ಮೈಸೂರು,ಏ.23- ಈಜಲು ಹೊಳೆಗಿಳಿದಿದ್ದ ಅರಣ್ಯ ರಕ್ಷಕರೊಬ್ಬರು ಸಾವನ್ನಪ್ಪಿರುವ ಘಟನೆ ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಹೊಳೆಯಲ್ಲಿ ನಡೆದಿದೆ. ಅಂಕನಾಥಪುರದ ಸುಪ್ರೀತ್ ಮೃತಪಟ್ಟ ಅರಣ್ಯ ರಕ್ಷಕ.
ನಾಗರಹೊಳೆಯ ಅಂತರ್ಸಂತೆ ವಲಯದಲ್ಲಿ ಅರಣ್ಯ ರಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಸುಪ್ರೀತ್ ನಿನ್ನೆ ಕೆಲಸ ಮುಗಿಸಿಕೊಂಡು ಮನೆಗೆ ತೆರಳಿದ್ದು, ಈ ವೇಳೆ ಕಬಿನಿ ಹೊಳೆಯಲ್ಲಿ ಈಜಲು ಹೋದಾಗ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ರಾತ್ರಿಯಾದರೂ ಮನೆಗೆ ಬಾರದಿದ್ದಾಗ ಆತಂಕಗೊಂಡ ಪೋಷಕರು ಕಚೇರಿಯಲ್ಲಿ ವಿಚಾರಿಸಿದ್ದಾರೆ. ಕೆಲಸ ಮುಗಿಸಿಕೊಂಡು ಮನೆಗೆ ತೆರಳಿದರು ಎಂದು ಸಿಬ್ಬಂದಿಗಳು ತಿಳಿಸಿದ್ದು, ಅಂತರ್ಸಂತೆ ವಲಯದಲ್ಲಿ ಹುಡುಕಾಟ ನಡೆಸಿದ್ದಾರೆ.
ಹೊಳೆಯ ಬಳಿ ಈಜಲು ಹೋಗಿ ಮೃತಪಟ್ಟಿರುವು ತಿಳಿದುಬಂದಿದ್ದು, ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಗಳು ಪತ್ತೆಕಾರ್ಯ ಮುಂದುವರೆಸಿದ್ದಾರೆ.
