Monday, April 20, 2026
Homeರಾಜ್ಯದುಬೈನಲ್ಲಿ ಸಿಲುಕಿದ್ದ 213 ಕನ್ನಡಿಗರು ಸುರಕ್ಷಿತವಾಗಿ ವಾಪಸ್‌‍

ದುಬೈನಲ್ಲಿ ಸಿಲುಕಿದ್ದ 213 ಕನ್ನಡಿಗರು ಸುರಕ್ಷಿತವಾಗಿ ವಾಪಸ್‌‍

213 Kannadigas stranded in Dubai return safely

ಬೆಂಗಳೂರು, ಮಾ.3- ಅಮೆರಿಕ-ಇಸ್ರೇಲ್‌ ದಾಳಿ ಹಿನ್ನೆಲೆಯಲ್ಲಿ ಇರಾನ್‌ ಪರಿಸ್ಥಿತಿ ತೀವ್ರ ಉದ್ವಿಗ್ನಗೊಂಡು ವಾಯುಪ್ರದೇಶ ಮುಚ್ಚಲ್ಪಟ್ಟ ಕಾರಣ ಅಬುಧಾಬಿಯಲ್ಲಿ ಸಿಲುಕಿದ್ದ ಸುಮಾರು 213 ಕನ್ನಡಿಗರು ನಿನ್ನೆ ರಾತ್ರಿ ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ವಿಧಾನಪರಿಷತ್‌ ಸದಸ್ಯ ಭೋಜೇಗೌಡ ಹಾಗೂ ಒಲಿಂಪಿಕ್‌ ಪದಕ ವಿಜೇತೆ, ಖ್ಯಾತ ಬ್ಯಾಡಿಂಟನ್‌ ತಾರೆ ಪಿ.ವಿ. ಸಿಂಧು ಕೂಡ ಸೇರಿದ್ದಾರೆ. ದುಬೈನಿಂದ ನಿನ್ನೆ ರಾತ್ರಿ ಹೊರಟ ವಿಮಾನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಸಾವು-ಬದುಕಿನ ನಡುವೆ ಆತಂಕದಲ್ಲೇ ಕ್ಷಣಗಳನ್ನು ಕಳೆದಿದ್ದ ಬಹುತೇಕರು ತಾಯ್ನಾಡಿಗೆ ಬರುತ್ತಿದ್ದಂತೆ ಮುಖದಲ್ಲಿ ನಗು ಎದ್ದು ಕಾಣುತ್ತಿತ್ತು.

ದುಬೈನಿಂದ ಎರಡು ಫ್ಲೈಟ್‌ಗಳು ಬೆಂಗಳೂರಿಗೆ ಬಂದಿಳಿದಿದ್ದು, 300ಕ್ಕೂ ಹೆಚ್ಚು ಮಂದಿ ವಾಪಸ್‌‍ ಆಗಿದ್ದಾರೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮತ್ತೊಂದು ವಿಮಾನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿತ್ತು. ವ್ಯಾಪಾರ, ಪ್ರವಾಸ ಅಥವಾ ಕೆಲಸದ ನಿಮಿತ್ತ ಅಬುಧಾಬಿಗೆ ತೆರಳಿದ್ದ ಹಲವರು ಅಲ್ಲಿ ಸಿಲುಕಿಕೊಂಡಿದ್ದರು.

ದುಬೈನಿಂದ ಬೆಂಗಳೂರಿಗೆ ವಾಪಸ್ಸಾದ ಬಳಿಕ ಮಾತಾಡಿದ ವಿಧಾನಪರಿಷತ್‌ ಸದಸ್ಯ ಭೋಜೇಗೌಡ ಅವರು, ನಾನು ದಕ್ಷಿಣ ಆಫ್ರಿಕಾಗೆ ಹೋಗಿದ್ದೆ. ಕಾರಣಾಂತರಗಳಿಂದ ವಾಪಸ್‌‍ ಬರುವುದಕ್ಕೆ ಮುಂದಾಗಿದ್ದೆ. ದುಬೈ ಮೂಲಕ ಇಂಡಿಯಾಗೆ ಬರಬೇಕಾಗಿತ್ತು. ಆ ಸಮಯದಲ್ಲಿ ಫ್ಲೈಟ್‌ ತಡವಾಯಿತು. ಯಾಕೆ ಎಂದು ವಿಚಾರಿಸಿದಾಗ ಅಬುಧಾಬಿಯಲ್ಲಿ ಬಾಂಬ್‌ ದಾಳಿಯಾಗುತ್ತಿದೆ ಎಂದು ಹೇಳಿ ಸ್ವಲ್ಪ ಹೊತ್ತಿನ ನಂತರ ಫ್ಲೈಟ್‌ನಿಂದಲೇ ಇಳಿಸಿದರು ಎಂದು ಮಾಹಿತಿ ನೀಡಿದ್ದಾರೆ.

ಎಲ್ಲಾ ವಿಮಾನಗಳನ್ನು ಇದ್ದಕ್ಕಿದ್ದಂತೆ ತಡೆಹಿಡಿದರು. ಅಲ್ಲಿ ದುಬೈ ವೀಸಾ ಇರಲಿಲ್ಲ, ವೀಸಾ ಪಡೆದುಕೊಂಡೆ. ಬಳಿಕ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಕಡೆಯಿಂದ ಅಲ್ಲೇ ಹೋಟೆಲ್‌ ವ್ಯವಸ್ಥೆ ಆಯ್ತು. ಹೋಟೆಲ್‌ ಅಕ್ಕಪಕ್ಕದಲ್ಲಿ ಬಾಂಬಿಂಗ್‌ ಆಗ್ತಿತ್ತು. ನಂತರ ನಮನ್ನ ಸುರಕ್ಷಿತ ಸ್ಥಳವೊಂದರಲ್ಲಿ ಇರಿಸಿದರು.ನಂತರ ನಮ ಸ್ನೇಹಿತರೊಬ್ಬರ ಮನೆಗೆ ಹೋಗಿದ್ದೆ. ಈ ವೇಳೆ ಸಚಿವರಾದ ಹೆಚ್‌ಕೆ ಪಾಟೀಲ್‌ ಹಾಗೂ ಕೃಷ್ಣ ಭೈರೇಗೌಡ ಅವರು ಕೂಡ ನಮನ್ನ ಸಂಪರ್ಕಿಸಿದರು. ಫೋನ್‌ನಲ್ಲಿ ಮಾತಾಡುವಾಗಲೂ ಮೂರು ಮಿಸೈಲ್‌ಗಳು ಬಿದ್ದಿವೆ. ಬುರ್ಜ್‌ ಖಲೀಫಾ ಪಕ್ಕದಲ್ಲೇ ಬಾಂಬ್‌ ಬಿತ್ತು.

ಇವತ್ತು ಬೆಳಗ್ಗೆ ಕೂಡ ಬಾಂಬ್‌ಗಳು ಬೀಳುತ್ತಲೇ ಇದ್ದವು. ಮೂರು ಬಾಂಬ್‌ಗಳು ಬೀಳೋದನ್ನ ನಾನು ನೋಡಿದೆ ಎಂದು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದರು. ಹೇಗೋ ನಮ ಹಾಗೂ ದುಬೈ ಸರ್ಕಾರ ಮಾತಾಡಿಕೊಂಡು ಅಲ್ಲಿಂದ ರೂಟ್‌ ಚೇಂಜ್‌ ಮಾಡಿ ನಮನ್ನ ವಾಪಸ್‌‍ ಕಳುಹಿಸಲಾಗಿದೆ.

ದುಬೈನಲ್ಲಿ ಯುದ್ಧದ ವಾತಾವರಣ ಹೆಚ್ಚಿದೆ. ಇಷ್ಟು ಬೇಗ ಬರುತ್ತೇನೆ ಅಂದ್ಕೊಂಡಿರಲಿಲ್ಲ. ಕಠಿಣ ಸಮಯದಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ದೂರವಾಣಿ ಮೂಲಕ ಸಂಪರ್ಕಿಸಿ ಧೈರ್ಯ ತುಂಬಿದ್ದಲ್ಲದೆ, ದುಬೈನಲ್ಲಿ ಸುರಕ್ಷಿತ ಹೋಟೆಲ್‌ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಸಿದ್ದರು. ಆದಾಗ್ಯೂ ಭದ್ರತೆಯ ಆತಂಕ ನಮನ್ನು ಕಾಡುತ್ತಲೇ ಇತ್ತು ಎಂದು ಭೋಜೇಗೌಡರು ತಿಳಿಸಿದರು.

ದುಬೈಗೆ ಪ್ರವಾಸಕ್ಕೆಂದು ತೆರಳಿದ್ದ ಗೌತಮ್‌ ಅಲ್ಲಿನ ಯುದ್ಧ ಭೀಕರತೆ ಬಗ್ಗೆ ಮಾತಾಡಿದ್ದಾರೆ. ನಾವು ಟ್ರಿಪ್‌ಗೆಂದು ದುಬೈಗೆ ಹೋಗಿದ್ವಿ. ಆದರೆ ಅಲ್ಲಿ ಯುದ್ಧ ಆರಂಭವಾಯ್ತು, ಮಿಸೈಲ್‌ಗಳು ಕಣ್ಣ ಮುಂದೆಯೇ ಕಾಣಿಸ್ತಿದ್ವು. ಭಯ ಆಗ್ತಿತ್ತು, ನಮ್‌ ದೇಶಕ್ಕೆ ಹೋದ್ರೆ ಸಾಕು ಅನ್ನಿಸಿತ್ತು. ನಾವಿರುವ ಜಾಗದಿಂದ ಸ್ವಲ್ಪ ದೂರದಲ್ಲಿ ಮಿಸೈಲ್‌ಗಳು ಬೀಳ್ತಿದ್ವು. ನಾವು ನಾಲ್ಕನೇ ತಾರೀಖು ವಾಪಸ್‌‍ ಬರಬೇಕಿತ್ತು. ಆದರೆ, ಯುದ್ದ ಹಿನ್ನೆಲೆ ಬೇಗ ವಾಪಸ್‌‍ ಬಂದೆವು. ನಾವು ಬಂದಿದ್ದು ಖುಷಿಯಾಗಿದೆ. ಆದರೆ, ನಮ ಸ್ನೇಹಿತರು ಅಲ್ಲೇ ಸಿಕ್ಕಿಬಿದ್ದಾರೆ. ಅಲ್ಲಿನ ಸರ್ಕಾರ ನಮಗೆ ಸಹಕಾರ ನೀಡಿತ್ತು. ಇಂಡಿಯನ್‌ ಎಂಬೆಸ್ಸಿಯವರು ಸಹಕಾರ ನೀಡಿದರು ಎಂದು ಗೌತಮ್‌ ಹೇಳಿದ್ದಾರೆ.

ನಾನು ದುಬೈ ವಿಮಾನ ನಿಲ್ದಾಣ ತಲುಪಿದಾಗಲೇ ಅಲ್ಲಿನ ಗಂಭೀರ ಪರಿಸ್ಥಿತಿ ಅರಿವಿಗೆ ಬಂತು. ಮೊದಲು ವಿಮಾನ ಹೊರಡುವುದು ವಿಳಂಬವಾಗಿದೆ ಎಂದು ತಿಳಿಸಿದರು, ಸ್ವಲ್ಪ ಸಮಯದ ನಂತರ ವಿಮಾನವೇ ರದ್ದಾಗಿದೆ ಎಂಬ ಆಘಾತಕಾರಿ ಮಾಹಿತಿ ನೀಡಿದರು. ವಿಮಾನ ನಿಲ್ದಾಣದಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಜನಸಂದಣಿ ಸೇರಿತ್ತು. ಎಲ್ಲರ ಮುಖದಲ್ಲೂ ಯುದ್ಧದ ಭಯ ಎದ್ದು ಕಾಣುತ್ತಿತ್ತು ಎಂದು ಆತಂಕದ ಕ್ಷಣಗಳನ್ನು ಮೆಲುಕು ಹಾಕಿದರು.

ಕೆಂಪೇೆಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರ ಪ್ರಕಾರ, ವಿಮಾನದ 238/239 ಸೋಮವಾರ ರಾತ್ರಿ ಸುಮಾರು 10 ಗಂಟೆಗೆ ಬೆಂಗಳೂರು ತಲುಪಿತು. ವಿಮಾನ ಮರಳಿ ಅಬುಧಾಬಿಗೆ ರಾತ್ರಿ 11.10ಕ್ಕೆ ಪ್ರಯಾಣ ಬೆಳೆಸಿತು ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ ಎಮಿರೆಟ್‌್ಸ ಸಂಸ್ಥೆಯ ಏರ್ಬಸ್‌‍ 380 ವಿಮಾನ ಮಂಗಳವಾರ ಮುಂಜಾನೆ ಕಾರ್ಯಾಚರಿಸಲು ನಿಗದಿಯಾಗಿದೆ. ಬೆಳಗಿನ 2.40ಕ್ಕೆ ಆಗಮನ ಹಾಗೂ 4.30ಕ್ಕೆ ಹೊರಡಲು ವೇಳಾಪಟ್ಟಿ ನಿಗದಿಯಾಗಿದೆ. ದುಬೈಗೆ ತೆರಳುವ ಪ್ರಯಾಣಿಕರಿಗೆ ಯುಎಇ ನಾಗರಿಕರು ಮತ್ತು ನಿವಾಸಿ ಪರವಾನಗಿ ಹೊಂದಿದವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಪ್ರದೇಶದ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ನಿರ್ಬಂಧಗಳೊಂದಿಗೆ ವಿಮಾನ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.

ಇದೂವರೆಗೂ ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದ ಬೆಂಗಳೂರು ನಿವಾಸಿ ಅನಿರುದ್ಧ ಅವರು ಕೂಡ ಸುರಕ್ಷಿತವಾಗಿ ಮನೆಗೆ ವಾಪಸ್ಸಾಗಿದ್ದಾರೆ. ವಿವಾಹ ಸಮಾರಂಭಕ್ಕಾಗಿ ಕೆನಡಾದಿಂದ ಭಾರತಕ್ಕೆ ಬರುತ್ತಿದ್ದ ವೇಳೆ ಅಬುಧಾಬಿಯಲ್ಲಿ ಪ್ರಯಾಣ ವ್ಯತ್ಯಯದಿಂದ ಸಿಲುಕಿಕೊಂಡಿದ್ದರು.

RELATED ARTICLES

Latest News