ಬೆಂಗಳೂರು,ಮಾ.12- ತುಂಗಭದ್ರಾ ಜಲಾಶಯದ ಆರು ಗೇಟುಗಳನ್ನು ಮೇ ಅಂತ್ಯದೊಳಗೆ ಬದಲಾವಣೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನಪರಿಷತ್ಗಿಂದು ತಿಳಿಸಿದರು.
ಶೂನ್ಯವೇಳೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಟಿ.ಎ.ಶರವಣ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಡಿಸಿಎಂ, ಜಲಾಶಯದ ಗೇಟುಗಳು 50 ವರ್ಷಗಳಷ್ಟು ಹಳೆಯದಾಗಿದ್ದುಅವುಗಳನ್ನು ತೆಗೆದುಹಾಕಿ ಹೊಸ ಗೇಟುಗಳನ್ನು ಅಳವಡಿಸಲಾಗುವುದು ಎಂದರು.
ಈ ಜಲಾಶಯ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಿಗೆ ಸಂಬಂಧಿಸಿದಾಗಿದ್ದು, ನೆರೆಯ ರಾಜ್ಯಗಳ ಸಹಕಾರವೂ ಬೇಕಾಗಿದೆ. ಗೇಟು ಅಳವಡಿಕೆ ಮಾಡುವುದನ್ನು ಅಹಮದಾಬಾದ್ ಕಂಪನಿಗೆ ನೀಡಲಾಗಿದ್ದು, ಈಗಾಗಲೇ ಸಾಮಗ್ರಿಗಳು ಬಂದಿದ್ದು ಗೇಟು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಶರವಣ, ತುಂಗಾಭದ್ರ ಜಲಾಶಯದ ಗೇಟುಗಳ ದುರಸ್ತಿ ಕಾರ್ಯವಾಗದೆ ಅಚ್ಚುಕಟ್ಟು ಪ್ರದೇಶದ ರೈತರ ಬದುಕು ಮೂರಾಬಟ್ಟೆಯಾಗಿದೆ. ಮುಂಗಾರು ಮಳೆ ಆರಂಭವಾಗುವ ಮುನ್ನ ಎಲ್ಲ ಗೇಟುಗಳನ್ನು ಅಳವಡಿಸಬೇಕು. ಇಲ್ಲಿಯವರೆಗೆ ಕೇವಲ 12 ಗೇಟುಗಳನ್ನು ಮಾತ್ರ ಮುಗಿದಿದೆ. ಇಲ್ಲದಿದ್ದರೆ, ಕಾಲುವೆ ಮೂಲಕ ನೀರು ಹರಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಜಲಾಶಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ನೀರು ಸಂಗ್ರಹಿಸಲಾಗದೆ ನೆರೆಯ ರಾಜ್ಯಗಳ ಪಾಲಾಗುತ್ತಿದೆ. ಸಮನಾಂತರ ಜಲಾಶಯ ನಿರ್ಮಾಣ ಮಾಡುವ ವಿಚಾರವೂ ನೆನೆಗುದಿಗೆ ಬಿದ್ದಿದೆ.
ರಾಯಚೂರು, ಕೊಪ್ಪಳ, ಬಳ್ಳಾರಿಯಲ್ಲಿ ಭತ್ತ ಬೆಳೆಯುವ ರೈತರಿಗೂ ತೊಂದರೆಯಾಗುತ್ತಿದೆ. ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸರ್ಕಾರ ಶೀಘ್ರವೇ ಜಲಾಶಯದ 33 ಗೇಟುಗಳನ್ನು ಅಳವಡಿಸಿ ರೈತರಿಗೆ ನೆರವಾಗಬೇಕು ಎಂದು ಆಗ್ರಹಿಸಿದರು.
