದ ಚಳಿಗಾಲದ ಅಧಿವೇಶನದಲ್ಲಿಯೂ ಇದೇ ವಿಷಯದ ಕುರಿತು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಕ್ಸಮರ ನಡೆದಿತ್ತು. ಇದೀಗ ಮಸೂದೆಯನ್ನು ಮಂಡಿಸುತ್ತಿರುವ ಸರ್ಕಾರ, ಇದು ರಾಷ್ಟ್ರೀಯ ಗೀತೆಗೆ ಅಧಿಕೃತ ಮಾನ್ಯತೆ ನೀಡುವ ಪ್ರಯತ್ನ ಎಂದು ಹೇಳುತ್ತಿದೆ.
ಆದರೆ, ವಿರೋಧ ಪಕ್ಷಗಳು ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ವಿಷಯ ಎಂದು ಬಲವಾಗಿ ವಿರೋಧಿಸುವ ಸಾಧ್ಯತೆಯಿದೆ.ಒಟ್ಟಾರೆಯಾಗಿ, ಈ ಮಸೂದೆಯು ಸಂಸತ್ತಿನಲ್ಲಿ ಭಾರೀ ಚರ್ಚೆಗೆ ವೇದಿಕೆಯಾಗುವುದಂತೂ ಖಚಿತ. 150ನೇ ವರ್ಷದ ಆಚರಣೆಯ ಹೊಸ್ತಿಲಲ್ಲಿರುವ ವಂದೇ ಮಾತರಂ, ಮತ್ತೊಮೆ ದೇಶದ ರಾಜಕೀಯ ವಾತಾವರಣವನ್ನು ಬಿಸಿಯೇರಿಸಿದೆ.
1937ರಲ್ಲಿ ಜವಾಹರಲಾಲ್ ನೆಹರು ಅವರ ನೇತೃತ್ವದ ಕಾಂಗ್ರೆಸ್, ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಬಳಸಲು ನಿರ್ಧರಿಸಿತ್ತು. ನಂತರದ ಚರಣಗಳಲ್ಲಿನ ಕೆಲವು ಪದಗಳು ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಹುದು ಎಂಬ ಆಕ್ಷೇಪಗಳೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ.
ಈ ನಿರ್ಧಾರವನ್ನು ಬಿಜೆಪಿ ತೀವ್ರವಾಗಿ ಟೀಕಿಸುತ್ತಾ ಬಂದಿದೆ. ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣಕ್ಕಾಗಿ ವಂದೇ ಮಾತರಂನ ಘನತೆಯನ್ನು ಕಡಿಮೆ ಮಾಡಿತು ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಈ ನಿರ್ಧಾರವು ಅಂದಿನ ಕಾಲದಲ್ಲಿ ವಿಭಜನೆಯ ಬೀಜಗಳನ್ನು ಬಿತ್ತಿತ್ತು ಎಂದು ಟೀಕಿಸಿದ್ದಾರೆ.
ಇತ್ತ ಕಾಂಗ್ರೆಸ್ ನಾಯಕರು, ಗೀತೆಯ ಚರಣಗಳನ್ನು ಮಿತಿಗೊಳಿಸುವ ನಿರ್ಧಾರವನ್ನು ಮಹಾತಗಾಂಧಿ ಮತ್ತು ರವೀಂದ್ರನಾಥ ಟ್ಯಾಗೋರ್ ಅವರಂತಹ ರಾಷ್ಟ್ರನಾಯಕರು ಸಮಾಲೋಚನೆ ನಡೆಸಿಯೇ ತೆಗೆದುಕೊಂಡಿದ್ದರು ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.
