ಬೆಂಗಳೂರು, ಆ.20- ಚಿಕ್ಕಮಗಳೂರು ಜಿಲ್ಲೆಯಲ್ಲಿನ ಅರಣ್ಯ ಮೀಸಲು ಪ್ರದೇಶದಿಂದ ಹೊರತುಪಡಿಸಲಾದ 10 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಸರಿಯಾದ ಗಡಿ ಗುರುತಿಸುವ ಜಂಟಿ ಸರ್ವೆ ಕಾರ್ಯವನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ವಿಧಾನಸಭೆಗೆ ತಿಳಿಸಿದರು.
ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಾಕಿ ಇರುವ ಜಂಟಿ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಲು ಜಂಟಿ ಮೋಜಣಿ ತಂಡಗಳು, ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಹಾಗೂ ಟಾಸ್ಕ್ಫೋರ್ಸ್ನ ಅವಧಿಯನ್ನು ವಿಸ್ತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಮೂಡಿಗೆರೆ ಹಾಗೂ ಚಿಕ್ಕಮಗಳೂರು ತಾಲ್ಲೂಕುಗಳ ಅಧಿಸೂಚಿತ 55,989.69 ಹೆಕ್ಟೇರ್ ಅರಣ್ಯ ಮೀಸಲು ಪ್ರದೇಶದಿಂದ ಹೊರತುಪಡಿಸಲಾದ 10 ಸಾವಿರ ಹೆಕ್ಟೇರ್ ಜಮೀನುಗಳ ಕುರಿತಂತೆ ಜಿಲ್ಲಾಧಿಕಾರಿಗಳು ಜು.30ರಂದು ಪ್ರಗತಿ ವರದಿ ಸಲ್ಲಿಸಿದ್ದಾರೆ ಎಂದು ಹೇಳಿದರು.
ಕೊಪ್ಪ ಹಾಗೂ ಚಿಕ್ಕಮಗಳೂರು ಅರಣ್ಯ ವಿಭಾಗಗಳ ವ್ಯಾಪ್ತಿಯ 185 ಗ್ರಾಮಗಳ 1,527 ಸರ್ವೆ ನಂಬರ್ಗಳ ಪೈಕಿ 97 ಗ್ರಾಮಗಳ 797 ಸರ್ವೆ ನಂಬರ್ಗಳ ಜಂಟಿ ಮೋಜಣಿ ಕಾರ್ಯ ಪೂರ್ಣಗೊಂಡಿದೆ. 86 ಗ್ರಾಮಗಳ 730 ಸರ್ವೆ ನಂಬರ್ಗಳಿಗೆ ಸಂಬಂಧಿಸಿದ 30,764.04 ಹೆಕ್ಟೇರ್ ಪ್ರದೇಶದ ಜಂಟಿ ಮೋಜಣಿ ಕಾರ್ಯ ಬಾಕಿ ಇದೆ. ಇದುವರೆಗೆ ಶೇ.45ರಷ್ಟು ಜಂಟಿ ಸರ್ವೆ ಕಾರ್ಯ ಪೂರ್ಣಗೊಂಡಿದೆ ಎಂದು ಸಚಿವರು ತಿಳಿಸಿದರು.
