ಬೆಂಗಳೂರು,ಜೂ.17- ಬೆಳಗಾವಿ ನಗರದ ಕೈಗಾರಿಕಾ ಪ್ರದೇಶವಾದ ಉದ್ಯಮ ಭಾಗದಲ್ಲಿ 59 ಜೀವಂತ ಗುಂಡುಗಳು ಕಸದ ರಾಶಿಯಲ್ಲಿ ಪತ್ತೆಯಾಗಿರುವುದು ಆತಂಕಕ್ಕೀಡು ಮಾಡಿದೆ.
ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ಎಂದಿನಂತೆ ಕಸ ವಿಂಗಡಣೆ ಮಾಡುತ್ತಿದ್ದ ವೇಳೆ ಕಸದ ರಾಶಿಯಲ್ಲಿ ಗುಂಡುಗಳನ್ನು ಕಂಡು ಒಂದು ಕ್ಷಣ ಗಾಬರಿಯಾಗಿದ್ದಾರೆ.
ಪೌರಕಾರ್ಮಿಕರು ಈ ಗುಂಡುಗಳನ್ನು ಗಮನಿಸಿ ತಕ್ಷಣ ಉದ್ಯಮಭಾಗ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ.ಸುದ್ದಿ ತಿಳಿದು ಪೊಲೀಸ್ ನೀರಿಕ್ಷಕ ಮಹಾಂತೇಶ ಹೊಸಪೇಟೆ ಮತ್ತು ಸಿಬ್ಬಂದಿ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.
ಪಿಎಸ್ಐ ಪ್ರವೀಣ ಬಿರಾದಾರ್ ನೇತೃತ್ವದಲ್ಲಿ ಸ್ಥಳ ಮಹಜರು ನಡೆಸಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸ್ಥಳದಲ್ಲಿ ಪತ್ತೆಯಾದ 59 ಗುಂಡುಗಳ ಪೈಕಿ 41 ಗುಂಡುಗಳು ಒಂದೇ ಮಾದರಿಯಾಗಿದ್ದರೇ ಉಳಿದ 18 ಗುಂಡುಗಳು ಮತ್ತೊಂದು ಮಾದರಿಯದ್ದಾಗಿವೆ.
ಈ ಗುಂಡುಗಳ ಪೈಕಿ ಕೆಲವು ಹಾಳಾಗಿರುವುದು ಕಂಡು ಬಂದಿದೆ. ಎಲ್ಲಾ ಗುಂಡುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಅವುಗಳನ್ನು ಎಫ್ಎಸ್ಎಲ್ಗೆ ಹಾಗೂ ಬ್ಯಾಲಿಸ್ಟಿಕ್ ಪರೀಕ್ಷೆಗೆ ಕಳುಹಿಸಿದ್ದಾರೆ.
ಈ ಗುಂಡುಗಳ ಮೂಲ,ಎಲ್ಲಿ ಇವುಗಳನ್ನು ತಯಾರಿಸಲಾಗಿದೆ, ಯಾತಕ್ಕಾಗಿ ಈ ಸ್ಥಳದಲ್ಲಿ ತಂದು ಬಿಸಾಡಲಾಗಿದೆ, ಯಾವುದಾದರೂ ಸಂಭವನೀಯ ಬಳಕೆಗೆ ತಂದು ನಂತರ ಸಾಧ್ಯವಾಗದಿದ್ದಾಗ ಕಸದ ರಾಶಿಗೆ ಬಿಸಾಡಿ ಹೋಗಿರಬಹುದೇ ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.
