ಬೆಂಗಳೂರು, ಜು.6- ಕರ್ನಾಟಕದಲ್ಲಿ ಆರಂಭದಿಂ ದಲೂ ಎಸ್ಐಆರ್ ಪ್ರಕ್ರಿಯೆಯನ್ನು ಅಕ್ರಮವಾಗಿ ಕಾನೂನುಬಾಹಿರವಾಗಿ ನಡೆಸುತ್ತಿರುವ ಬಗ್ಗೆ ದಾಖಲೆ ಸಹಿತ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿದ್ದೇವೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರಿಗೆ ಎನ್ಡಿಎ ನಿಯೋಗ ದೂರು ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗತ್ಯಬಿದ್ದರೆ ಎನ್ಡಿಎ ಮಿತ್ರಪಕ್ಷಗಳು ಒಟ್ಟಾಗಿ ಆಯೋಗಕ್ಕೆ ದೂರು ನೀಡುತ್ತೇವೆ ಎಂದರು.
ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ಆರಂಭವಾದ ದಿನದಂದಲೂ ಅಕ್ರಮ ನಡೆಸಲು ಪ್ರೋತ್ಸಾಹಿಸಲಾಗುತ್ತಿದೆ. ಇದುವರೆಗೂ ನಡೆದಿರುವ ಅಕ್ರಮಗಳ ದಾಖಲೆಯನ್ನು ದೂರಿನ ಜೊತೆ ನೀಡಿದ್ದೇವೆ. ರಾಜ್ಯಸರ್ಕಾರ ಯಾವ ರೀತಿ ತನ್ನ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಮಾಹಿತಿಯನ್ನು ಒದಗಿಸಿದ್ದೇವೆ ಎಂದು ಅವರು ಹೇಳಿದರು.
ಆದರೆ ಮುಖ್ಯಮಂತ್ರಿಗಳು ಜಾಣ ಕಿವುಡಾಗಿದ್ದಾರೆ. ಕೇಂದ್ರ ಸರ್ಕಾರ ಹಾಗೆ ಮಾಡಿದೆ, ಹೀಗೆ ಮಾಡಿದೆ ಎಂಬ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ನಾವು ದಾಖಲೆಸಹಿತ ಸತ್ಯಾಂಶವನ್ನು ದೂರಿನಲ್ಲಿ ನೀಡಿದ್ದೇವೆ. ಎಸ್ಐಆರ್ ಬಗ್ಗೆ ಸರ್ಕಾರ ಎಲ್ಲಿ ಜಾಗೃತಿ ಮೂಡಿಸುತ್ತಿದೆ?, ಅಕ್ರಮವಾಗಿ ಮಾಡುವುದು ಜಾಗೃತಿಯೇ?, ಎಸ್ಐಆರ್ ಅನ್ನು ರಾಜ್ಯಸರ್ಕಾರದ ಅಧಿಕಾರಿ ಸಿಬ್ಬಂದಿ ಮಾಡಬೇಕಲ್ಲವೇ? ಎಂದು ಪ್ರಶ್ನಿಸಿದರು.
