ಬೆಂಗಳೂರು,ಏ.15- ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನಲ್ಲಿರುವ ಆದಿಚುಂಚನಗಿರಿಯ ಶ್ರೀಗುರು ಭೈರವೈಕ್ಯಮಂದಿರ ಉದ್ಘಾಟನೆಗೆ ಆಗಮಿಸಿದ ಪ್ರಧಾನಿ ನರೇಂದ್ರಮೋದಿ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜೊತೆ ನಡೆಸಿದ ಮಾತುಕತೆ ಎಲ್ಲರ ಗಮನಸೆಳೆಯಿತು.
ಬೆಟ್ಟದ ತಪ್ಪಲಿನಲ್ಲಿರುವ ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆಗೊಳಿಸಿ, ಬಿಜಿಎಸ್ ಕ್ರೀಡಾಂಗಣದಲ್ಲಿ ಹಮಿಕೊಂಡಿದ್ದ ಕಾರ್ಯಕ್ರಮದ ವೇದಿಕೆಗೆ ಆಗಮಿಸುತ್ತಿದ್ದಂತೆ ಕುರ್ಚಿಯಲ್ಲಿ ಆಸೀನರಾಗಿದ್ದ ದೇವೇಗೌಡರಿಗೆ ಮೋದಿಯವರು ಹಸ್ತಲಾಘವ ಮಾಡಿ, ಯೋಗಕ್ಷೇಮ ವಿಚಾರಿಸಿದರು. ಪರಸ್ಪರ ಇಬ್ಬರೂ ನಾಯಕರು ಉಭಯ ಕುಶಲೋಪರಿ ನಡೆಸಿದರು.
ವೇದಿಕೆ ಮೇಲೆ ಮೋದಿ ಮತ್ತು ದೇವೇಗೌಡರ ನಡುವೆ ನಡೆದ ಈ ಸಂಭಾಷಣೆ ನೆರೆದಿದ್ದ ಎಲ್ಲರ ಗಮನವನ್ನು ಸೆಳೆಯಿತು ಹಾಗೂ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತು.ನಂತರ ಭಾಷಣ ಮಾಡುವ ಸಂದರ್ಭದಲ್ಲೂ ಮೋದಿಯವರು ದೇವೇಗೌಡರ ಕೈ ಹಿಡಿದುಕೊಂಡು ಕೆಲಹೊತ್ತು ಮಾತುಕತೆ ನಡೆಸಿದ್ದು ವಿಶೇಷವಾಗಿತ್ತು.
ಇನ್ನು ಭಾಷಣದಲ್ಲೂ ದೇವೇಗೌಡರನ್ನು ಹಾಡಿಹೊಗಳಿದ ಮೋದಿ, ಇಡೀ ವಿಶ್ವಕ್ಕೆ ರಾಗಿ ಮುದ್ದೆಯನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಹೀಗಾಗಿ ಯುವಕರು ಹೆಚ್ಚು ಹೆಚ್ಚು ರಾಗಿ ಮುದ್ದೆಯನ್ನು ಸೇವಿಸಲು ಕರೆಕೊಟ್ಟರು.
