ಬೆೆಂಗಳೂರು,ಫೆ.9- ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿದ್ದ ನಮ ಮೆಟ್ರೋ ದರ ಪರಿಷ್ಕರಣೆಯನ್ನು ಖಂಡಿಸಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ರಾಮಮೂರ್ತಿ ಅವರು ನಗರದ ಆರ್ವಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಖಾಲಿ ಟ್ರಂಕ್ ಪ್ರದರ್ಶಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದರು.
ಕಾಂಗ್ರೆಸ್ ಸರ್ಕಾರ ಖಾಲಿ ಸರ್ಕಾರ ಎಂದು ಬರೆದಿರುವ ಟ್ರಂಕ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಭಾವಚಿತ್ರಗಳಿದ್ದವು. ಶಾಸಕ ರಾಮಮೂರ್ತಿ ಅವರ ಜೊತೆ ಮೆಟ್ರೋದಲ್ಲಿ ತೆರಳಲು ಗುಂಪಾಗಿ ಬಂದ ಹಿನ್ನೆಲೆ ಸಂಸದ ತೇಜಸ್ವಿ ಸೂರ್ಯ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು.
ಬಿಜೆಪಿ ಪ್ರತಿಭಟನೆ ನಡೆಸುವ ವಿಚಾರ ತಿಳಿದು ಮೊದಲೇ ಸರ್ಕಾರ ಆರ್ವಿ ಮೆಟ್ರೋ ನಿಲ್ದಾಣದಲ್ಲಿ 20ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿತ್ತು. ಒಂದು ಕೆಎಸ್ಆರ್ಪಿ ತುಕಡಿಯನ್ನು ನಿಯೋಜಿಸಿ ಭದ್ರತೆ ನೀಡಿತ್ತು. ನಿಲ್ದಾಣದ ಹೊರಗೆ ಬಿಎಂಆರ್ಸಿಎಲ್ ಭದ್ರತಾ ವಿಭಾಗದ ಸಿಬ್ಬಂದಿಯೂ ನಿಂತಿದ್ದರು. ಈ ಸಂದರ್ಭದಲ್ಲಿ ಖಾಲಿ ಟ್ರಂಕ್ ಒಂದನ್ನು ಹಿಡಿದು ಇದು ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಯ ಪ್ರತೀಕವಾಗಿದೆ. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದರು.
ನಾನು ಪ್ರತಿಭಟನೆ ಮಾಡುತ್ತಿಲ್ಲ. ಖಾಲಿ ಟ್ರಂಕ್ ಹಿಡಿದಿದ್ದೇನೆ, ನನ್ನನ್ನು ಯಾರೂ ತಡೆಯಬಾರದು ಎಂದು ಸೂರ್ಯ ಮನವಿ ಮಾಡಿಕೊಂಡರೂ, ಪೊಲೀಸರು ಅವರನ್ನು ತಡೆದಾಗ, ನಾನು ಖಾಲಿ ಟ್ರಂಕ್ ಹಿಡಿದುಕೊಂಡಿದ್ದೇನೆ. ಸಂಸತ್ತು ಅಧಿವೇಶನ ನಡೆಯುತ್ತಿದ್ದಾಗ ನನ್ನನ್ನು ವಶಕ್ಕೆ ಪಡೆಯುವಂತಿಲ್ಲ. ಕಾನೂನು ತಿಳಿದುಕೊಂಡು ವಶಕ್ಕೆ ಪಡೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿರೋಧದ ನಡುವೆಯೂ ಸಂಸದರನ್ನು ವಶಕ್ಕೆ ಪಡೆದ ಪೊಲೀಸರು ಟ್ರಂಕ್ ಮೇಲಿದ್ದ ಕಾಂಗ್ರೆಸ್ ಸರ್ಕಾರ ಖಾಲಿ ಟ್ರಂಕ್ ಸರ್ಕಾರ ಪೊಸ್ಟರ್ ತೆಗೆದು ಹಾಕಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಸೂರ್ಯ, ಏರಿಕೆಗೆ ತಾತ್ಕಾಲಿಕ ತಡೆಯಾಗಿದೆ. ದರ ಏರಿಕೆ ಕೂಡಲೇ ಕೈ ಬಿಡಬೇಕು. ಈಗಿರುವ ದರವನ್ನೂ ಕಡಿಮೆ ಮಾಡಬೇಕು. ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ. ಮೆಟ್ರೋಗೆ ನೀಡುತ್ತಿದ್ದ ನೆರವನ್ನು ನಿಲ್ಲಿಸಿರುವುದು ದರ ಏರಿಕೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಹಣಕಾಸು ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಗೆ ಅನುಮತಿ ಕೊಟ್ಟಿಲ್ಲ. ನಾವು ಇಲ್ಲಿ ಪ್ರತಿಭಟನೆ ಮಾಡುತ್ತಿಲ್ಲ. ಮೆಟ್ರೋದಲ್ಲಿ ಹೋಗಲು ಟಿಕೆಟ್ ತೆಗೆದುಕೊಂಡಿದ್ದೇವೆ. ನನ್ನ ಕೈಯಲ್ಲಿರುವುದು ರಾಜ್ಯ ಸರ್ಕಾರದ ತರ ಖಾಲಿ ಟ್ರಂಕ್ ಅಷ್ಟೇ. ಕಾಂಗ್ರೆಸ್ ಸರ್ಕಾರದ ಖಾಲಿ ಟ್ರಂಕ್ ತೆಗೆದುಕೊಂಡೇ ನಾನು ದೆಹಲಿಗೆ ಹೋಗುತ್ತೇನೆ. ಇದೇ ಖಾಲಿ ಟ್ರಂಕ್ ರಾಜ್ಯ ಸರ್ಕಾರದ ಪ್ರತೀಕ.
ಸರ್ಕಾರ ನಮ ಹತ್ತೀರ ಹಣ ಇಲ್ಲ ಎಂದು ಹೇಳುತ್ತಿದೆ. ಪ್ರಯಾಣಿಕರಿಂದ ತೆಗೆದುಕೊಳ್ಳಿ ಎಂದು ರಾಜ್ಯ ಸರ್ಕಾರ ಮೆಟ್ರೋಗೆ ಹೇಳಿದೆ. ಕೇಂದ್ರ ಸರ್ಕಾರದ ನಿರ್ದೇಶನ ಬಂದ ಹಿನ್ನಲೆ ತಾತ್ಕಾಲಿಕ ತಡೆ ನೀಡಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಸತ್ಯ ಹೊರಗಡೆ ಬರುತ್ತೆದೆ ಎಂಬುದು ಗೊತ್ತಾಗಬಾರದು ಎಂದು ವಶಕ್ಕೆ ಪಡೆದಿದ್ದಾರೆ. ರಾಜ್ಯ ಸರ್ಕಾರ ಕೇಂದ್ರದ ನಗರಾಭಿವೃದ್ಧಿ ಇಲಾಖೆಗೆ ಮನವಿ ಮಾಡಬೇಕು. ಹೊಸ ಕಮಿಟಿ ರಚನೆ ಮಾಡಿ ಅಂತ ಕೇಂದ್ರಕ್ಕೆ ಮುಖ್ಯಮಂತ್ರಿಗಳು ಪತ್ರ ಬರೆಯಬೇಕು. ಹೊಸ ಕಮಿಟಿ ಬಂದ ಮೇಲೆ ಶ್ಯಾಡೋ ಕ್ಯಾಶ್ ಸಪೋರ್ಟ್ ಕೊಡಬೇಕು. ಪ್ರತೀ ವರ್ಷ ದರ ಏರಿಕೆ ಮಾಡಬಾರದು.2025 ಫೆಬ್ರವರಿ 13ರಂದು ಮುಖ್ಯಮಂತ್ರಿಗಳು ಒಂದು ಪೋಸ್ಟ್ ಹಾಕ್ತಾರೆ. ಮುಖ್ಯಮಂತ್ರಿಗಳಿಗೆ ದರ ಇಳಿಸುವ ಅಧಿಕಾರ ಇದೆ ಅಂದಾದರೆ ಇಂದು ಯಾಕೆ ಇಳಿಸುತ್ತಿಲ್ಲ. ಲಾಜಿಕ್ ನಮಗೂ ಅಪ್ಲೈ ಆಗುತ್ತೆ. ಜನ ಏನು ದಡ್ಡರಾ? ಇದನ್ನೆಲ್ಲ ನಂಬಲು ಎಂದು ಕಿಡಿಕಾರಿದರು.
ಹೆದರುವುದಿಲ್ಲ: ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಗೂಂಡಾಗಳಿಗೆ ಹೆದರಿಲ್ಲ. ಇನ್ನು ಇದು ನನ್ನ ಏರಿಯಾ, ಜಯನಗರದಲ್ಲಿ ಹೆದರುತ್ತೇನಾ?, ನಮದೇ ಏರಿಯಾದಲ್ಲಿ ನೋಟಿಸ್ ಕೊಟ್ಟು ನನ್ನನ್ನು ಹೆದರಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
