ಬೆಂಗಳೂರು,ಜು.30- ಜೊತೆಯಲ್ಲಿ ವಾಸವಿದ್ದ ಬಿಹಾರದ ಯುವತಿಯನ್ನು ಕೊಲೆ ಮಾಡಿ ಆರೋಪಿ ಪರಾರಿಯಾಗಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಬಿಹಾರ ಮೂಲದ ರೀಮಾಕುಮಾರಿ (20) ಕೊಲೆಯಾದ ಯುವತಿ. ಆರೋಪಿ ಧೀರಜ್ಕುಮಾರ್ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ರೀಮಾ ಕುಮಾರಿ ಹಾಗೂ ಧೀರಜ್ಕುಮಾರ್ ತಾವು ದಂಪತಿ ಎಂದು ಹೇಳಿಕೊಂಡು ಗೇರುಪಾಳ್ಯದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು. ರೀಮಾ ಪದವಿ ವ್ಯಾಸಂಗ ಮಾಡಿದ್ದು, ನಗರದ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಧೀರಜ್ಕುಮಾರ್ ಸಹ ಕಾರ್ಖಾನೆಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದನು.
ಆರೋಪಿ ಧೀರಜ್ಕುಮಾರ್ ಯಾವುದೋ ವಿಚಾರಕ್ಕೆ ರೀಮಾ ಜೊತೆ ಜಗಳವಾಡಿ ವೇಲ್ನಿಂದ ಕುತ್ತಿಗೆ ಬಿಗಿದು, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಶವವನ್ನು ಬೆಡ್ಶೀಟ್ನಲ್ಲಿ ಸುತ್ತಿಟ್ಟು ಮನೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ.
ಕಳೆದ ಶನಿವಾರ ಧೀರಜ್ಕುಮಾರ್ ಮನೆಯಿಂದ ಹೊರಗೆ ಹೋಗುವುದನ್ನು ಸ್ಥಳೀಯರು ಗಮನಿಸಿದ್ದಾರೆ. ನಂತರ ರೀಮಾ ಕಾಣಿಸಿಕೊಂಡಿಲ್ಲ. ಮನೆಯಿಂದಲೂ ಹೊರಗೆ ಹೋಗಿಲ್ಲ. ನಿನ್ನೆ ಇವರು ವಾಸವಾಗಿದ್ದ ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಅಕ್ಕಪಕ್ಕದವರು ಗಮನಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ನೆರವಿನಿಂದ ಬಾಗಿಲು ಒಡೆದು ನೋಡಿದಾಗ ರೀಮಾಳನ್ನು ಕೊಲೆ ಮಾಡಿ ಬೆಡ್ಶೀಟ್ನಲ್ಲಿ ಸುತ್ತಿರುವುದು ಕಂಡು ಬಂದಿದೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗಾಗಿ ಶೋಧ ಕೈಗೊಂಡಿದ್ದಾರೆ.
