ದುಬಾರೆ,ಮೇ19- ಇಲ್ಲಿನ ಆನೆ ಸಾಕಾಣಿಕೆ ಶಿಬಿರದಲ್ಲಿ ನಿನ್ನೆ ನಡೆದ ಆನೆಗಳ ಕಾಳಗದಲ್ಲಿ ಮಾರ್ತಾಂಡ ಎಂಬ ಆನೆ ಮೃತಪಟ್ಟಿದೆ. ಆನೆಗಳಿಗೆ ಸ್ನಾನ ಮಾಡಿಸುವಾಗ ಕಂಜನ್ ಎಂಬ ಆನೆ, ಮಾರ್ತಾಂಡನ ಮೇಲೆ ದಾಳಿ ನಡೆಸಿತ್ತು.
ಈ ವೇಳೆ ಸಮೀಪದಲ್ಲೇ ಫೋಟೋ ತೆಗೆಯುತ್ತಿದ್ದ ತಮಿಳುನಾಡು ಮೂಲದ ಜೋಯಿನಿ ಎಂಬ ಮಹಿಳೆ ಮೃತಪಟ್ಟಿದ್ದರು. ಕಂಜನ್ ತನ್ನ ದಂತದಿಂದ ತಿವಿದ ಹಿನ್ನೆಲೆಯಲ್ಲಿ ಮಾರ್ತಾಂಡ ಉರುಳಿಬಿದ್ದು ತೀವ್ರವಾಗಿ ಗಾಯಗೊಂಡಿತ್ತು.
ಮಾವುತರು ಹಾಗೂ ಅರಣ್ಯ ಸಿಬ್ಬಂದಿ ಅದನ್ನು ರಕ್ಷಿಸಿ ಚಿಕಿತ್ಸೆ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮಾರ್ತಾಂಡ ಆನ ಕೊನೆಯುಸಿರೆಳೆದಿದೆ.ಮಾರ್ತಾಂಡ ಆನೆಯು ದಸರಾ ಮೆರವಣಿಗೆಯಲ್ಲೂ ಕೂಡ ಪಾಲ್ಗೊಂಡಿತ್ತು ಎಂದು ಡಿಎಫ್ಒ ಅಭಿಷೇಕ್ ಈ ಸಂಜೆಗೆ ತಿಳಿಸಿದ್ದಾರೆ.
ಎಲ್ಲರೊಂದಿಗೂ ಸೌಮ್ಯ ಸ್ವಭಾವದಿಂದ ಬೆರೆಯುತ್ತಿದ್ದ ಮಾರ್ತಾಂಡನ ಸಾವಿನಿಂದ ಸ್ಥಳೀಯರು ಹಾಗೂ ಮಾವುತರು ಕಣ್ಣೀರು ಹಾಕಿದ್ದಾರೆ. ಈ ದುರಂತಕ್ಕೆ ಸಂಬಂಧಿಸಿದಂತೆ ಈಗಾಗಲೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ತನಿಖೆಗೆ ಆದೇಶಿಸಿದ್ದಾರೆ. ಇಲ್ಲಿನ ವ್ಯವಸ್ಥೆ ಮತ್ತು ಪ್ರವಾಸಿಗರ ಸುರಕ್ಷತೆ ಬಗ್ಗೆ ಸರಿಯಾದ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
