ಬೆಂಗಳೂರು,ಆ.11- ಶಿವಗಂಗೆ ಬೆಟ್ಟಕ್ಕೆ ಚಾರಣಕ್ಕೆ ಹೋಗಿ ನಿಗೂಢವಾಗಿ ನಾಪತ್ತೆಯಾಗಿರುವ ಸಾಫ್್ಟವೇರ್ ಎಂಜಿನಿಯರ್ ಅದ್ವೈತ್ ಉಪಾಧ್ಯಾಯನಿಗಾಗಿ ಕಳೆದ ನಾಲ್ಕು ದಿನಗಳಿಂದ ಹಗಲಿರುಳೆನ್ನದೇ ಪತ್ತೆಕಾರ್ಯ ಮುಂದುವರೆಸಲಾಗಿದೆ.
ಈ ಪ್ರಕರಣ ದಿನದಿಂದ ದಿನಕ್ಕೆ ನಿಗೂಢವಾಗುತ್ತಿದ್ದು, ಟೆಕ್ಕಿಯ ನಡೆ ಮೇಲೆಯೇ ಪೊಲೀಸರಿಗೆ ಹಲವು ಅನುಮಾನಗಳು ಮೂಡಿವೆ.ಶುಕ್ರವಾರ ಶಿವಗಂಗೆ ಬೆಟ್ಟಕ್ಕೆ ಹೋಗಿದ್ದ ಅದ್ವೈತ್ ಉಪಾಧ್ಯಾಯ ವಾಪಾಸ್ ಆಗದೇ ಇದ್ದು, ಅಲ್ಲೇ ಕಾಣೆಯಾಗಿದ್ದಾರೆ ಎನ್ನಲಾಗಿದೆ. ಬೆಟ್ಟದ ಅಪಾಯಕಾರಿ ಭೂಪ್ರದೇಶದಲ್ಲಿ ಡ್ರೋನ್ಗಳು, ಲೋಹ ಶೋಧಕಗಳ ಜೊತೆ ಸುಮಾರು 80ಕ್ಕೂ ಹೆಚ್ಚು ಸಿಬ್ಬಂದಿ ಎಸ್ಡಿಆರ್ಎ್ ತಂಡದೊಂದಿಗೆ ತೀವ್ರ ಶೋಧ ನಡೆಸುತ್ತಿದ್ದಾರೆ.ಆದರೆ ಇದುವರೆಗೂ ಅದ್ವೈತ್ನ ಯಾವುದೇ ಕುರುಹು ಪತ್ತೆಯಾಗದ ಹಿನ್ನಲೆಯಲ್ಲಿ ಪೊಲೀಸರು ತನಿಖೆಯ ದಿಕ್ಕನ್ನು ಮತ್ತಷ್ಟು ವಿಸ್ತರಿಸಿದ್ದಾರೆ.
ಈ ಸ್ಥಳಕ್ಕೆ ಬಂದ ಬಳಿಕ ಅಲ್ಲಿಂದ ಬೇರೆ ಮಾರ್ಗದಲ್ಲಿ ಹೋಗಿರಬಹುದೆಂಬ ಅನುಮಾನವೂ ಸಹ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಪೊಲೀಸರು ಶಿವಗಂಗೆ ಹೊರ ಭಾಗ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸು ತ್ತಿದ್ದಾರೆ. ಅದ್ವೈತ್ ಬೆಟ್ಟ ಹತ್ತಿದ ದಾರಿ ಬಳಸದೇ ಬೇರೆ ಮಾರ್ಗದಲ್ಲಿ ತೆರಳಿದ್ದಾನೆಯೇ ಎಂಬುವುದರ ಬಗ್ಗೆಯೂ ಪೊಲೀಸರು ಮಾಹಿತಿ ಗಳನ್ನು ಕಲೆಹಾಕುತ್ತಿದ್ದಾರೆ.
ನಾಲ್ಕು ದಿನಗಳು ಕಳೆದರೂ ಅದ್ವೈತ್ ಬಗ್ಗೆ ಯಾವುದೇ ಸುಳಿವು ಸಿಗದಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ಸಿಸಿ ಟಿವಿ ದೃಶ್ಯಾವಳಿಗಳಿಂದ ಯಾವುದಾದರೂ ಹೊಸ ಸುಳಿವು ಸಿಗಬಹುದೇ ಎಂಬುವುದನ್ನು ಸಹ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಘಟನೆ ಹಿನ್ನಲೆ:ಬೆಟ್ಟದ ತಪ್ಪಲಿನಲ್ಲಿರುವ ಸಿಸಿಟಿವಿ ದೃಶ್ಯಗಳಲ್ಲಿ ಅದ್ವೈತ್ ಶುಕ್ರವಾರ ಬೆಳಿಗ್ಗೆ 6.30ರಿಂದ 7.30ರ ಸುಮಾರಿಗೆ ಆಗಮಿಸಿ ಶಿವಗಂಗೆ ಬೆಟ್ಟ ಹತ್ತುತ್ತಿರುವುದು ಕಂಡುಬಂದಿದೆ.
ಈ ಸ್ಥಳಕ್ಕೆ ಹೊರಡುವ ಮೊದಲು ಅವರು ತಮ ಟ್ರೆಕ್ಕಿಂಗ್ ಪ್ಲಾನ್ ಬಗ್ಗೆ ಕುಟುಂಬಕ್ಕೆ ತಿಳಿಸಿದ್ದರು.
ನಂತರ ಅವರು ಬಾಡಿಗೆಗೆ ತಂದಿದ್ದ ಮೋಟಾರ್ ಬೈಕ್ ಬೆಟ್ಟದ ತಪ್ಪಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಆದರೆ ಅವರು ಹಿಂತಿರುಗಿದ ಯಾವುದೇ ದೃಶ್ಯ ಅಥವಾ ಪುರಾವೆ ಸಿಕ್ಕಿಲ್ಲ. ವಾರಾಂತ್ಯದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ.
ಇಂದಿಗೆ ಶೋಧ ಕಾರ್ಯ ಐದನೇ ದಿನಕ್ಕೆ ಕಾಲಿಟ್ಟಿದೆ. ಅಂದಿನಿಂದ ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಪ್ರವೇಶಿಸಲು ಕಷ್ಟಕರವಾದ ಪ್ರದೇಶಗಳನ್ನು ಸ್ಕ್ಯಾನ್ ಮಾಡಲು ಹೈ-ರೆಸಲ್ಯೂಷನ್ ಡ್ರೋನ್ಗಳು ಮತ್ತು ವಿಶೇಷ ಮೆಟಲ್ ಡಿಟೆಕ್ಟರ್ಗಳನ್ನು ಬಳಸುತ್ತಿದ್ದಾರೆ. ಒಟ್ಟಾರೆ ಪೊಲೀಸರು ಎಲ್ಲಾ ಸಂಭಾವ್ಯ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.
