ಬೆಂಗಳೂರು,ಫೆ.22- ಕಾಂಗ್ರೆಸ್ಸಿನ ಗೂಂಡಾಗಿರಿ ರಾಜ್ಯದಲ್ಲೂ ಮಿತಿಮೀರಿದ್ದು, ಎಲ್ಲವನ್ನೂ ಕಾದು ನೋಡುತ್ತಿರುವ ಕನ್ನಡಿಗರು ಸುಮನೆ ಕೂರುವವರಲ್ಲ. ಕಾಂಗ್ರೆಸ್ ಪಕ್ಷವನ್ನು ರಾಜ್ಯದಿಂದ ಒದ್ದು ಓಡಿಸುವ ಕಾಲ ದೂರವಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಎಚ್ಚರಿಸಿದ್ದಾರೆ.
ತಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಎಐ ಸಮಿಟ್ನಲ್ಲಿ ಭಾರತದ ಮರ್ಯಾದೆಯನ್ನು ಹಾಳು ಮಾಡಲು ಬಂದ ಕಾಂಗ್ರೆಸ್ಸಿಗರಿಗೆ ಸಾರ್ವಜನಿಕರೇ ಬೂಟುಗಾಲಲ್ಲಿ ಒದ್ದು ಆಚೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ನಡೆದ ಎಐ ಶೃಂಗಸಭೆಯಲ್ಲಿ ಭಾರತ-ಅಮೆರಿಕ ವಾಣಿಜ್ಯ ಒಪ್ಪಂದದ ವಿರುದ್ಧವಾಗಿ ಶರ್ಟ್ ಬಿಚ್ಚಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ದೆಹಲಿ ನ್ಯಾಯಾಲಯವು ಶನಿವಾರ ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.
ಆರೋಪಿಗಳನ್ನು ಐದು ದಿನಗಳ ಕಸ್ಟಡಿಗೆ ನೀಡುವಂತೆ ಕೋರಿದ ದೆಹಲಿ ಪೊಲೀಸರ ಮನವಿಗೆ ಮ್ಯಾಜಿಸ್ಟ್ರೇಟ್ ರವಿ ಅಸ್ತು ಎಂದಿದ್ದಾರೆ. ಬಂಧಿತ ಪ್ರತಿಭಟನಾಕಾರರು ಬಿಹಾರದ ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಕೃಷ್ಣ ಹರಿ, ಬಿಹಾರದ ಐವೈಸಿ ರಾಜ್ಯ ಕಾರ್ಯದರ್ಶಿ ಕುಂದನ್ ಯಾದವ್, ಉತ್ತರ ಪ್ರದೇಶದ ಐವೈಸಿ ರಾಜ್ಯ ಅಧ್ಯಕ್ಷ ಅಜಯ್ ಕುಮಾರ್ ಮತ್ತು ತೆಲಂಗಾಣದ ನರಸಿಂಹ ಯಾದವ್.
ಕಾರ್ಯಕ್ರಮ ಸ್ಥಳದಲ್ಲಿ ದೇಶವಿರೋಧಿ ಘೋಷಣೆಗಳನ್ನು ಈ ಕಾಂಗ್ರೆಸ್ ಕಾರ್ಯಕರ್ತರು ಕೂಗಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಕ್ಷೇಪಾರ್ಹ ಚಿತ್ರಗಳಿರುವ ಟಿ-ಶರ್ಟ್ಗಳನ್ನು ಧರಿಸಿದ್ದಾರೆ ಎಂದು ಪೊಲೀಸರು ವಾದಿಸಿ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು.
ಹಾಗೆಯೇ ಆರೋಪಿಗಳ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಬೇಕಾಗಿದೆ. ಅವರು ವಿವಿಧ ರಾಜ್ಯಗಳಿಂದ ಬಂದವರಾಗಿರುವುದರಿಂದ ಕಸ್ಟಡಿ ವಿಚಾರಣೆ ಅಗತ್ಯ. ಇದು ಗಂಭೀರ ವಿಷಯ. ಪೊಲೀಸರು ತಡೆಯಲು ಪ್ರಯತ್ನಿಸಲಾಗಿದೆ. ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರ ಪರ ವಕೀಲರು ವಾದಿಸಿದ್ದಾರೆ.
ಇದಲ್ಲದೆ ಪ್ರತಿಭಟನೆಯನ್ನು ಆಯೋಜಿಸುವ ಹಿಂದಿನ ಪಿತೂರಿ, ಹಣಕಾಸಿನ ಮೂಲ ಮತ್ತು ಟಿ-ಶರ್ಟ್ಗಳನ್ನು ಎಲ್ಲಿ ಮುದ್ರಿಸಲಾಗಿದೆ ಎಂಬುದನ್ನು ಕಂಡುಹಿಡಿಯಬೇಕು ಎಂದು ವಕೀಲರು ಹೇಳಿದ್ದಾರೆ.
ಇನ್ನು ಎಐ ಶೃಂಗಸಭೆಯಲ್ಲಿ ಪ್ರತಿಭಟನೆ ನಡೆಸಿದ್ದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಶನಿವಾರ ಮುಂಬೈನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ಘೋಷಣೆಗಳನ್ನು ಕೂಗಿದೆ. ಇನ್ನೊಂದೆಡೆ ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸುವ ಮೂಲಕ ಪ್ರತಿಭಟಿಸುವ ಹಕ್ಕನ್ನು ಕಸಿಯಲಾಗುತ್ತಿದೆ ಎಂದು ವಿಪಕ್ಷಗಳು ಆರೋಪಿಸಿದೆ.
