ಬೆಂಗಳೂರು,ಮಾ.2- ರಾಜ್ಯ ಸರ್ಕಾರ ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳಮೀಸಲಾತಿ ಅನುಷ್ಠಾನ ಮಾಡುವ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸಲಹೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅವರ ಶಿಫಾರಸ್ಸಿನ ಪ್ರಕಾರ ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿಯನ್ನು ವರ್ಗೀಕರಿಸಿದೆ. ಇದಕ್ಕೆ ಕೆಲವು ಸಮುದಾಯಗಳು ಆಕ್ಷೇಪ ವ್ಯಕ್ತಪಡಿಸಿವೆ.
ಹೀಗಾಗಿ ಎಲ್ಲಾ ಸಮುದಾಯಗಳ ವಿಶ್ವಾಸವನ್ನು ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು. ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರವಾಗಿದ್ದ ಒಳಮೀಸಲಾತಿ ಕಾಯ್ದೆಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ ಎಂಬ ವಿಷಯವನ್ನು ಮಾಧ್ಯಮಗಳಿಂದ ತಿಳಿದಿದ್ದೇನೆ. ತಮ ಆದೇಶದಲ್ಲಿ ಅವರು ಸರ್ಕಾರಕ್ಕೆ ಏನು ಸೂಚನೆ ಕೊಟ್ಟಿದ್ದಾರೆ ? ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕಿರುವ ನೇಮಕಾತಿಯನ್ನು ಯಾವ ರೀತಿ ಮಾಡಬೇಕು ಎನ್ನುವ ಬಗ್ಗೆ ಸ್ಪಷ್ಟನೆ ಬೇಕಿದೆ. ಇವರು ಮನಸ್ಸು ಮಾಡಿದರೆ ಸಾಧ್ಯತೆ ಇದೆ. ಆದರೆ ಅವರೇ ಗೊಂದಲಕ್ಕೆ ಸಿಲುಕಿದ್ದಾರೆ. ಎಲ್ಲಾ ಸಮುದಾಯದ ಜೊತೆ ಚರ್ಚೆ ಮಾಡಿ, ವಿಶ್ವಾಸಕ್ಕೆ ತೆಗೆದುಕೊಂಡು ನೇಮಕ ಆಗಬೇಕು ಎಂದರು.
ರಾಜ್ಯ ಸರ್ಕಾರ ಒಳ ಮೀಸಲಾತಿ ಕಾನೂನು ಮಾಡಿದೆ. ಹಾಗಾಗಿ ಸಮುದಾಯದವರೂ ಒಳ ಮೀಸಲಾತಿ ಕೊಡಿ ಎಂದು ಕೇಳುತ್ತಿದ್ದಾರೆ. ಸಮಸ್ಯೆಯನ್ನು ಸರಳಗೊಳಿಸಬೇಕು. ಇದಕ್ಕಾಗಿ ಕಾನೂನು ತಜ್ಞರ ಸಲಹೆ ಪಡೆದು ಮಾಡಬೇಕು ಎಂದು ಹೇಳಿದರು.
ಸಂವಿಧಾನದಲ್ಲಿ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಕೊಡಬೇಕೆಂದು ಸಂವಿಧಾನಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಹೇಳಿದ್ದಾರೆ. ನಾಗಮೋಹನ್ ದಾಸ್ ಕಮಿಟಿ ಮುಂದೆ ಸಮುದಾಯಗಳು ಹೋಗಿವೆ. ಅದನ್ನು ನೋಡಿ ಕ್ರಮ ಕೈಗೊಳ್ಳಬೇಕು ಎಂದರು.
ಎಲ್ಲ ದೇಶಗಳಲ್ಲೂ ಕನ್ನಡಿಗರು, ಭಾರತೀಯರು ಇದ್ದಾರೆ. ದೊಡ್ಡ ಪ್ರಮಾಣದಲ್ಲಿ ಭಾರತೀಯರು ಇರುವ ದೇಶಗಳಿವೆ.
ಭಾರತ ಸರ್ಕಾರ ಮಧ್ಯಪ್ರಾಚ್ಯ ರಾಷ್ಟ್ರಗಳ ರಾಯಭಾರ ಕಚೇರಿಗಳ ಜತೆ ಸಂಪರ್ಕದಲ್ಲಿ ಇದೆ. ಭಾರತೀಯರ ಸುರಕ್ಷತೆ ಬಹಳ ಮುಖ್ಯ. ಯುದ್ಧ ಪೀಡಿತ ದೇಶಗಳು ಶಾಂತಿ ಕಾಪಾಡಿಕೊಂಡರೆ ಅವರನ್ನು ಸುರಕ್ಷಿತವಾಗಿ ಕರೆತರಬಹುದು ಎಂದು ಹೇಳಿದರು.
ಖಮೇನಿ ಸಾವಿಗೆ ಇರಾನ್ ಪ್ರತಿಕ್ರಿಯೆ ಕೊಟ್ಟಿರುವ ರೀತಿ ಬಹಳ ಆತಂಕಕಾರಿ
ಈ ಯುದ್ಧ ಇಡೀ ವಿಶ್ವಕ್ಕೆ ಆತಂಕ ತರುವಂಥದ್ದು. ಅಮೆರಿಕ ತನ್ನ ಹಿಡಿತ ತೈಲ ಉತ್ಪಾದನೆ ಮೇಲೆ ಬಿಗಿ ಮಾಡಿಕೊಳ್ಳಲು ಹೊರಟಿದೆ. ಅಮೆರಿಕ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿಲ್ಲ. ಚೈನಾ, ರಷ್ಯಾ ನೇರವಾಗಿ ಇನ್ನೂ ಪ್ರವೇಶ ಮಾಡಿಲ್ಲ, ಕಾದು ನೋಡುತ್ತಿವೆ. ಆ ರಾಷ್ಟ್ರಗಳೂ ಭಾಗಿಯಾಯಿತೆಂದರೆ ಮೂರನೇ ಮಹಾಯುದ್ಧ ಆಗಬಹುದೇನೋ? ಎಂದು ಬೊಮಾಯಿ ಆತಂಕ ವ್ಯಕ್ತಪಡಿಸಿದರು.
