ಬೆಂಗಳೂರು,ಮೇ 29- ಸ್ವಾತಂತ್ರ್ಯ ಬಂದ 1947 ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 23 ಮುಖ್ಯಮಂತ್ರಿಗಳು ಅಧಿಕಾರ ನಡೆಸಿದ್ದಾರೆ.ಮೊದಲ ಮುಖ್ಯಮಂತ್ರಿ ಕೆ.ಚೆಂಗಲರಾಯರೆಡ್ಡಿ ಅವರಿಂದ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯನವರವರೆಗೆ ರಾಜ್ಯದಲ್ಲಿ 23 ಮುಖ್ಯಮಂತ್ರಿಗಳು ಆಳ್ವಿಕೆ ನಡೆಸಿದ್ದು, ಸದ್ಯದಲ್ಲೇ ಮುಖ್ಯಮಂತ್ರಿಯಾಗಲಿರುವ ಡಿ.ಕೆ.ಶಿವಕುಮಾರ್ 24ನೇ ಮುಖ್ಯಮಂತ್ರಿಯಾಗಲಿದ್ದಾರೆ.
ಇದುವರೆಗೂ 9 ಮಂದಿ ಲಿಂಗಾಯತ ಸಮುದಾಯವರು, 7 ಮಂದಿ ಒಕ್ಕಲಿಗ ಸಮುದಾಯದವರು, ಇಬ್ಬರು ಬ್ರಾಹಣ ಸಮುದಾಯದವರು, ಐವರು ಹಿಂದುಳಿದ ವರ್ಗಕ್ಕೆ ಸೇರಿದವರು ಮುಖ್ಯಮಂತ್ರಿಗಳಾಗಿದ್ದಾರೆ. ಸಿದ್ದರಾಮಯ್ಯ ಮತ್ತು ದೇವರಾಜ ಅರಸುರವರು ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ.
ಒಕ್ಕಲಿಗ ಸಮುದಾಯಕ್ಕೆ ಸೇರಿದ ಕೆ.ಸಿ.ರೆಡ್ಡಿ, ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಎಚ್.ಡಿ.ದೇವೇಗೌಡ, ಎಸ್.ಎಂ.ಕೃಷ್ಣ, ಎಚ್.ಡಿ.ಕುಮಾರಸ್ವಾಮಿ(2 ಅವಧಿಗೆ), ಡಿ.ವಿ.ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಈಗ ಡಿ.ಕೆ.ಶಿವಕುಮಾರ್ರವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರೆ, ಈ ಸಮುದಾಯದ 8ನೇ ಮುಖ್ಯಮಂತ್ರಿಯಾಗಲಿದ್ದಾರೆ.
ಲಿಂಗಾಯತ ಸಮುದಾಯಕ್ಕೆ ಸೇರಿದ ಎಸ್.ನಿಜಲಿಂಗಪ್ಪ (2 ಬಾರಿ), ಬಿ.ಡಿ.ಜತ್ತಿ, ಎಸ್.ಆರ್.ಕಂಠಿ, ವೀರೇಂದ್ರಪಾಟೀಲ್(2 ಬಾರಿ), ಎಸ್.ಆರ್.ಬೊಮಾಯಿ, ಜೆ.ಎಚ್.ಪಟೇಲ್, ಬಿ.ಎಸ್.ಯಡಿಯೂರಪ್ಪ(4), ಜಗದೀಶ್ಶೆಟ್ಟರ್, ಬಸವರಾಜ ಬೊಮಾಯಿ ಅವರು ಮುಖ್ಯಮಂತ್ರಿಯಾಗಿ ರಾಜ್ಯದ ಆಡಳಿತ ನಡೆಸಿದ್ದರು.
ಬ್ರಾಹಣ ಸಮುದಾಯಕ್ಕೆ ಸೇರಿದ ಆರ್.ಗುಂಡೂರಾವ್ ಹಾಗೂ ರಾಮಕೃಷ್ಣ ಹೆಗಡೆ(3 ಬಾರಿ), ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು.ಹಿಂದುಳಿದ ವರ್ಗಕ್ಕೆ ಸೇರಿದ ಡಿ.ದೇವರಾಜ ಅರಸು(2 ಬಾರಿ), ಎಸ್.ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರ್ಮಸಿಂಗ್ ಹಾಗೂ ಸಿದ್ದರಾಮಯ್ಯ (2 ಬಾರಿ) ಮುಖ್ಯಮಂತ್ರಿಗಳಾಗಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿಯಾಗಿರುವವರ ಜಾತಿವಾರು ಪ್ರಾತಿನಿಧ್ಯವನ್ನು ನೋಡಿದರೆ ಲಿಂಗಾಯತ ಸಮುದಾಯಕ್ಕೆ ಸಿಂಹಪಾಲು ದೊರೆತಿದೆ. ಒಂಬತ್ತು ಮಂದಿ ಲಿಂಗಾಯತ ಸಮುದಾಯದವರು ಮುಖ್ಯಮಂತ್ರಿಯಾಗಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ 7 ಮಂದಿಗೆ ಮುಖ್ಯಮಂತ್ರಿಯಾಗುವ ಅವಕಾಶ ದೊರೆತಿದ್ದು ಎರಡನೇ ಸ್ಥಾನದಲ್ಲಿದೆ.
ಹಿಂದುಳಿದ ವರ್ಗಕ್ಕೆ ಮೂರನೇ ಸ್ಥಾನ ದೊರೆತಿದ್ದು 5 ಮಂದಿ ಮುಖ್ಯಮಂತ್ರಿಗಳಾಗಿದ್ದಾರೆ. ನಾಲ್ಕನೇ ಸ್ಥಾನ ಬ್ರಾಹಣ ಸಮುದಾಯಕ್ಕೆ ದೊರೆತಿದ್ದು, ಇಬ್ಬರು ಮುಖ್ಯಮಂತ್ರಿಗಳಾಗಿದ್ದಾರೆ.
ಆದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಇದುವರೆಗೂ ಮುಖ್ಯಮಂತ್ರಿಯಾಗುವ ಅವಕಾಶ ಕೂಡಿಬಂದಿಲ್ಲ.
