ಬೆಂಗಳೂರು, ಮೇ 28-ಚಿನಿವಾರಪೇಟೆಯಲ್ಲಿ ಚಿನ್ನ ಮತ್ತು ದರಗಳಲ್ಲಿ ನಿರಂತರ ಕುಸಿತವಾಗುತ್ತಿದ್ದು, ಗ್ರಾಹಕರಿಗೆ ಸಮಾಧಾನವಾಗಿದ್ದರೆ, ವರ್ತಕರಿಗೆ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಮಧ್ಯಪ್ರಾಚ್ಯದ ಬಿಕ್ಕಟ್ಟು ಶಮನಗೊಳ್ಳುವ ಪ್ರಯತ್ನದ ನಂತರ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಏರಿಕೆಯಾಗಬಹುದು ಎಂಬ ನಿರೀಕ್ಷೆ ವರ್ತಕರಲ್ಲಿತ್ತು. ಆದರೆ, ಸತತ ಕುಸಿತವಾಗುತ್ತಿರುವ ಚಿನ್ನ ಮತ್ತು ಬೆಳ್ಳಿ ದರಗಳಿಂದ ಸಂಕಷ್ಟ ಎದುರಿಸುವಂತಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತುತ ಜಾಗತಿಕ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಒಂದು ವರ್ಷ ಚಿನ್ನ ಖರೀದಿ ಮುಂದೂಡುವಂತೆ ಕರೆ ನೀಡಿದ್ದಾರೆ. ಇದರ ಬೆನ್ನಲ್ಲೇ ದರ ಕುಸಿತವಾಗುತ್ತಿರುವುದು ಆತಂಕಕ್ಕೆ ಪ್ರಮುಖ ಕಾರಣವಾಗಿದೆ.
ಮೇ 22ರಿಂದ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದ ಚಿನ್ನ ಮೇ 25ರಂದು ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ನಂತರ ಸತತ ಮೂರು ದಿನಗಳಲ್ಲೂ ಚಿನ್ನದ ದರದಲ್ಲಿ ಕುಸಿತವಾಗಿದೆ.
ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ, ಇಂದು 24 ಕ್ಯಾರೆಟ್ ಚಿನ್ನವು ಒಂದು ಗ್ರಾಂಗೆ 223 ರೂ. ಕಡಿಮೆಯಾಗಿದ್ದು, 15,606 ರೂಪಾಯಿಯಷ್ಟಿದೆ. 22 ಕ್ಯಾರೆಟ್ ಚಿನ್ನವು ಒಂದು ಗ್ರಾಂಗೆ 205 ರೂ. ಇಳಿಕೆಯಾಗಿದ್ದು, 14,305 ರೂಪಾಯಿಯಷ್ಟಿದೆ. 18 ಕ್ಯಾರೆಟ್ ಚಿನ್ನವು ಒಂದು ಗ್ರಾಂಗೆ 168 ರೂ. ನಷ್ಟು ಇಳಿಕೆಯಾಗಿದ್ದು, 11,704 ರೂಪಾಯಿಯಷ್ಟಿದೆ.
ಚಿನ್ನದಂತೆಯೇ ಬೆಳ್ಳಿ ದರವು ಇಳಿಮುಖದತ್ತ ಸಾಗಿದೆ. ಮೇ 19ರಿಂದಲೂ ಇಳಿಮುಖವಾಗಿರುವ ಬೆಳ್ಳಿಯು ಮೇ 21ರಂದು ಮಾತ್ರ ಒಂದು ಕೆ.ಜಿ.ಗೆ ಐದು ಸಾವಿರ ರೂಪಾಯಿ ಏರಿಕೆಯಾಗಿತ್ತು. ಅನಂತರ ನಾಲ್ಕು ದಿನಗಳ ಕಾಲ ದರ ಸ್ಥಿರವಾಗಿತ್ತು.
ಮೇ 26ರಂದು ಒಂದು ಕೆ.ಜಿ.ಬೆಳ್ಳಿಗೆ ನೂರು ರೂ. ಮಾತ್ರ ಇಳಿಕೆಯಾಗಿತ್ತು. ನಿನ್ನೆ ನೂರು ರೂ. ಏರಿಕೆಯಾಗಿದ್ದ ಬೆಳ್ಳಿಯು ಇಂದು ಒಂದು ಕೆ.ಜಿ.10 ಸಾವಿರ ರೂ. ನಷ್ಟು ಕಡಿಮೆಯಾಗಿದೆ. ಪ್ರಸ್ತುತ 2.75 ಲಕ್ಷ ರೂಪಾಯಿಯಷ್ಟಿದೆ.
