ಬೆಂಗಳೂರು,ಫೆ.12-ಸಹಾಯದ ನೆಪದಲ್ಲಿ ಮಹಿಳೆ ಹಾಗೂ ಆಕೆಯ ಸಹಚರರು ನನ್ನಿಂದ 18 ಲಕ್ಷ ರೂ.ಗಳನ್ನು ಪಡೆದು ವಂಚಿಸಿದ್ದಾರೆಂದು ಸೂಪರ್ ಡೆವಲಪರ್ಸ್ ಸಂಸ್ಥೆಯ ಮಾಲೀಕ ಕೋಣನಕುಂಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸೂಪರ್ ಡೆವಲಪರ್ರಸ ಸಂಸ್ಥೆಯ ಮಾಲೀಕ, ಜೆಪಿನಗರದ ನಿವಾಸಿ ಪ್ರಶಾಂತ್ ಎಂಬುವವರು ಪೂಜಾ ಅಲಿಯಾಸ್ ಭಗವತಿ, ವೀಣಾ ಶ್ಯಾಮ್, ವಿನೋದ್ಕುಮಾರ್, ಸೆಲ್ವ ಕುಮಾರ್ ಹಾಗೂ ಅರುಣ್ಕುಮಾರ್ ಮತ್ತಿತರರ ವಿರುದ್ಧ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಕೋಣನಕುಂಟೆ ಪಿಎಸ್ಐ ಕಿರಣ್ಕುಮಾರ್ ಅವರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ.
ಘಟನೆ ವಿವರ:
ಕಳೆದ 2024 ರ ಅಕ್ಟೋಬರ್ನಲ್ಲಿ ಪೂಜಾ ಅಲಿಯಾಸ್ ಭಗವತಿ ಎಂಬುವವರು ನನಗೆ ಕರೆ ಮಾಡಿ ನನ್ನ ತಂಗಿ ಕೊಯಮತ್ತೂರಿನಲ್ಲಿದ್ದು, ಸ್ವಲ್ಪ ಸಮಸ್ಯೆಯಾಗಿದೆ ಎಂದು ಒಂದೂವರೆ ಲಕ್ಷ ರೂ. ಪಡೆದುಕೊಂಡಿದ್ದರು. ಮತ್ತೆ ಆಕೆ ಕರೆ ಮಾಡಿ ಕ್ರಿಶ್ಚಿಯನ್ ಮಿಷಿನರಿ ಫಂಡ್ ಮೂಲಕ ಬಡ ಜನರಿಗೆ ಕಾರು ಕೊಡುತ್ತಿದ್ದಾರೆ. ಅವರ ಬಳಿ ಹಣ ಇಲ್ಲದೇ ಇರುವುದರಿಂದ ಆ ಕಾರುಗಳನ್ನು ಹಾಗೂ ದ್ವಿಚಕ್ರ ವಾಹನಗಳನ್ನು ನಿಮಗೆ ಶೇ.50 ರಷ್ಟು ಹಣ ನೀಡಿದರೆ ಕೊಡಿಸುವ ಭರವಸೆ ನೀಡಿದ್ದರು.
ಮಾತ್ರವಲ್ಲ ಇದರ ಜೊತೆಗೆ ಪ್ರತಿ ಗ್ರಾಂ ಚಿನ್ನಕ್ಕೆ 4,500 ರೂ.ನಂತೆ ಒಟ್ಟು 180 ಗ್ರಾಂ ಚಿನ್ನವನ್ನು ಕೊಡಿಸುವ ಕಾರಣ ನೀಡಿ ನನ್ನಿಂದ ಹಂತಹಂತವಾಗಿ 18 ಲಕ್ಷ ರೂ.ಗಳನ್ನು ಪಡೆದು ವಂಚಿಸಿದ್ದಾರೆಂದು ಪ್ರಶಾಂತ್ ದೂರಿನಲ್ಲಿ ಮಾಹಿತಿ ನೀಡಿದ್ದಾರೆ.
ನಾನು 18 ಲಕ್ಷ ರೂ.ಗಳನ್ನು ವೀಣಾ ಶ್ಯಾಮ್, ಸೆಲ್ವ ಕುಮಾರ್, ಅರುಣ್ಕುಮಾರ್ ಮತ್ತು ಪೂರ್ಣಿ ಎಂಬುವವರ ಬ್ಯಾಂಕ್ ಖಾತೆಗಳಿಗೆ ಆನ್ಲೈನ್ ಮೂಲಕ ಹಣ ಪಾವತಿ ಮಾಡಿದ್ದೇನೆ. 2025ರ ಮಾರ್ಚ್ ರಂದು ಸಂಜೆ 6.30 ರ ಸುಮಾರಿನಲ್ಲಿ ಪೂಜಾ ಹಾಗೂ ಆಕೆಯ ಸಹಚರರು ಎದುರಿಗೆ ಸಿಕ್ಕಿದ್ದು , ಆಗ ಕಾರ್, ಬೈಕ್ ಮತ್ತು ಚಿನ್ನ ಕೊಟ್ಟಿಲ್ಲ ಎಂದು ಕೇಳಿದಾಗ ವಿನೋದ್ಕುಮಾರ್ ಮತ್ತು ಸೆಲ್ವ ಕುಮಾರ್ ಎಂಬುವವರು ನೀನು ಪೂಜಾಗೆ ಯಾವುದೇ ಹಣ ಕೊಟ್ಟಿಲ್ಲ.
ಇನ್ನೊಮೆ ಹಣ ಕೇಳಿಕೊಂಡು ಬಂದರೆ ನಿನ್ನನ್ನು ಮುಗಿಸಿಬಿಡುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.ಪ್ರಶಾಂತ್ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಕೋಣನಕುಂಟೆ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
