ಬೆಂಗಳೂರು,ಮಾ.2- ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜಕೀಯ ಜೀವನ ಪ್ರವೇಶಿಸಿ 50 ವರ್ಷ ಭರ್ತಿಯಾದ ಹಿನ್ನೆಲೆಯಲ್ಲಿ ಸಿದ್ದರಾಮೋತ್ಸವ ಮಾದರಿಯಲ್ಲಿ ಬೃಹತ್ ಸಮಾವೇಶ ನಡೆಸುವುದಕ್ಕೆ ರಾಜ್ಯ ಬಿಜೆಪಿ ಮುಂದಾಗಿದ್ದು. ಈ ಮೂಲಕ ಪಕ್ಷದ ಒಳಗೆ ಹಾಗೂ ಹೊರಗೆ ಮಹತ್ವದ ರಾಜಕೀಯ ಸಂದೇಶ ಸಾರುವ ಪ್ರಯತ್ನಗಳು ನಡೆಯುತ್ತಿವೆ.
ಕರ್ನಾಟಕ ರಾಜಕೀಯದಲ್ಲಿ ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲ ಪ್ರಭಾವ ಬೀರಿದ ನಾಯಕನಾಗಿ ಯಡಿಯೂರಪ್ಪ ಅವರ ಹೆಸರು ಅಚ್ಚಳಿಯದೆ ಉಳಿದಿದೆ. ಈಗ ಅವರ ರಾಜಕೀಯ ಜೀವನಕ್ಕೆ 50 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ, ಬಿಜೆಪಿ ಅವರನ್ನು ಮತ್ತೆ ಕೇಂದ್ರಬಿಂದುವಾಗಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಇದು ಕೇವಲ ಸ್ಮರಣೋತ್ಸವವಲ್ಲ, 2028ರ ರಾಜಕೀಯ ಸಮೀಕರಣಗಳ ಪೂರ್ವಭಾವಿ ಸಿದ್ಧತೆಯಾಗಿದೆ ಎನ್ನುವುದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಅಭಿಪ್ರಾಯವಾಗಿದೆ. 2021ರಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ನಂತರ ಬಿಜೆಪಿ 2023ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿತ್ತು.
ಆ ಬಳಿಕ ಪಕ್ಷದೊಳಗಿನ ನಾಯಕತ್ವ ಗೊಂದಲ, ಮತಬ್ಯಾಂಕ್ ಕುಸಿತ ಹಾಗೂ ಲಿಂಗಾಯತ ಸಮುದಾಯದ ಅಸಮಾಧಾನಗಳು ಸ್ಪಷ್ಟವಾಗಿ ಗೋಚರಿಸಿತು. ಈಗ ಪಕ್ಷವು ಬಿಎಸ್ವೈ ಮಂತ್ರವನ್ನು ಮತ್ತೆ ಪ್ರಯೋಗಿಸಲು ಸಜ್ಜಾಗಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಚಿತ್ರದುರ್ಗದಲ್ಲಿ ಮಹಾಸಮಾವೇಶ ನಡೆಸಲು ಯೋಜನೆ ರೂಪಿಸಲಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ರಾಷ್ಟ್ರೀಯ ನಾಯಕರು ಈ ಸಮಾವೇಶದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಇದು ಕೇವಲ ಗೌರವ ಸಮಾರಂಭವಲ್ಲ. ಲಿಂಗಾಯತ ಮತಬ್ಯಾಂಕ್ನ್ನು ಪುನಃ ಒಗ್ಗೂಡಿಸುವ ರಾಜಕೀಯ ತಂತ್ರವಾಗಿದೆ.
ಯಡಿಯೂರಪ್ಪ ಅವರು ವೀರಶೈವ-ಲಿಂಗಾಯತ ಸಮುದಾಯದ ಪ್ರಮುಖ ಮುಖಂಡರಾಗಿ ದಶಕಗಳಿಂದ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲೂ ಅವರ ಪಾತ್ರ ಮಹತ್ವದ್ದು. ಅವರ ವೈಯಕ್ತಿಕ ಜನಮನ್ನಣೆ ಮತ್ತು ಸಂಘಟನೆ ಶಕ್ತಿ ಇನ್ನೂ ಪಕ್ಷಕ್ಕೆ ಬಲವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ನಡೆಯುತ್ತಿರುವ ಪೈಪೋಟಿ, ಆಡಳಿತದ ವಿರುದ್ಧ ಹೆಚ್ಚುತ್ತಿರುವ ಅಸಮಾಧಾನ – ಇವುಗಳನ್ನೆಲ್ಲವನ್ನೂ ಬಿಜೆಪಿ ಅವಕಾಶವಾಗಿ ಮಾರ್ಪಾಡಾಗಲಿದೆ.
ಯಡಿಯೂರಪ್ಪ ಅವರು ವಿಧಾನಸಭೆ ಹೊರಗಿನಿಂದ ಪರಿಣಾಮಕಾರಿ ವಿರೋಧ ಪಕ್ಷದ ಮುಖವಾಗಿ ಹೊರಹೊಮಿದರೆ, ಅದು 2028ರ ಚುನಾವಣೆಗೆ ಸಹಾಯಕವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಈಗ ರಾಜ್ಯ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಭವಿಷ್ಯದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅವರ ಹೆಸರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಯಡಿಯೂರಪ್ಪ ಅವರ ಈ 50 ವರ್ಷದ ಸಮಾರಂಭ ಮುಂದಿನ ಪೀಳಿಗೆಯ ಬದಲಾವಣೆಯ ಸಂಕೇತವಾಗಿಯೂ ಕಾಣಬಹುದು.
ಒಟ್ಟಾರೆ ಯಡಿಯೂರಪ್ಪನವರ ರಾಜಕೀಯ ಜೀವನದ ಕೇವಲ 50 ವರ್ಷಗಳ ಆಚರಣೆ, ಗೌರವಪೂರ್ವ ಕಾರ್ಯಕ್ರಮವಷ್ಟೇ ಅಲ್ಲದೆ, 2028ರ ರಾಜಕೀಯ ಸಮರಕ್ಕೆ ಬಿಜೆಪಿ ಹಾಕುತ್ತಿರುವ ಮೊದಲ ದೊಡ್ಡ ಹೆಜ್ಜೆಯಾಗಿದೆ.
ಇದರಂತೆ ಮುಂದಿನ ಚುನಾವಣೆಗೆ ಬಿಎಸ್ವೈ ಮಂತ್ರ ಮತ್ತೆ ಕಾರ್ಯಕ್ಷಮವಾಗುತ್ತದೆಯೇ? ಲಿಂಗಾಯತ ಮತಗಳು ಮತ್ತೆ ಬಿಜೆಪಿ ಕಡೆ ತಿರುಗುತ್ತವೆಯೇ? ಎಂಬ ಪ್ರಶ್ನೆಗಳಿಗೆ ಮುಂದಿನ ಚುನಾವಣೆಯಲ್ಲಿ ಉತ್ತರ ಲಭಿಸಲಿದೆ.
