ಮೈಸೂರು,ಆ.4- ನಿನ್ನೆ ಬೆಳಗ್ಗೆ 10 ಗಂಟೆಗೆ ಸಿಎಂ ಫೋನ್ ಮಾಡಿ ಪ್ರಮಾಣವಚನಕ್ಕೆ ಬನ್ನಿ ಎಂದು ಕರೆದರು. ಸ್ವಲ್ಪ ಹೊತ್ತಿನ ನಂತರ ಬಂದ ಲಿಸ್ಟ್ನಲ್ಲಿ ನನ್ನ ಹೆಸರು ಇರಲಿಲ್ಲ , ಏಕೆ ಚೇಂಜ್ ಆಯ್ತು ಗೊತ್ತಿಲ್ಲ ನಂತರ ಮತ್ತೆ ಲಿಸ್ಟ್ನಲ್ಲಿ ಹೆಸರು ಬಂತು. ಏಕೆ ಚೇಂಜ್ ಆಯ್ತು, ಯಾಕೆ ಬಂತು ಎಂಬುದು ನನಗೆ ಗೊತ್ತಿಲ್ಲ. ನಾನು ಯಾರ ರಿಪ್ಲೇಸ್ಮೆಂಟ್, ಅದು-ಇದು ಯಾವುದು ನನಗೆ ಗೊತ್ತಿಲ್ಲ. ಈಗ ಮಂತ್ರಿ ಆಗಿದ್ದೇನೆ ಎಂದು ನೂತನ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ವರ್ಧಂತಿ ಮಹೋತ್ಸವದಲ್ಲಿ ಪಾಲ್ಗೊಂಡ ಬಳಿಕ ಚಾಮುಂಡಿ ಬೆಟ್ಟದಲ್ಲಿ ದಾವಣಗೆರೆ ಉಪ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಗದ್ದಲದ ಬಗ್ಗೆ ಮಾತನಾಡಿದ ಅವರು, ದಾವಣಗೆರೆ ಉಪ ಚುನಾವಣೆ ಗದ್ದಲ ವಿಚಾರ ಎಲ್ಲವೂ ಮುಗಿದು ಹೋಗಿದೆ. ಏನೇ ಬೆಳವಣಿಗೆ ಆಗಿದ್ದರೂ ಅದನ್ನು ತಾಯಿ ಚಾಮುಂಡೇಶ್ವರಿ ದೇವಿ ನೋಡಿಕೊಳ್ಳುತ್ತಾಳೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಕುಟುಂಬ ಸದಸ್ಯರೊಂದಿಗೆ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದರು.ಸಂಪುಟ ವಿಸ್ತರಣೆಯ ಬಳಿಕ ಸಚಿವರ ಈ ಹೇಳಿಕೆ ಕಾಂಗ್ರೆಸ್ನಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.
