ಬೆಂಗಳೂರು,ಫೆ.19- ಕೆಂಪೇಗೌಡ ಬಸ್ ನಿಲ್ದಾಣದ ಶೌಚಾಲಯದ ಬಳಿ ಕೆಎಸ್ಆರ್ಟಿಸಿ ಬಸ್ ಕಂಡೆಕ್ಟರ್ ಇಟ್ಟಿದ್ದ ಟಿಕೆಟ್ ಮೆಷಿನ್ನನ್ನೇ ಖದೀಮರು ಕದ್ದೊಯ್ದಿರುವ ಘಟನೆ ನಡೆದಿದೆ. ಮೆಜೆಸ್ಟಿಕ್ನಲ್ಲಿ ಬೆಂಗಳೂರು-ಶಿರಸಿ ಮಾರ್ಗದ ನಾನ್ ಎಸಿ ಸ್ಪೀಪರ್ ಬಸ್ನ ಕಂಡೆಕ್ಟರ್ ವಾಶ್ರೂಮ್ಗೆ ಹೋಗುವ ಮುನ್ನ ಹೊರಗೆ ಟಿಕೆಟ್ ಮೆಷನ್ ಇದ್ದ ಬ್ಯಾಗ್ ಇಟ್ಟು ಹೋಗಿದ್ದಾರೆ.
ವಾಪಸ್ 15 ನಿಮಿಷದೊಳಗೆ ಬರುವಷ್ಟರಲ್ಲಿ ಟಿಕೆಟ್ ಮೆಷಿನ್ ಇರಲಿಲ್ಲ.ಎಲ್ಲಾ ಕಡೆ ಹುಡುಕಿದರಾದರೂ ಮೆಷಿನ್ ಪತ್ತೆಯಾಗಿಲ್ಲ. ತಕ್ಷಣ ಬಸ್ ಕಂಡೆಕ್ಟರ್ ಸಿಸಿ ಕ್ಯಾಮೆರಾ ಪರಿಶೀಲಿದಾಗ ಖದೀಮನೊಬ್ಬ ಬ್ಯಾಗ್ ಕದ್ದೊಯ್ಯುವ ದೃಶ್ಯ ಸೆರೆಯಾಗಿ ರುವುದು ಕಂಡು ಬಂದಿದೆ.
ಈ ಘಟನೆಯಿಂದ ಬಸ್ ನಿಲ್ದಾಣದಲ್ಲೇ ಎರಡು ಗಂಟೆಗಳ ಕಾಲ ಈ ಬಸ್ ನಿಂತಲ್ಲೇ ನಿಂತಿದ್ದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು. ನಂತರ ಬಸ್ ಸಿಬ್ಬಂದಿ ಮ್ಯಾನುವಲ್ ಟಿಕೆಟ್ ನೀಡಿ ಪ್ರಯಾಣ ಆರಂಭಿಸಿದ್ದಾರೆ.ಘಟನೆ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಖದೀಮನಿಗಾಗಿ ಶೋಧ ನಡೆಸುತ್ತಿದ್ದಾರೆ.
