Homeರಾಷ್ಟ್ರೀಯದಕ್ಷಿಣ ರಾಜ್ಯಗಳಿಗೆ ನಿಧಿ ಹಂಚಿಕೆ, ರಾಜಕೀಯ ಪ್ರಾತಿನಿಧ್ಯ, ಗೌರವ ನೀಡಿ : ಕೇಂದ್ರಕ್ಕೆ ಸಿಎಂ ಡಿಕೆಶಿ...

ದಕ್ಷಿಣ ರಾಜ್ಯಗಳಿಗೆ ನಿಧಿ ಹಂಚಿಕೆ, ರಾಜಕೀಯ ಪ್ರಾತಿನಿಧ್ಯ, ಗೌರವ ನೀಡಿ : ಕೇಂದ್ರಕ್ಕೆ ಸಿಎಂ ಡಿಕೆಶಿ ಆಗ್ರಹ

"Karnataka seeks 'fairness in funds, voice and respect' for South": CM DK Shivakumar

ಮಹಾಬಲಿಪುರಂ, ಆ. 20- ದಕ್ಷಿಣ ರಾಜ್ಯಗಳಿಗೆ ನಿಧಿ ಹಂಚಿಕೆ, ರಾಜಕೀಯ ಪ್ರಾತಿನಿಧ್ಯ ಹಾಗೂ ಗೌರವದಲ್ಲಿ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಒತ್ತಾಯಿಸಿದ್ದಾರೆ.ತಮಿಳುನಾಡಿನ ಮಹಾಬಲಿಪುರಂನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ದಕ್ಷಿಣ ವಲಯ ಮಂಡಳಿಯ 31ನೇ ಸಭೆಯಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತ ದೇಶದ ಆರ್ಥಿಕತೆಯ ಪ್ರಮುಖ ಎಂಜಿನ್‌ ಆಗಿದೆ ಎಂದು ಹೇಳಿದರು.

ದಕ್ಷಿಣ ಭಾರತದ ಐದು ರಾಜ್ಯಗಳು ದೇಶದ ಒಟ್ಟು ಜನಸಂಖ್ಯೆಯ ಸುಮಾರು ಶೇ.20ರಷ್ಟನ್ನು ಹೊಂದಿದ್ದರೂ, ದೇಶದ ಜಿಡಿಪಿಗೆ ಸುಮಾರು ಶೇ.33ರಷ್ಟು ಕೊಡುಗೆ ನೀಡುತ್ತಿವೆ. ಕರ್ನಾಟಕ ಈ ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲಕ ಶಕ್ತಿಗಳಲ್ಲಿ ಒಂದಾಗಿದೆ ಎಂದು ಶಿವಕುಮಾರ್‌ ಹೇಳಿದರು.

ಕರ್ನಾಟಕ ದೇಶದ ಸಾಫ್‌್ಟವೇರ್‌ ರಫ್ತಿನಲ್ಲಿ ಶೇ.42ರಷ್ಟು ಪಾಲು ಹೊಂದಿದ್ದು, ಸುಮಾರು 1,100 ಜಾಗತಿಕ ಸಾಮರ್ಥ್ಯ ಕೇಂದ್ರಗಳಿಗೆ ಆತಿಥ್ಯ ನೀಡುತ್ತಿದೆ. 2019ರಿಂದ 2025ರ ಅವಧಿಯಲ್ಲಿ ದೇಶಕ್ಕೆ ಬಂದಿರುವ ವಿದೇಶಿ ನೇರ ಹೂಡಿಕೆಯ ಇಕ್ವಿಟಿ ಒಳಹರಿವಿನಲ್ಲಿ ಕರ್ನಾಟಕದ ಪಾಲು ಶೇ.21ಕ್ಕಿಂತ ಹೆಚ್ಚಿದೆ ಎಂದು ಅವರು ತಿಳಿಸಿದರು.

ದೇಶದ ಜನಸಂಖ್ಯೆಯಲ್ಲಿ ಕರ್ನಾಟಕದ ಪಾಲು ಶೇ.5.5ರಷ್ಟಿದ್ದರೂ, ದೇಶದ ಜಿಡಿಪಿಗೆ ರಾಜ್ಯವು ಸುಮಾರು ಶೇ.9ರಷ್ಟು ಕೊಡುಗೆ ನೀಡುತ್ತಿದೆ ಎಂದರು.ಱಱನಾವು ನಮ ಜವಾಬ್ದಾರಿಯನ್ನು ನಿರಂತರವಾಗಿ ನಿರ್ವಹಿಸುತ್ತಿದ್ದೇವೆ. ನಾವು ಕೊಡುಗೆ ನೀಡುತ್ತೇವೆ, ನಿರ್ಮಿಸುತ್ತೇವೆ, ಬೆಳೆಯುತ್ತೇವೆ ಮತ್ತು ದೇಶವನ್ನು ಮುನ್ನಡೆಸುತ್ತೇವೆ. ಪ್ರತಿಯಾಗಿ ಕೇಂದ್ರ ಸರ್ಕಾರದಿಂದ ನಾವು ಕೇಳುವುದು ಒಂದೇ. ನಾವು ಎಷ್ಟು ಹಂಚಿಕೊಳ್ಳುತ್ತೇವೆಯೋ, ಅಷ್ಟೇ ಕಾಳಜಿಯನ್ನು ನಮ ಮೇಲೂ ತೋರಿಸಿ ಎಂದು ಶಿವಕುಮಾರ್‌ ಹೇಳಿದರು.

ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ನ್ಯಾಯ ಬೇಕು:
15ನೇ ಹಣಕಾಸು ಆಯೋಗದ ಅವಧಿಯಲ್ಲಿ ವಿಭಜಿಸಬಹುದಾದ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕದ ಪಾಲು ಶೇ.4.7ರಿಂದ ಶೇ.3.6ಕ್ಕೆ ಇಳಿಕೆಯಾಗಿದ್ದು, ಇದರಿಂದ ಆರು ವರ್ಷಗಳಲ್ಲಿ ರಾಜ್ಯಕ್ಕೆ ಅಂದಾಜು 65,000 ಕೋಟಿ ನಷ್ಟವಾಗಿದೆ ಎಂದು ಅವರು ಹೇಳಿದರು.15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ 5,495 ಕೋಟಿ ವಿಶೇಷ ಅನುದಾನ ಹಾಗೂ 6,000 ಕೋಟಿ ರಾಜ್ಯ-ನಿರ್ದಿಷ್ಟ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ ಎಂದು ಅವರು ಆರೋಪಿಸಿದರು.

16ನೇ ಹಣಕಾಸು ಆಯೋಗದ ಅಡಿಯಲ್ಲಿ ಕರ್ನಾಟಕದ ಪಾಲು ಶೇ.4.131ಕ್ಕೆ ಏರಿಕೆಯಾಗಿರುವುದನ್ನು ಸ್ವಾಗತಿಸಿದ ಶಿವಕುಮಾರ್‌, ಅಂತಿಮವಾಗಿ ರಾಜ್ಯದ ಪಾಲನ್ನು ಮತ್ತೆ ಶೇ.4.7ಕ್ಕೆ ಏರಿಸಬೇಕು ಎಂದು ಆಗ್ರಹಿಸಿದರು. ಕರ್ನಾಟಕ ಜಿಎಸ್ಟಿ ಮತ್ತು ಆದಾಯ ತೆರಿಗೆಗೆ ಎರಡನೇ ಅತಿ ದೊಡ್ಡ ಕೊಡುಗೆ ನೀಡುವ ರಾಜ್ಯವಾಗಿದೆ. ಬೆಳವಣಿಗೆ ಮತ್ತು ಆದಾಯದಲ್ಲಿ ಉತ್ತಮ ಸಾಧನೆ ಮಾಡುವ ರಾಜ್ಯವನ್ನು ಪ್ರೋತ್ಸಾಹಿಸಬೇಕೇ ಹೊರತು ದಂಡಿಸಬಾರದು ಎಂದು ಹೇಳಿದರು.

ಕರ್ನಾಟಕಕ್ಕೆ ಹೆಚ್ಚುವರಿ ಯೋಜನೆಗಳ ಮೂಲಕ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ ಅವರು, ಬೆಂಗಳೂರುಮುಂಬೈ ಹೈಸ್ಪೀಡ್‌ ರೈಲು ಯೋಜನೆ, ಎಸ್‌‍ ಟಿ ಆರ್‌ ಆರ್‌ ದಕ್ಷಿಣ, ರಾಯಚೂರಿನಲ್ಲಿ ಎಐಐಎಂಎಸ್‌‍ ಹಾಗೂ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್‌ ನೀಡುವಂತೆ ಕೇಂದ್ರವನ್ನು ಕೋರಿದರು.

ದಕ್ಷಿಣ ರಾಜ್ಯಗಳ ರಾಜಕೀಯ ಧ್ವನಿ ಕುಗ್ಗಬಾರದು:
ಪ್ರಸ್ತಾವಿತ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿಚಾರದಲ್ಲಿಯೂ ಶಿವಕುಮಾರ್‌ ತಮ ನಿಲುವನ್ನು ಸ್ಪಷ್ಟಪಡಿಸಿದರು.ಜನಸಂಖ್ಯೆ ನಿಯಂತ್ರಣದಲ್ಲಿ ದಕ್ಷಿಣ ರಾಜ್ಯಗಳು ಯಶಸ್ವಿಯಾಗಿರುವುದೇ ಅವುಗಳ ರಾಜಕೀಯ ಪ್ರಾತಿನಿಧ್ಯ ಕಡಿಮೆಯಾಗಲು ಕಾರಣವಾಗಬಾರದು ಎಂದು ಅವರು ಹೇಳಿದರು.

ಯಾವುದೇ ದಕ್ಷಿಣ ರಾಜ್ಯ ತನ್ನ ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುವುದಿಲ್ಲ ಎಂಬ ಭರವಸೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ ಪ್ರಾತಿನಿಧ್ಯ ಎಂದರೆ ಕೇವಲ ಸಂಖ್ಯೆಯಲ್ಲ. ಅದು ರಾಜಕೀಯ ತೂಕ ಮತ್ತು ಧ್ವನಿಯ ವಿಚಾರವೂ ಹೌದು ಎಂದರು.ಜನಸಂಖ್ಯೆ ನಿಯಂತ್ರಣಕ್ಕೆ ದಕ್ಷಿಣ ರಾಜ್ಯಗಳು ಶಿಸ್ತು ಮತ್ತು ಯಶಸ್ಸಿನೊಂದಿಗೆ ಸ್ಪಂದಿಸಿವೆ. ಅದಕ್ಕಾಗಿ ಅವುಗಳಿಗೆ ಶಿಕ್ಷೆಯಾಗಬಾರದು ಎಂದು ಅವರು ಹೇಳಿದರು.

1971ರ ಜನಗಣತಿಯ ಆಧಾರವನ್ನು ಗೌರವಿಸಬೇಕು ಮತ್ತು ದಕ್ಷಿಣ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯವು ಸಂಖ್ಯೆಯಲ್ಲಿಯೂ ಹಾಗೂ ಪ್ರಮಾಣದಲ್ಲಿಯೂ ಕಡಿಮೆಯಾಗದಂತೆ ರಕ್ಷಿಸಬೇಕು ಎಂದು ಆಗ್ರಹಿಸಿದರು.

ಲೋಕಸಭಾ ಸ್ಥಾನಗಳ ಸಂಖ್ಯೆ ಈಗಿರುವಂತೆಯೇ ಇರಲಿ:
ದಕ್ಷಿಣ ವಲಯ ಮಂಡಳಿಯು ಪ್ರಸ್ತುತ ಇರುವ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಮುಂದುವರಿಸುವಂತೆ ನಿರ್ಣಯ ಕೈಗೊಳ್ಳಬೇಕು ಎಂದು ಶಿವಕುಮಾರ್‌ ಒತ್ತಾಯಿಸಿದರು. ಅದೇ ಸ್ಥಾನಗಳ ಸಂಖ್ಯೆಯೊಳಗೆ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಅವರು ಸಲಹೆ ನೀಡಿದರು.

ಮಹಿಳೆಯರು ತಮ ನ್ಯಾಯಯುತ ಪ್ರಾತಿನಿಧ್ಯಕ್ಕಾಗಿ ಬಹಳ ಕಾಲದಿಂದ ಕಾಯುತ್ತಿದ್ದಾರೆ. ಹೊಸ ಜನಗಣತಿಯವರೆಗೆ ಅವರು ಮೀಸಲಾತಿಗೆ ಕಾಯಬೇಕಾದ ಅಗತ್ಯವಿಲ್ಲ ಎಂದು ಹೇಳಿದರು. ಈ ವಿಚಾರದಲ್ಲಿ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು ಒಗ್ಗಟ್ಟಿನಿಂದ ಬೆಂಬಲ ನೀಡಬೇಕು ಎಂದು ಅವರು ಕರೆ ನೀಡಿದರು.

ನೀರಿನ ಹಂಚಿಕೆ ಬದಲು ನೀರಿನ ಸಹಕಾರ:
ಕಾವೇರಿ, ಕೃಷ್ಣಾ, ತುಂಗಭದ್ರಾ, ಪೆನ್ನಾರ್‌ ಮತ್ತು ಪಾಲಾರ್‌ ನದಿಗಳು ದಕ್ಷಿಣ ಭಾರತದ ಜೀವನಾಡಿಗಳಾಗಿವೆ ಎಂದು ಹೇಳಿದ ಶಿವಕುಮಾರ್‌, ನೀರಿನ ಹಂಚಿಕೆಯಿಂದ ನೀರಿನ ಸಹಕಾರದತ್ತ ಸಾಗಬೇಕು ಎಂದು ಕರೆ ನೀಡಿದರು.

ಜೂನ್‌ 25ರಂದು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ನಡುವೆ ನಡೆದ ಸಭೆಯನ್ನು ಉಲ್ಲೇಖಿಸಿದ ಅವರು, ಮಾತುಕತೆಯ ಮೂಲಕ ಅಂತಾರಾಜ್ಯ ನೀರಿನ ಸಮಸ್ಯೆಗಳನ್ನು ಬಗೆಹರಿಸಬಹುದು ಎಂಬುದನ್ನು ಮೂರು ರಾಜ್ಯಗಳು ತೋರಿಸಿವೆ ಎಂದರು. ತಮಿಳುನಾಡಿನ ಮಹಾಬಲಿಪುರಂನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌, ಕೇರಳ ಮುಖ್ಯಮಂತ್ರಿ ವಿ.ಡಿ.ಸತೀಶನ್‌, ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು, ತೆಲಂಗಾಣ ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಸೇರಿದಂತೆ ದಕ್ಷಿಣ ರಾಜ್ಯಗಳ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಕರ್ನಾಟಕದ ಐಟಿ-ಬಿಟಿ ಹಾಗೂ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಕೂಡ ಉಪಸ್ಥಿತರಿದ್ದರು.

RELATED ARTICLES
spot_img

Latest News