Homeರಾಜ್ಯಕೈಕೊಟ್ಟ ಮುಂಗಾರು : ರಾಜ್ಯದ ಹಲವು ಜಿಲ್ಲೆಗಳ ರೈತರು ಕಂಗಾಲು

ಕೈಕೊಟ್ಟ ಮುಂಗಾರು : ರಾಜ್ಯದ ಹಲವು ಜಿಲ್ಲೆಗಳ ರೈತರು ಕಂಗಾಲು

Farmers anxious over scanty rainfall

ಬೆಂಗಳೂರು, ಜೂ. 23- ಮುಂಗಾರು ಮಳೆ ಹಿನ್ನಡೆಯಿಂದ ರಾಜ್ಯದ ಹಲವು ಕಡೆ ಕೃಷಿ ಚಟುವಟಿಕೆಗಳು ಕುಂಟುತ್ತಾ ಸಾಗುತ್ತಿದ್ದು, ದಾವಣಗೆರೆ, ಕಲಬುರಗಿ, ಬೆಳಗಾವಿ, ಹಾವೇರಿ, ಚಿತ್ರದುರ್ಗ, ವಿಜಾಪುರ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿತ್ತಿದ ಬೆಳೆಗಳು ಒಣಗಿ ರೈತರು ಕಂಗಾಲಾಗಿದ್ದಾರೆ.

ಮಧ್ಯ ಕರ್ನಾಟಕ ಮತ್ತು ಹಳೇ ಮೈಸೂರು ಭಾಗದಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದರೂ, ಬಿತ್ತನೆ ಚಟುವಟಿಕೆಗೆ ಅನುಕೂಲಕರ ವಾತಾವರಣ ಇಲ್ಲ. ಕೆಲವೆಡೆ ರೈತರು ಅವಧಿ ಪೂರ್ವ ಮುಂಗಾರನ್ನು ನಂಬಿಕೊಂಡು ಮೆಕ್ಕೆಜೋಳದಂತಹ ಬೆಳೆಗಳನ್ನು ಬಿತ್ತಿದ್ದರೂ, ಸಮರ್ಪಕ ಮಳೆಯಾಗದೇ ನೀರಿಲ್ಲದೆ ಬೆಳೆಗಳು ಒಣಗಿ ರೈತರು ಕೈ ಸುಟ್ಟುಕೊಂಡಿದ್ದಾರೆ.

ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮೆಕ್ಕೆಜೋಳದ ಬೆಳೆ ಒಣಗಿ ಹೋಗಿದೆ. ಜೊತೆಗೆ ಕೀಟ ಬಾಧೆ ಕೂಡ ರೈತರನ್ನು ಕಂಗಲಾಗುವಂತೆ ಮಾಡಿದೆ. ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನಲ್ಲೂ ಬಿತ್ತಿದ ಮೆಕ್ಕೆಜೋಳ ಒಣಗಿ ಹೋಗಿದ್ದು ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಆರಂಭದಲ್ಲೇ ಒಣಗಿದ ಬೆಳೆೆಗೆ ವಿಮಾ ಸೌಲಭ್ಯ ದೊರೆಯುವುದಿಲ್ಲ. ಬಿತ್ತನೆಗಾಗಿ ಉಳುಮೆ ಮಾಡಿ, ಇತರ ಕೃಷಿ ಚಟುವಟಿಕೆಗಳು, ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ಹಣ ಖರ್ಚು ಮಾಡಲಾಗಿದೆ. ಈಗ ರೈತರು ಆರಂಭದಲ್ಲೇ ಕೈ ಸುಟ್ಟುಕೊಳ್ಳುವ ಪರಿಸ್ಥಿತಿ ಎದುರಾಗಿದೆ.

2026ನೇ ಸಾಲಿನಲ್ಲಿ ನೈರುತ್ಯ ಮುಂಗಾರು ಕ್ಷೀಣವಾಗಿದ್ದು, ಮಳೆನಾಡು, ಕರಾವಳಿ ಹೊರತು ಪಡಿಸಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಕೊರತೆ ಕಂಡು ಬಂದಿದೆ.ಬೃಹತ್‌ ಜಲಾಶಗಳಾದ ಕೆ.ಆರ್‌.ಎಸ್‌‍, ಕಬಿನಿ, ಹೇಮಾವತಿ ಸೇರಿದಂತೆ ಹಲವು ಅಣೆಕಟ್ಟೆಗಳು ನೀರಿನ ಸಂಗ್ರಹದಲ್ಲಿ ಸಾಮಾನ್ಯ ವರ್ಷಕ್ಕಿಂತಲೂ ಕಡಿಮೆ ಇದೆ. ರಾಗಿ, ಭತ್ತ, ದ್ವಿದಳ ಹಾಗೂ ಸಿರಿ ಧಾನ್ಯಗಳ ಬಿತ್ತನೆಯಲ್ಲಿ ಹಿನ್ನಡೆಯಾಗಿದೆ.

ಕರ್ನಾಟಕ ಗ್ರಾಮೀಣ ಆರ್ಥಿಕತೆ ಈ ವರ್ಷ ಸಂಕಷ್ಟಕ್ಕೊಳಗಾಗುವ ಮತ್ತು ಆಹಾರೋತ್ಪಾದನೆ ನಿರೀಕ್ಷೆಗಿಂತಲೂ ಕಡಿಮೆಯಾಗುವ ಸಾಧ್ಯತೆಗಳಿವೆ. ನೈರುತ್ಯ ಮುಂಗಾರಿನ ಕೊರತೆಯಿಂದ ಕೃಷಿ ಚಟುವಟಿಕೆಗಳನ್ನು ನಿರ್ವಹಿಸಲಾಗದೆ ಹಾಗೂ-ಹೀಗೂ ಬಿತ್ತಿದ ಬೆಳೆಗಳು ಒಣಗಿ ಹೋಗುತ್ತಿರುವುದರಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ.

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ಕೃಷಿ ಚಟುವಟಿಕೆಗಳು ದುಬಾರಿಯಾಗಿವೆ. ಬಿತ್ತನೆ ಸಂದರ್ಭದಲ್ಲೇ ಬೆಲೆಗಳು ಒಣಗುತ್ತಿರುವುದರಿಂದ ವಿಮಾ ಸೌಲಭ್ಯಗಳು ದೊರೆಯುತ್ತಿಲ್ಲ, ನಷ್ಟಕ್ಕೊಳಗಾಗುತ್ತಿರುವ ರೈತರ ಅಳಲು ಅರಣ್ಯರೋಧನವಾಗುತ್ತಿದೆ.

ರಾಜ್ಯ ಸಚಿವ ಸಂಪುಟದಲ್ಲಿ ಕೇವಲ 13 ಮಂದಿ ಮಾತ್ರ ಸಚಿವರಿದ್ದಾರೆ. 20 ಸ್ಥಾನಗಳು ಖಾಲಿ ಇವೆ. ಪೂರ್ಣ ಪ್ರಮಾಣದ ಸಂಪುಟ ವಿಸ್ತರಣೆಯಾಗಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕವೂ ಆಗಿಲ್ಲ. ಹೀಗಾಗಿ ರೈತರ ಗೋಳು ಕೇಳುವವರಿಲ್ಲ ಎನ್ನುವಂತಾಗಿದೆ. ಕೃಷಿ ಖಾತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಬಳಿಯೇ ಇದೆ. ಈಗಾಗಲೇ ಒಮೆ ಉನ್ನತಾಧಿಕಾರಿಗಳ ಜೊತೆ ಚರ್ಚೆ ನಡೆಸಿರುವ ಮುಖ್ಯಮಂತ್ರಿಯವರು, ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲೆಯ ಮುಖ್ಯ ಪೊಲೀಸ್‌‍ ಅಧಿಕಾರಿಗಳ ಜೊತೆಯಲ್ಲೂ ಎರಡನೇ ಸುತ್ತಿನ ಸಭೆ ನಡೆಸಿದ್ದಾರೆ.

ಜಿಲ್ಲೆಗಳಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳಿಗೆ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ಜೊತೆಗೆ ಮಳೆ ಕೊರತೆಯಿಂದಾಗಿ ನೀರಿನ ಅವಲಂಬನೆ ಹೆಚ್ಚಿರುವ ಬೆಳೆಗಳನ್ನು ಬೆಳೆಯದಂತೆಯೂ ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ. ಆದರೆ ಕೃಷಿಯಲ್ಲಾಗುತಿರುವ ನಷ್ಟಗಳಿಗೆ ತ್ವರಿತವಾದ ಸ್ಪಂದನೆಗಳು ಮತ್ತು ಪರಿಹಾರದ ಅಗತ್ಯವಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿಯನ್ನು ಆದ್ಯ ವಿಷಯವನ್ನಾಗಿ ಪರಿಗಣಿಸುವ ಅಗತ್ಯ ಇದೆ.

RELATED ARTICLES

Latest News