ನವದೆಹಲಿ, ಆ.16- ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ಪ್ರಧಾನಿ ನರೇಂದ್ರ ಮೋದಿ ಇಂದು ಅವರಿಗೆ ಗೌರವ ನಮನ ಸಲ್ಲಿಸಿದರು. ವಾಜಪೇಯಿ ಅವರು ಅಪೂರ್ವ ದೃಷ್ಟಿಕೋನ ಹೊಂದಿದ್ದ ಅಸಾಧಾರಣ ಮುತ್ಸದ್ದಿ ನಾಯಕನಾಗಿದ್ದು, ದೇಶ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಮೋದಿ ಸ್ಮರಿಸಿದರು.
ಪ್ರಧಾನಿ ಹುದ್ದೆ ಅಲಂಕರಿಸಿದ ಮೊದಲ ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ. ಅವರು 1924ರ ಡಿಸೆಂಬರ್ 25ರಂದು ಗ್ವಾಲಿಯರ್ನಲ್ಲಿ ಜನಿಸಿದ್ದು, 2018ರ ಆಗಸ್ಟ್ 16ರಂದು ನವದೆಹಲಿಯಲ್ಲಿ ನಿಧನರಾದರು.
‘ಅಟಲ್ ಜಿ ಅವರ ಪುಣ್ಯತಿಥಿಯಂದು ಅವರನ್ನು ಸ್ಮರಿಸುತ್ತೇನೆ. ಅಸಾಧಾರಣ ದೃಷ್ಟಿಕೋನದಿಂದ ಆಶೀರ್ವದಿಸಲ್ಪಟ್ಟ ಮಹಾನ್ ಮುತ್ಸದ್ದಿ ನಾಯಕರಾಗಿದ್ದ ಅವರು, ನಮ್ಮ ರಾಷ್ಟ್ರದ ಸೇವೆಗೆ ತಮ್ಮ ಜೀವನವನ್ನು ಸಮರ್ಪಿಸಿದ್ದರು’ ಎಂದು ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಾಜಪೇಯಿ ಅವರ ಮಾತುಗಳು ಹಾಗೂ ಕಾರ್ಯಗಳು ಹಲವು ತಲೆಮಾರುಗಳಿಗೆ ಸ್ಫೂರ್ತಿ ನೀಡಿವೆ. ಅವರ ನಾಯಕತ್ವ ದೇಶವನ್ನು ಮತ್ತಷ್ಟು ಬಲಪಡಿಸಿತು ಎಂದು ಪ್ರಧಾನಿ ಹೇಳಿದರು. ಉತ್ತಮ ಆಡಳಿತ ಮತ್ತು ಸಾರ್ವಜನಿಕ ಕಲ್ಯಾಣದ ಮೇಲಿನ ವಾಜಪೇಯಿ ಅವರ ಗಮನವು ಸದಾ ನಮಗೆ ಮಾರ್ಗದರ್ಶನ ನೀಡುತ್ತಲೇ ಇರುತ್ತದೆ ಎಂದು ಮೋದಿ ಸ್ಮರಿಸಿದರು.
