ಬೆಂಗಳೂರು, ಫೆ.19- ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಅವಕಾಶ ನೀಡದೆ ಅಡ್ಡಿ ಪಡಿಸುವ ಶಾಸಕರುಗಳ ಕ್ಷೇತ್ರಗಳಲ್ಲಿ ಕಸ ಸಂಗ್ರಹಣೆಗೆ ಅವಕಾಶ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಅಸ್ಸಾಗೆ ತೆರಳುವ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ಯಾಜ್ಯ ವಿಲೇವರಿ ಘಟಕಕ್ಕೆ ಲಾರಿಗಳು ಸಂಚರಿಸಲು ಅವಕಾಶ ನೀಡುವುದಿಲ್ಲ ಎಂದು ಅಡ್ಡಿ ಪಡಿಸುತ್ತಿರುವವರಿಗೆ ಪ್ರತಿ ಸವಾಲು ಹಾಕಿದರು.
ಅಡ್ಡಿ ಮಾಡಬೇಡಿ ಎಂದು ನಾವು ಕೈಕಾಲು ಕಟ್ಟಿಕೊಳ್ಳಲು ಆಗುವುದಿಲ್ಲ. ತಾಜ್ಯ ವಿಲೇವಾರಿ ಘಟಕಗಳಿರುವ ಕ್ಷೇತ್ರಗಳ ಅಭಿವೃದ್ಧಿಗೆ ಈಗಾಗಲೇ ಸಾಕಷ್ಟು ಅನುದಾನ ನೀಡಲಾಗಿದೆ. 20 ರಿಂದ 100 ಕೋಟಿ ರೂಪಾಯಿವರೆಗೂ ನೀಡಲಾಗಿದೆ. ಅದು ಸಾಲದು ಸಾವಿರಾರು ಕೋಟಿ ರೂಪಾಯಿ ಕೊಡಿ ಎಂದು ಕೇಳಿದರೆ ಎಲ್ಲಿಂದ ತರುವುದು ಎಂದರು.
ಸದರಿ ಘಟಕಗಳಲ್ಲಿ ಮೊದಲಿನಿಂದಲೂ ತಾಜ್ಯ ವಿಲೇವಾರಿ ಮಾಡಲಾಗುತ್ತಿತ್ತು. ಈಗ ನಾವು ಹಿಂದಿನ ಸಂಪ್ರದಾಯವನೇ ಮುಂದುವರಿಸಿದ್ದೇವೆ ಎಂದರು.ತಾಜ್ಯ ವಿಲೇವಾರಿಗೆ ಅಡ್ಡಿಪಡಿಸುವ ಶಾಸಕರ ಅವರ ಕ್ಷೇತ್ರಗಳಲ್ಲಿ ಕಸ ತೆಗೆಯಲು ಬಿಡುವುದಿಲ್ಲ. ಮೈಕ್ ನಲ್ಲಿ ಪ್ರಕಟ ಮಾಡುತ್ತೇವೆ. ಆಗ ಜನರೇ ಶಾಸಕರಿಗೆ ಛೀಮಾರಿ ಹಾಕುತ್ತಾರೆ ಎಂದರು.
ಬೆಂಗಳೂರಿನ ತ್ಯಾಜ್ಯವನ್ನು ಎಲ್ಲ ಒಂದು ಕಡೆ ಹಾಕಲೇಬೇಕು. ಎಲ್ಲಾ ಕಡೆ ಅಡ್ಡಿಪಡಿಸಿದರೆ ಹೇಗೆ ಕೆಲಸ ಮಾಡುವುದು. ತ್ಯಾಜ್ಯ ಸಾಗಿಸುವ ಲಾರಿಗಳಿಗೆ ಅಡ್ಡಿಪಡಿಸಲಾಗುತ್ತಿದೆ. ಈ ರೀತಿಯ ತೊಂದರೆ ನೀಡುವುದು ಸರಿಯಲ್ಲ ಎಂದರು.
ಜಿಬಿಎವತಿಯಿಂದ ನಾಲ್ಕು ಶಾಶ್ವತ ತಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಅವುಗಳಲ್ಲಿ ಈಗಾಗಲೇ ಎರಡು ಘಟಕಳಿಗೆ ಮಂಜೂರಾತಿ ಸಿಕ್ಕಿವೆ. ಎಲ್ಲ ಕಡೆ ಜಮೀನಿನ ಸಮಸ್ಯೆ ಇದೆ ಎಂದರು.
ಬಿಜೆಪಿಯವರು ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮಹದೇವಪುರ ಸೇರಿ ಅಡ್ಡಿ ಪಡಿಸುವ ಶಾಸಕರ ಕ್ಷೇತ್ರಗಳಲ್ಲಿ ಕಸ ಸಂಗ್ರಹಿಸಲು ಅವಕಾಶ ನೀಡುವುದಿಲ್ಲ. ಏನು ಮಾಡಬೇಕು ಎಂದು ನಮಗೂ ಗೊತ್ತಿದೆ ಎಂದು ಎಚ್ಚರಿಸಿದರು.
ಹಣ ಬಿಡುಗಡೆ ಮಾಡಿರುವುದಕ್ಕೆ ಖಷಿ ಪಡಲಿ:
ಸಾರಿಗೆ ನೌಕರರು ಮುಷ್ಕರವನ್ನು ಮುಂದುವರಿಸಬಾರದು. ಅವರ ಜೊತೆ ಹಲವು ಬಾರಿ ಚರ್ಚೆ ನಡೆಸಲಾಗಿದೆ. 28 ತಿಂಗಳ ವೇತನ ಹಿಂಬಾಕಿಯನ್ನು ಬಿಡುಗಡೆ ಮಾಡಲಾಗಿದೆ. ಅಷ್ಟನ್ನಾದರೂ ನೀಡಿರುವುದಕ್ಕೆ ಸಾರಿಗೆ ನೌಕರರು ಖುಷಿ ಪಡಲಿ ಎಂದು ಹೇಳಿದರು.
ಅಸ್ಸಾಂ ವಿಧಾನಸಭೆ ಚುನಾವಣೆ ಪೂರ್ವ ತಯಾರಿ ಸಂಬಂಧಿಸಿದಂತೆ ಈಗಾಗಲೇ 4 ಸುತ್ತಿನ ಸಭೆ ನಡೆಸಲಾಗಿದೆ. ಅಗತ್ಯ ಇರುವ ಎಲ್ಲಾ ರೀತಿಯ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಚುನಾವಣೆಯನ್ನು ಹೆದುರಿಸಲು ಕಾರ್ಯತಂತ್ರವನ್ನು ರೂಪಿಸಲಾಗಿದೆ. ಈ ಬಾರಿ ಅಸ್ಸಾಂನಲ್ಲಿ ರಾಜಕೀಯ ಬದಲಾವಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಚುನಾವಣೆ ಉಸ್ತುವಾರಿಯಾಗಿರುವುದರಿಂದ ಇಂದು ತಾವು ಅಲ್ಲಿಗೆ ತೆರಳುತ್ತಿದ್ದೇನೆ. ಸಂಸದೆ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಭೂಪೇಶ್ ಬಗೇಲ ಸೇರಿದಂತೆ ಇಡೀ ತಂಡ ಇಂದು ಅಸ್ಸಾಂಗೆ ಭೇಟಿ ನೀಡಲಿದೆ. ಅಲ್ಲಿ ಚುನಾವಣೆ ಕಾರ್ಯ ಮುಗಿದ ಬಳಿಕ ಕಾಮಾಕ್ಯ ದೇವಿಯ ದರ್ಶನ ಮುಗಿಸಿ ವಾಪಸ್ ಬರುತ್ತೇವೆ ಎಂದು ಹೇಳಿದರು.
