ನವದೆಹಲಿ, ಜು.30- ಅಸ್ಸಾಂನಲ್ಲಿ ಮುಂದುವರಿದಿರುವ ಪ್ರವಾಹದ ಪರಿಸ್ಥಿತಿ ತೀವ್ರ ಕಳವಳಕಾರಿಯಾಗಿದ್ದು, ಪ್ರವಾಹಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಶಿವಸಾಗರ್ ಮತ್ತು ಗೋಲಾಘಾಟ್ ಜಿಲ್ಲೆಗಳಲ್ಲಿ ಹೊಸದಾಗಿ ಮೂರು ಸಾವುಗಳು ವರದಿಯಾಗಿರುವುದಾಗಿ ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್ಡಿಎಂಎ) ತನ್ನ ಇತ್ತೀಚಿನ ಬುಲೆಟಿನ್ನಲ್ಲಿ ತಿಳಿಸಿದೆ.
ಶಿವಸಾಗರ್, ಚಾರೈಡಿಯೊ, ಗೋಲಾಘಾಟ್, ಜೋರ್ಹತ್, ನಾಗಾಂವ್, ಬಿಸ್ವಾನಾಥ್ ಮತ್ತು ಕಾಮರೂಪ್ ಮೆಟ್ರೋಪಾಲಿಟನ್ ಸೇರಿದಂತೆ ಒಟ್ಟು 7 ಜಿಲ್ಲೆಗಳು ಪ್ರವಾಹದ ತೀವ್ರ ಸಂಕಷ್ಟವನ್ನು ಎದುರಿಸುತ್ತಿವೆ.
ರಾಜ್ಯದಾದ್ಯಂತ ಒಟ್ಟು 3,00,031 ಜನರು ಇನ್ನೂ ಪ್ರವಾಹದ ಬಾಧೆ ಅನುಭವಿ ಸುತ್ತಿದ್ದು, ಚರೈಡಿಯೊ ಜಿಲ್ಲೆಯಲ್ಲಿ ಅತಿ ಹೆಚ್ಚು (1.37 ಲಕ್ಷಕ್ಕೂ ಅಧಿಕ) ಜನರು ಸಂಕಷ್ಟದಲ್ಲಿದ್ದಾರೆ. 21,523 ಹೆಕ್ಟೇರ್ಗೂ ಅಧಿಕ ಬೆಳೆ ಪ್ರದೇಶ ನೀರಿನಲ್ಲಿ ಮುಳುಗಿದೆ. ಸಾವಿರಾರು ಜಾನುವಾರುಗಳು ಹಾಗೂ ಪ್ರಾಣಿಗಳು ಪ್ರವಾಹಕ್ಕೆ ಸಿಲುಕಿ ಜೀವನಷ್ಟ ಉಂಟಾಗಿದೆ. ಸುಮಾರು 71 ಪರಿಹಾರ ಶಿಬಿರಗಳಲ್ಲಿ 16,500ಕ್ಕೂ ಹೆಚ್ಚು ನಿರಾಶ್ರಿತರು ಆಶ್ರಯ ಪಡೆದಿದ್ದು, ವೈದ್ಯಕೀಯ ಮತ್ತು ರಕ್ಷಣಾ ತಂಡಗಳು ಕಾರ್ಯಾಚರಣೆ ಮುಂದುವರೆಸಿವೆ.
ಕೇಂದ್ರ ಸರ್ಕಾರದ ನೆರವು
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಪ್ರವಾಹ ಪರಿಸ್ಥಿತಿ ಹಾಗೂ ಪರಿಹಾರ ಕಾರ್ಯಗಳ ಕುರಿತು ಮಾಹಿತಿ ಪಡೆದಿದ್ದಾರೆ. ಕೇಂದ್ರದಿಂದ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ನೆರವಾಗಲು ಹಾಗೂ ಪ್ರವಾಹ ಪೀಡಿತ ನಾಗರಿಕರು ಪಡೆದಿರುವ ಸಾಲಗಳಿಗೆ ವಿಶೇಷ ವಿನಾಯಿತಿ ಮತ್ತು ಬೆಂಬಲ ಕ್ರಮಗಳ ಕುರಿತು ಚರ್ಚಿಸಲು ಇಂದು ಅಸ್ಸಾಂನ ಎಲ್ಲಾ ಬ್ಯಾಂಕ್ಗಳ ಪ್ರತಿನಿಧಿಗಳೊಂದಿಗೆ ಉನ್ನತ ಮಟ್ಟದ ಸಭೆ ಕರೆಯಲಾಗಿದೆ.
