ಮಂಗಳೂರು, ಜ.3-ಎಲ್ಲರೂ ರಾಜಕೀಯ ಮಾಡಬೇಕು. ಆದರೆ ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ, ಪರಸ್ಪರ ಏಕವಚನ ಬಳಕೆ ಕೂಡ ಸಮರ್ಥನೀಯವಲ್ಲ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.ನಗರದಲ್ಲಿ ಆಯುಷ್ ಹಬ್ಬ 20205-26 ಸಾಲಿನ ಕಾರ್ಯಕ್ರಮಕ್ಕೆ ಕರ್ಟನರೈಸರ್ ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಳ್ಳಾರಿಯಲ್ಲಿ ಬ್ಯಾನರ್ ವಿಚಾರಕ್ಕೆ ಗಲಾಟೆಯಾಗಿರುವುದು ಸರಿಯಲ್ಲ ಎಂದರು.
ಬಳ್ಳಾರಿಯಲ್ಲಿ ಇಬ್ಬರೂ ಶಾಸಕರಾಗಿದ್ದಾರೆ. ರಾಜಕಾರಣ ಮಾಡಬೇಕು. ಆದರೆ ಸೀನಿಮಾ ರೀತಿಯಲ್ಲಿ ದ್ವೇಷದ ರಾಜಕಾರಣ ಮಾಡುವುದು ಒಳ್ಳೆಯದಲ್ಲ. ಇಂತಹ ಘಟನೆಗಳು ಜನ ಪ್ರತಿನಿಧಿಗಳ ಮೇಲಿನ ಗೌರವವನ್ನು ಕಡಿಮೆ ಮಾಡುತ್ತವೆ. ಕೆಲವರ ನಡವಳಿಕೆಯಿಂದ ಎಲ್ಲಾ ರಾಜಕಾರಣಿಗಳಿಗೂ ಕಪ್ಪು ಚುಕ್ಕೆ ಬರುತ್ತದೆ ಎಂದು ಎಚ್ಚರಿಸಿದರು.
ಯುವ ಶಾಸಕರು ಸಂಯಮದಿಂದ ನಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಅವರ ನಡವಡಕೆಯ ಕುರಿತು ಎಚ್ಚರಿಕೆ ನೀಡಿದ ಸಭಾಧ್ಯಕ್ಷರು, ಸಮಾಜದ ನೆಮದಿ ಕಾಪಾಡುವ ಸಲುವಾಗಿ ಜನರು ನಮನ್ನು ಚುನಾಯಿಸಿ ಕಳುಹಿಸಿದ್ದಾರೆ. ನಾವೇ ಮುಂದೆ ನಿಂತು ಗಲಾಟೆ ಮಾಡಿಸಿದರೆ, ಅದು ಸಮರ್ಥನೀಯವಲ್ಲ ಎಂದರು.
ರಾಜಕಾರಣಿಗಳಿಗೆ ಹಿಂದಿನ ದಿನಗಳಲ್ಲಿ ಒಳ್ಳೆಯ ಹೆಸರಿತ್ತು. ಆ ಸಂಸ್ಕೃತಿಯನ್ನು ನಾವು ಮರಳಿ ಪಾಲಿಸಬೇಕಿದೆ. ಬಳ್ಳಾರಿ ಘಟನೆಗೆ ಹೊಣೆ ಮಾಡಿ ಬಳ್ಳಾರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತ್ತು ಮಾಡಲು ಸರ್ಕಾರಕ್ಕೆ ತನ್ನದೇ ಆದ ಕಾರಣ ಇರಬಹುದು. ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಹುದ್ದೆಯ ರೇಸ್ನಲ್ಲಿ ಸದ್ಯಕ್ಕೆ ನಾನಿಲ್ಲ. ಇನ್ನೂ 20 ವರ್ಷ ಕಾಲಾವಕಾಶವಿದೆ. ಜನರು ಮತ್ತೆ ನನ್ನನ್ನು ಗೆಲ್ಲಿಸಿ ಶಾಸಕನನ್ನಾಗಿ ಮಾಡಲಿ. ಅನಂತರ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಪರಿಶೀಲಿಸಬಹುದು ಎಂದರು.
ದ್ವೇಷ ಭಾಷಣ ಕಾಯಿದೆ ಸಮರ್ಥನೀಯವಾಗಿದೆ. ಸಮಾಜದಲ್ಲಿ ತಾವೇ ಬಾಯಿಗೆ ಬಂದಂತೆ ಮಾತನಾಡಿ ಶಾಂತಿ ದಡುವುದು, ಅನಂತರ ಪರಿಸ್ಥಿತಿ ತಿಳಿಗೊಳಿಸುತ್ತೇವೆ ಎಂದು ಓಡಾಡುವ ಜನರನ್ನು ಕಾಣುತ್ತೇವೆ. ಅದಕ್ಕೆ ಕಡಿವಾಣ ಹಾಕಲು ಅಗತ್ಯ ಕಾನೂನು ರೂಪಿಸಲಾಗಿದೆ ಎಂದು ಹೇಳಿದರು.
