ಲಕ್ನೋ, ಆ.26 (ಪಿಟಿಐ)- ಹಿಜಾಬ್ ವಿವಾದದ ನಡುವೆಯೇ, ಇಂತಹ ವಿಷಯಗಳನ್ನು ಸ್ಥಳೀಯ ಮಟ್ಟದಲ್ಲೇ ಪರಿಹರಿಸಿಕೊಳ್ಳಬೇಕು ಹಾಗೂ ಸಂಕುಚಿತ ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲಾದ ಸಂವಿಧಾನವು ಎಲ್ಲ ಧರ್ಮಗಳು ಮತ್ತು ಸಮುದಾಯಗಳಿಗೆ ಸೇರಿದ ಜನರಿಗೆ ಸಮಾನ ಹಕ್ಕುಗಳನ್ನು ಖಾತರಿಪಡಿಸುತ್ತದೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
ಧಾರ್ಮಿಕ ಗ್ರಂಥಗಳು, ಆಚರಣೆಗಳು ಮತ್ತು ನಂಬಿಕೆಗಳಿಗೆ ಅನುಗುಣವಾಗಿ ಶಾಂತಿಯುತ ಹಾಗೂ ಸಂತೋಷದ ಜೀವನ ನಡೆಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದ್ದರಿಂದ ಎಲ್ಲರೂ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳ ಪಾವಿತ್ರ್ಯವನ್ನು ಗೌರವಿಸಬೇಕು ಎಂದು ಅವರು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಶಾಲೆಗಳಲ್ಲಿ ಹಿಜಾಬ್ ಧರಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಯಾವತಿ, ಇಂತಹ ವಿಷಯಗಳಿಗೆ ಅನಗತ್ಯ ಪ್ರಾಮುಖ್ಯತೆ ನೀಡುವ ಬದಲು ಶಾಲಾ ಆಡಳಿತ ಮಂಡಳಿ, ಸರ್ಕಾರ ಮತ್ತು ಆಡಳಿತದ ನಡುವಿನ ಪರಸ್ಪರ ತಿಳುವಳಿಕೆ ಹಾಗೂ ವಿವೇಚನೆಯ ಮೂಲಕ ಸ್ಥಳೀಯ ಮಟ್ಟದಲ್ಲೇ ಪರಿಹರಿಸಬೇಕು ಎಂದು ಹೇಳಿದ್ದಾರೆ.
ಇಂತಹ ವಿವಾದಗಳನ್ನು ನ್ಯಾಯಾಲಯಗಳಲ್ಲಿ ಕಾನೂನು ಸಂಘರ್ಷಗಳಾಗಿ ಪರಿವರ್ತಿಸುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಬಹುದು. ಇಂತಹ ವಿವಾದಗಳ ನೆಪದಲ್ಲಿ ಯಾರಿಗೂ ಸಂಕುಚಿತ ರಾಜಕೀಯ ನಡೆಸಲು ಅವಕಾಶ ಸಿಗದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.
ಬಿಎಸ್ಪಿ ಅಂಬೇಡ್ಕರ್ವಾದಿ ಪಕ್ಷವಾಗಿದ್ದು, ಸಮಾಜದ ಎಲ್ಲ ವರ್ಗಗಳಿಗೂ ಗೌರವ, ಅವರ ಜೀವನ, ಆಸ್ತಿ ಮತ್ತು ಧರ್ಮದ ಸುರಕ್ಷತೆಯನ್ನು ಖಾತರಿಪಡಿಸುವ ಬದ್ಧತೆ ಹೊಂದಿದೆ ಎಂದು ಮಾಯಾವತಿ ಹೇಳಿದ್ದಾರೆ. ಯಾವುದೇ ಧರ್ಮ, ಧಾರ್ಮಿಕ ಗ್ರಂಥ ಅಥವಾ ನಂಬಿಕೆಗಳಿಗೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳ ಕುರಿತು ಜನರು ಪ್ರಚೋದನಾತ್ಮಕವಾಗಿ ಪ್ರತಿಕ್ರಿಯಿಸುವುದನ್ನು ತಪ್ಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಪ್ರಯಾಗ್ರಾಜ್ನ ಖಾಸಗಿ ಶಾಲೆಯೊಂದರ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಶಾಲಾ ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದ ಕೆಲವೇ ದಿನಗಳ ಬಳಿಕ ಮಾಯಾವತಿ ಈ ಹೇಳಿಕೆ ನೀಡಿದ್ದಾರೆ.
