Saturday, April 11, 2026
Homeರಾಷ್ಟ್ರೀಯಕಂಪೆನಿಯ ಉನ್ನತಾಧಿಕಾರಿಗೆ ಡಿಜಿಟಲ್‌ ಅರೆಸ್ಟ್‌ ಮಾಡಿ 32 ಕೋಟಿ ಸುಲಿಗೆ

ಕಂಪೆನಿಯ ಉನ್ನತಾಧಿಕಾರಿಗೆ ಡಿಜಿಟಲ್‌ ಅರೆಸ್ಟ್‌ ಮಾಡಿ 32 ಕೋಟಿ ಸುಲಿಗೆ

Digital arrest of a top official of a company and extortion of Rs 32 crore

ಬೆಂಗಳೂರು,ಮಾ.12- ಪ್ರತಿಷ್ಠಿತ ಕಂಪನಿಯ ಸಿಇಒ ಹುದ್ದೆಗೆ ಸರಿಸಮಾನವಾಗಿದ್ದ ಹಾಗೂ ತಾಂತ್ರಿಕವಾಗಿ ಪರಿಣಿತವಾಗಿದ್ದ ವ್ಯಕ್ತಿಯೊಬ್ಬರು ಡಿಜಿಟಲ್‌ ಅರೆಸ್ಟ್‌ ಜಾಲದಲ್ಲಿ ಸಿಲುಕಿ 32 ಕೋಟಿ ರೂ. ಕಳೆದುಕೊಂಡಿದ್ದಾರೆ ಎಂಬ ಆತಂಕಕಾರಿ ಸಂಗತಿಯನ್ನು ಡಾ.ಜಿ.ಪರಮೇಶ್ವರ್‌ ಅವರು ವಿಧಾ ನಪರಿಷತ್‌ಗೆ ತಿಳಿಸಿದರು.

ಜೆಡಿಎಸ್‌‍ ಶಾಸಕ ಗೋವಿಂದಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಡಿಜಿಟಲ್‌ ಅರೆಸ್ಟ್‌ ಹಾಗೂ ಸೈಬರ್‌ ಅಪರಾಧಗಳಿಂದ ದೊಡ್ಡ ಮಟ್ಟದಲ್ಲಿ ವಂಚನೆಯಾಗುತ್ತದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು.

ಸೈಬರ್‌ ಅಪರಾಧವನ್ನು ತಡೆಯಲು ನಮ ರಾಜ್ಯದಲ್ಲಿ ಆಗಿರುವಷ್ಟು ಕೆಲಸ ಬೇರೆ ರಾಜ್ಯಗಳಲ್ಲಿ ಆಗಿಲ್ಲ. ಸೈಬರ್‌ ಅಪರಾಧವನ್ನು ತಡೆಯಲು 33 ಠಾಣೆಗಳನ್ನು ಪ್ರಾರಂಭಿಸಲಾಗಿದೆ. ಕಾನ್‌ಸ್ಟೇಬಲ್‌ನಿಂದ ಇನ್‌ಸ್ಪೆಕ್ಟರ್‌ವರೆಗೂ ತರಬೇತಿ ನೀಡಿ ಆ ಠಾಣೆಗಳಿಗೆ ನಿಯೋಜಿಸಲಾಗುತ್ತಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಕುಳಿತ ವ್ಯಕ್ತಿಯೊಬ್ಬರು ಅಮೆರಿಕಾದಲ್ಲಿ ವಂಚನೆ ಮಾಡಿದ್ದಾರೆ. ಈ ರೀತಿಯ ವಂಚನೆಗೆ ಯಾವುದೇ ಗಡಿಯ ಮಿತಿ ಇಲ್ಲ. ತಂತ್ರಜ್ಞಾನದಲ್ಲಿ ದೊಡ್ಡ ಮಟ್ಟದಲ್ಲಿ ನೆಗೆಟಿವ್‌ ಬದಲಾವಣೆಯಾಗುತ್ತಿದ್ದು, ಯಾವುದೇ ರೀತಿಯ ಹಣಕಾಸಿನ ವ್ಯವಹಾರ ಮಾಡುವುದು ಕಷ್ಟಕರ ಪರಿಸ್ಥಿತಿ ಎದುರಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಸೈಬರ್‌ ಅಪರಾಧಕ್ಕೆ ಸಂಬಂಧಿಸಿದಂತೆ 42 ಸಾವಿರ ಖಾತೆಗಳನ್ನು ಸೀಜ್‌ ಮಾಡಲಾಗಿದೆ. 500 ಜನರನ್ನು ಬಂಧಿಲಾಗಿದೆ. ಬ್ಯಾಂಕ್‌ನಲ್ಲಿರುವ ನಮದೇ ಹಣ ಸುರಕ್ಷಿತವಾಗಿದೆಯೋ ಇಲ್ಲವೋ ಎಂಬ ಆತಂಕ ಕಾಡುವಂತಾಗಿದೆ. ಪ್ರಸಕ್ತ ವರ್ಷ 345 ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳು ದಾಖಲಾಗಿದ್ದು, 115 ಕೋಟಿ ರೂ. ವಂಚನೆಯಾಗಿದೆ ಎಂದು ಹೇಳಿದರು.

2022 ರಿಂದ 2024ರವರೆಗೆ ಸೈಬರ್‌ ಅಪರಾಧಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿತ್ತು. ರಾಜ್ಯಸರ್ಕಾರ ಇಂತಹ ಅಪರಾಧಗಳನ್ನು ನಿಯಂತ್ರಿಸಲು ಕೈಗೊಂಡ ದಿಟ್ಟ ಕ್ರಮದಿಂದಾಗಿ ನಿಯಂತ್ರಣವಾಗುತ್ತಿದ್ದು, ಅಪರಾಧಗಳ ಸಂಖ್ಯೆ ಇಳಿಮುಖವಾಗಿದೆ. 2025 ರಲ್ಲಿ 14899 ಸೈಬರ್‌ ಅಪರಾಧಗಳು ದಾಖಲಾಗಿದ್ದು, 10 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. 9 ಪ್ರಕರಣಗಳು ಖುಲಾಸೆಯಾಗಿವೆ. 2020 ರ ಫೆಬ್ರವರಿಯಲ್ಲಿ 2007 ಪ್ರಕರಣಗಳು ದಾಖಲಾಗಿವೆ ಎಂದು ಅವರು ಮಾಹಿತಿ ನೀಡಿದರು.

ಸೈಬರ್‌ ಅಪರಾಧಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಅವುಗಳನ್ನು ತಡೆಗಟ್ಟಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ರಾಜ್ಯದಲ್ಲಿ ಡಿಜಿಪಿ ಸೈಬರ್‌ ಕಮಾಂಡ್‌ ಹುದ್ದೆಯನ್ನು ಸೃಜಿಸಲಾಗಿದೆ. ಅಲ್ಲದೆ ಸಾರ್ವಜನಿಕರನ್ನು ಸಾಕಷ್ಟು ಜಾಗೃತಿಗೊಳಿಸುವ ಕಾರ್ಯವನ್ನೂ ಮಾಡಲಾಗುತ್ತಿದೆ. ಶಾಲಾ-ಕಾಲೇಜುಗಳಲ್ಲೂ ಕೂಡ ವಿದ್ಯಾರ್ಥಿಗಳಿಗೆ ಸೈಬರ್‌ ಅಪರಾಧ ಹಾಗೂ ಡಿಜಿಟಲ್‌ ಅರೆಸ್ಟ್‌ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

2021-22 ರಲ್ಲಿ 446 ಕೋಟಿ ರೂ. ವಂಚನೆಯಾಗಿದ್ದರೆ, ವಸೂಲಾಗಿದ್ದು 96 ಕೋಟಿ ರೂ. ಮಾತ್ರ. 2024 ರಲ್ಲಿ 2399 ಕೋಟಿ ರೂ. ವಂಚನೆಯಾಗಿದ್ದರೆ, ವಸೂಲಾಗಿದ್ದು 395 ಕೋಟಿ ರೂ. ಮಾತ್ರ. 2025ರಲ್ಲಿ 2200 ಕೋಟಿ ರೂ. ವಂಚನೆಯಾಗಿದ್ದರೆ 231 ಕೋಟಿ ರೂ. ಮಾತ್ರ ವಸೂಲಾಗಿದೆ ಎಂದು ಮಾಹಿತಿ ನೀಡಿದರು.

ಸುದೀರ್ಘ ಉತ್ತರ ನೀಡಿದ ಅವರು, 2024-25ನೇ ಸಾಲಿಗೆ ಹೋಲಿಸಿದರೆ ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳು ಇಳಿಮುಖವಾಗುತ್ತಿವೆ ಎಂದು ಹೇಳಿದರು.ಸಂತ್ರಸ್ತರ ದೂರುಗಳನ್ನು ಆಲಿಸಲು ಪ್ರತೀ ತಿಂಗಳ ಮೂರನೇ ಭಾನುವಾರವನ್ನು ಠಾಣಾ ವ್ಯಾಪ್ತಿಯಲ್ಲಿ ನೊಂದವರ ದಿನ ಎಂಬ ಕಾರ್ಯಕ್ರಮವನ್ನು ಆಯೋಜಿಲಾಗುತ್ತಿದೆ ಎಂದು ಅವರು ತಿಳಿಸಿದರು.

RELATED ARTICLES

Latest News