ಬೆಂಗಳೂರು, ಮೇ 22- ಹೊಸ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಕಾಂಗ್ರೆಸ್ನ ಹಿರಿಯ-ಕಿರಿಯ ಶಾಸಕರು ಲಾಬಿ ನಡೆಸುತ್ತಿದ್ದು, ಪ್ರಭಾವಿ ನಾಯಕರಿಗೆ ದುಂಬಾಲು ಬಿದ್ದಿದ್ದಾರೆ.
ಹಾಲಿ ಸಚಿವರಲ್ಲಿ ಬಹಳಷ್ಟು ಮಂದಿ ಮಾಜಿಗಳಾಗುವ ಸಾಧ್ಯತೆ ಇದೆ. ಅಂತವರು ಕೂಡ ಅಧಿಕಾರದ ಉಳಿವಿಗಾಗಿ ಹೈಕಮಾಂಡ್ ಮಟ್ಟದಲ್ಲೂ ಲಾಬಿ ನಡೆಸುತ್ತಿದ್ದಾರೆ. ಡಾ.ಯತೀಂದ್ರ ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ ಸೇರಿದಂತೆ ಕೆಲವರಿಗೆ ಅನಾಯಸವಾಗಿ ಸಂಪುಟದಲ್ಲಿ ಅವಕಾಶ ದೊರೆಯುವ ಸಾಧ್ಯತೆ ಇದೆ.
ಉಳಿದಂತೆ ಕೆ.ಎಂ.ಶಿವಲಿಂಗೇಗೌಡ, ಕೊತ್ತನೂರು ಮಂಜುನಾಥ್, ಎ.ಆರ್.ಕೃಷ್ಣಮೂರ್ತಿ, ಕೆ.ವೈ. ನಂಜೇಗೌಡ, ಅನೀಲ್ ಕುಮಾರ್, ಪುಟ್ಟಣ್ಣ , ತನ್ವೀರ್ ಸೇಠ್, ಬೇಳೂರು ಗೋಪಾಲ ಕೃಷ್ಣ, ಎಸ್.ಎನ್. ನಾರಾಯಣಸ್ವಾಮಿ, ಪ್ರಸಾದ್ ಅಬ್ಬಯ್ಯ, ಟಿ.ಎಂ.ನರೇಂದ್ರ ಸ್ವಾಮಿ, ಲಕ್ಷ್ಮಣ್ ಸವದಿ, ಬಿ.ಕೆ.ಹರಿಪ್ರಸಾದ್, ಟಿ.ಡಿ.ರಾಜೇಗೌಡ, ಪುಟ್ಟರಂಗ ಶೆಟ್ಟಿ, ರಘುಮೂರ್ತಿ, ಸಿ.ಎಸ್. ನಾಡಗೌಡ, ರಾಘವೇಂದ್ರ ಹಿಟ್ನಾಳ್, ಎಂ.ಎ.ಹ್ಯಾರೀಸ್ ಸೇರಿದಂತೆ ಹಲವಾರು ಮಂದಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ.
ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ, ಮಧು ಬಂಗಾರಪ್ಪ ಸಚಿವರಾಗಿ ಮೂರು ವರ್ಷ ಕೆಲಸ ಮಾಡಿದ್ದಾರೆ. ಬಾಕಿಯಿರುವ ಎರಡು ವರ್ಷಗಳಿಗೆ ತಮಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಹಿರಿಯ ಶಾಸಕ ತನ್ವೀರ್ ಸೇಠ್ ಅವರು ತಾವು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆಯೂ ವದಂತಿಗಳಿವೆ ಎಂದಿದ್ದಾರೆ.ಕೋಲಾರ ಜಿಲ್ಲೆಯ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ಕೊತ್ತನೂರು ಮಂಜುನಾಥ್ ಅವರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕು ಎಂದು ಕೋಲಾರ ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ. ಕಂಪ್ಲೀಟ್ ಕ್ಷೇತ್ರದ ಶಾಸಕ ಗಣೇಶ್ ಅವರು, ಬಳ್ಳಾರಿ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು. ತಾವು ಎರಡು ಬಾರಿ ಶಾಸಕರಾಗಿದ್ದು ಅವಕಾಶದ ನಿರೀಕ್ಷೆಯಲ್ಲಿರುವುದಾಗಿ ಹೇಳಿದ್ದಾರೆ.
