ಸೋಮನಾಥ್(ಗುಜರಾತ್),ಮೇ 11-ದೇಶದ ಸ್ವಾಭಿಮಾನಕ್ಕಿಂತ ತುಷ್ಟೀಕರಣ ರಾಜಕಾರಣಕ್ಕೆ ಆದ್ಯತೆ ನೀಡುವ ಕೆಲವು ಶಕ್ತಿಗಳು ಇನ್ನೂ ಭಾರತದಲ್ಲಿ ಸಕ್ರಿಯವಾಗಿವೆ ಎಂದು ಪ್ರಧಾನಿ ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ವೇಳೆಯೂ ಇದೇ ವಿರೋಧದ ಮನೋಭಾವ ವ್ಯಕ್ತವಾಗಿತ್ತು ಎಂದು ಅವರು ಹೇಳಿದರು.
ಗುಜರಾತ್ನ ಸೋಮನಾಥ್ನಲ್ಲಿ ಆಯೋಜಿಸಲಾದ ಸೋಮನಾಥ್ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸರ್ದಾರ್ ವಲ್ಲಬಾಯಿ ಪಟೇಲ್ ಹಾಗೂ ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ದೇವಸ್ಥಾನದ ಪುನರ್ನಿರ್ಮಾಣಕ್ಕಾಗಿ ಅಪಾರ ಪ್ರಯತ್ನ ಮಾಡಿದ್ದರು ಎಂದು ಹೇಳಿದರು.
ಆದರೆ ಅಂದಿನ ಪ್ರಧಾನಿ ನೆಹರು ಅವರಿಂದ ವಿರೋಧ ಎದುರಿಸಬೇಕಾಯಿತು ಎಂದು ಮೋದಿ ಆರೋಪಿಸಿದರು.ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ಪುನರ್ನಿರ್ಮಿತ ಸೋಮನಾಥ ದೇವಸ್ಥಾನದ ಉದ್ಘಾಟನೆಗೆ 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಅಮೃತ ಮಹೋತ್ಸವವನ್ನು ಆಯೋಜಿಸಲಾಗಿತ್ತು.
ವಿಶ್ವದ ಯಾವುದೇ ಶಕ್ತಿಗೂ ಭಾರತವನ್ನು ತಲೆಬಾಗಿಸಲು ಅಥವಾ ಒತ್ತಡಕ್ಕೆ ಮಣಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.ಮೇ 11 ಭಾರತದ ಇತಿಹಾಸದಲ್ಲೂ ಮಹತ್ವದ ದಿನವಾಗಿದ್ದು, ಇದೇ ದಿನ 1998ರಲ್ಲಿ ಭಾರತ ಅಣುಪರೀಕ್ಷೆ ನಡೆಸಿತ್ತು ಎಂದು ಅವರು ನೆನಪಿಸಿದರು.
ವಿದೇಶಿ ಆಕ್ರಮಣಕಾರರು ರಾಷ್ಟ್ರದ ಗುರುತಿನ ಸಂಕೇತಗಳಾದ ಅನೇಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ಧ್ವಂಸಗೊಳಿಸಿದ ಉದಾಹರಣೆಗಳು ಜಗತ್ತಿನಾದ್ಯಂತ ಇವೆ. ಅವಕಾಶ ಸಿಕ್ಕಾಗಲೆಲ್ಲಾ ಜನರು ತಮ ಪರಂಪರೆಯನ್ನು ಪುನಃ ನಿರ್ಮಿಸಿ ಗೌರವವನ್ನು ಉಳಿಸಿಕೊಂಡಿದ್ದಾರೆ ಎಂದು ಮೋದಿ ಹೇಳಿದರು.
ಆದರೆ ನಮ ದೇಶದಲ್ಲಿ ರಾಷ್ಟ್ರೀಯ ಸ್ವಾಭಿಮಾನಕ್ಕೆ ಸಂಬಂಧಿಸಿದ ವಿಷಯಗಳ ಮೇಲೆಯೂ ರಾಜಕಾರಣ ನಡೆಯಿತು. ಸೋಮನಾಥ ದೇವಸ್ಥಾನವೇ ಅದಕ್ಕೆ ಪ್ರಮುಖ ಉದಾಹರಣೆ ಎಂದು ಅವರು ಹೇಳಿದರು.ರಾಮಮಂದಿರ ನಿರ್ಮಾಣದ ವೇಳೆ ಕೂಡ ಇದೇ ರೀತಿಯ ಮನೋಭಾವ ಕಂಡುಬಂದಿತ್ತು. ಇಂತಹ ಸಂಕುಚಿತ ರಾಜಕಾರಣದ ವಿರುದ್ಧ ನಾವು ಎಚ್ಚರಿಕೆಯಿಂದಿರಬೇಕು ಎಂದು ಪ್ರಧಾನಿ ಹೇಳಿದರು.
ಅಭಿವೃದ್ಧಿ ಮತ್ತು ಪರಂಪರೆಯನ್ನು ಸಮಾನವಾಗಿ ಅಳವಡಿಸಿಕೊಂಡು ಮುಂದೆ ಸಾಗಬೇಕು. ನಮ ಸಾಂಸ್ಕೃತಿಕ ಕೇಂದ್ರಗಳ ನಿರ್ಲಕ್ಷ್ಯವೇ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದರು.ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿ ಮೋದಿ ಸೋಮನಾಥ ದೇವಸ್ಥಾನದಲ್ಲಿ ಮಹಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿದರು.
