Homeರಾಜ್ಯಕಸ ನಿರ್ವಹಣೆ ಟೆಂಡರ್‌ನಲ್ಲಿ ಹಿಂದೆಂದೂ ಕಾಣದ ಬಹುಕೋಟಿ ಬೃಹತ್‌ ಹಗರಣ : ಬಿಜೆಪಿ ಸ್ಫೋಟಕ ಆರೋಪ

ಕಸ ನಿರ್ವಹಣೆ ಟೆಂಡರ್‌ನಲ್ಲಿ ಹಿಂದೆಂದೂ ಕಾಣದ ಬಹುಕೋಟಿ ಬೃಹತ್‌ ಹಗರಣ : ಬಿಜೆಪಿ ಸ್ಫೋಟಕ ಆರೋಪ

Massive multi-crore scam in garbage management tender: BJP makes explosive allegations

ಬೆಂಗಳೂರು,ಜೂ.10- ರಾಜಧಾನಿ ಬೆಂಗಳೂರಿನ ಕಸ ನಿರ್ವಹಣೆ ಮಾಡುವ ಟೆಂಡರ್‌ನಲ್ಲಿ ಹಿಂದೆಂದೂ ಕಾಣದ ಸುಮಾರು 36 ಸಾವಿರ ಕೋಟಿ ಬೃಹತ್‌ ಹಗರಣ ನಡೆದಿದೆ ಎಂದು ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಸ್ಫೋಟಕ ಆರೋಪ ಮಾಡಿದೆ.

ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಪ್ರತಿಪಕ್ಷದ ನಾಯಕರಾದ ಆರ್‌.ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ರವಿಸುಬ್ರಹಣ್ಯ, ಸಿ.ಕೆ.ರಾಮಮೂರ್ತಿ, ಮಾಜಿ ಸಂಸದ ಮುನಿಸ್ವಾಮಿ ಅವರುಗಳು, ಕಸದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಹಾಲಿ ಸಿಎಂ ಡಿ.ಕೆ.ಶಿವಕುಮಾರ್‌ ಅವರ ಅವಧಿಯಲ್ಲೇ ಈ ಟೆಂಡರ್‌ ಹಗರಣ ನಡೆದಿರುವುದರಿಂದ ಸರ್ಕಾರ ಇದನ್ನು ಸಿಬಿಐ ತನಿಖೆಗೆ ವಹಿಸಿ ಟೆಂಡರ್‌ ಪ್ರಕ್ರಿಯೆಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು.

ಆರ್‌.ಅಶೋಕ್‌ ಮಾತನಾಡಿ, ಇಡೀ ಬೆಂಗಳೂರು ಜನ ಬೆಚ್ಚಿ ಬೀಳುವ ಹಗರಣ ಇದಾಗಿದೆ. ಸರ್ಕರ ಕಸದ ಹೆಸರಿನಲ್ಲಿ 36 ಸಾವಿರ ಕೋಟಿ ರೂ. ಲೂಟಿ ಮಾಡಿದೆ. ದೆಹಲಿ ಮೂಲದ ಕಂಪನಿಗೆ ಟೆಂಡರ್‌ ನೀಡಲಾಗಿದ್ದು, ಇದರಲ್ಲಿ ಕಾಂಗ್ರೆಸ್‌‍ ಹೈಕಮಾಂಡ್‌ ಕೂಡ ಭಾಗಿಯಾಗಿದೆ. ಇದುವರೆಗೂ ಇಂಥ ಹಗರಣ ನಡೆದಿಲ್ಲ ಎಂದು ಆರೋಪಿಸಿದರು.

2020ರಲ್ಲಿ ಕೇಂದ್ರ ಸರ್ಕಾರ ಕಸದ ವಿಲೇವಾರಿ ಅಭಿಯಾನದಲ್ಲಿ ಆಗಿನ ಬಿಜೆಪಿ ಸರ್ಕಾರಕ್ಕೆ ಪ್ರಶಂಸೆ ಮಾಡಿತ್ತು. 1344 ಒಟ್ಟು ಕಸದ ನಿರ್ವಹಣೆಗೆ ಈಗ ವೆಚ್ಚ ಆಗುತ್ತಿದೆ. ಇದರಲ್ಲಿ 514 ಕೋಟಿ ಸಂಗ್ರಹಣ, ಸಾಗಾಣಿಕೆಗೆ ವೆಚ್ಚವಾದರೆ, 444 ಕೋಟಿ ಪೌರ ಕಾರ್ಮಿಕರಿಗೆ ಕೊಡಲಾಗುತ್ತಿದೆ ಎಂದು ವಿವರಿಸಿದರು.

ಈಗ ಕಾಂಗ್ರೆಸ್‌‍ ಸರ್ಕಾರ ಹೊಸ ಪ್ರಸ್ತಾವನೆ ಮಾಡಿದೆ. ಅದೇ ಸಿನಿಮಾ ಹೊಸ ಪೋಸ್ಟರ್‌ ರೀತಿ ಕಸದ ದೊಡ್ಡ ಹಗರಣವನ್ನು ಜನಪ್ರತಿನಿಧಿಗಳು ಇಲ್ಲದ ಸಂದರ್ಭದಲ್ಲಿ ನಡೆಸಿದ್ದಾರೆ. ಬಲಾಢ್ಯ ಕಂಪೆನಿಗೆ ಕಸದ ಟೆಂಡರ್‌ ಕೊಡಲಾಗಿದೆ. 36 ಸಾವಿರ ಕಸದ ಟೆಂಡರ್‌ ನಲ್ಲಿ 10 ಸಾವಿರ ಕೋಟಿ ಕಿಕ್‌ಬ್ಯಾಕ್‌ ಪಡೆಯಲಾಗಿದೆ ಎಂದು ಆರೋಪಿಸಿದರು.

ಕಸದ ಟೆಂಡರ್‌ ಸಾಮಾನ್ಯವಾಗಿ 1 ಅಥವಾ 2 ವರ್ಷಕ್ಕೆ ಕೊಡುತ್ತಾರೆ. ಆದರೆ ಕಾಂಗ್ರೆಸ್‌‍ ಸರ್ಕಾರ 30 ವರ್ಷಕ್ಕೆ ಕಸದ ಟೆಂಡರ್‌ ಕೊಟ್ಟಿದೆ. ಇದರ ಜತೆಗೆ ಇನ್ನೂ 35 ವರ್ಷ ಟೆಂಡರ್‌ ಅವಧಿ ವಿಸ್ತರಿಸಲು ಅವಕಾಶ ಕೊಡಲಾಗಿದೆ. ಅಲ್ಲಿಗೆ ಒಟ್ಟು 65 ವರ್ಷಕ್ಕೆ ಬೆಂಗಳೂರಿನ ಕಸದ ಟೆಂಡರ್‌ ಕೊಡಲಾಗಿದೆ. 65 ವರ್ಷ ಯಾರು ಇರುರೆ? ಯಾರು ಬದುಕಿರುತ್ತಾರೆ? ಎಂದು ಪ್ರಶ್ನಿಸಿದರು.
ದೆಹಲಿಯ ರಾಮ್‌ಕಿ ಕಂಪೆನಿಗೆ ಕಸದ ಟೆಂಡರ್‌ ಕೊಡಲಾಗಿದೆ. ರಾಮ್‌ಕಿ ಕಂಪೆನಿಗೆ ಎರಡು ಪ್ಯಾಕೇಜ್‌ನಲ್ಲಿ ಟೆಂಡರ್‌ ಕೊಡಲಾಗಿದೆ. ಇದು ಕಪ್ಪುಪಟ್ಟಿಗೆ ಸೇರಿರುವ ಕಂಪೆನಿ. ಕಪ್ಪು ಪಟ್ಟಿಗೆ ಸೇರಿದ ಬೆಂಗಳೂರು ಉತ್ತರ ಮತ್ತು ದಕ್ಷಿಣ ಪಾಲಿಕೆಗಳ ಕಸದ ಟೆಂಡರ್‌ ಈ ಕಂಪನಿಗೆ ಕೊಡಲಾಗಿದೆ ಎಂದು ದೂರಿದರು.

ಸರ್ಕಾರ ಕಸ ಸಂಸ್ಕರಣೆಗೆ ಬೆಂಗಳೂರು ಸುತ್ತ ತಲಾ 100 ಎಕರೆ ಜಮೀನು ಖರೀದಿ ಮಾಡಿ ಕೊಡುತ್ತಿದೆ. ನೈಸ್‌‍ ಸಂಸ್ಥೆ ಜತೆ ಸರ್ಕಾರ ಏನು ಒಪ್ಪಂದ ಮಾಡಿಕೊಂಡಿತ್ತೋ ಅದೇ ರೀತಿಯ ಸ್ಕೀಮ್‌ ಇಲ್ಲೂ ಇದೆ. ಈ ಸಂಸ್ಥೆಗೆ 1500 ಕೋಟಿ ಸಾಲ ಸರ್ಕಾರ ಕೊಡುತ್ತಿದೆ. ಕೈಬೀಸಿಕೊಂಡು ಬಂದು ಈ ಸಂಸ್ಥೆ ಹಣ ಮಾಡಿಕೊಳ್ಳಲು ಮುಂದಾಗಿದೆ. ನೈಸ್‌‍ ನಲ್ಲೂ ಅದೇ ರೀತಿ ಆಗಿದ್ದು ಎಂದರು.

ಒಂದು ಟನ್‌ ಕಸಕ್ಕೆ ಸಂಸ್ಕರಣಾ ವೆಚ್ಚ 260 ರೂ. ಆದರೆ ರಾಮ್‌ಕಿ ಸಂಸ್ಥೆಗೆ ಸರ್ಕಾರ ಒಂದು ಟನ್‌ಗೆ 2400 ರೂ. ಕೊಡುತ್ತಿದೆ. ಇದು ವರ್ಷಕ್ಕೆ 39437 ಕೋಟಿಯಾಗಲಿದೆ. ಕಸದ ಟೆಂಡರ್‌ನಲ್ಲಿ ಎಲ್ಲ ಗೋಲ್‌ಮಾಲ್‌ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಟಿಟಿಪಿ ಆ್ಯಕ್ಟ್‌ನ ನಿಯಮಗಳ ಪ್ರಕಾರ ಕಸದ ಟೆಂಡರ್‌ ಕರೆದಿಲ್ಲ. ಕಸದ ಟೆಂಡರ್‌ ಲೋಪಗಳ ಬಗ್ಗೆ ಆರ್ಥಿಕ ಇಲಾಖೆಯೇ ಆಕ್ಷೇಪಿಸಿದೆ. ಒಂದೇ ಕಂಪೆನಿಗೆ ಎರಡು ಪ್ಯಾಕೇಜ್‌ ಯಾಕೆ ಕೊಟ್ಟಿದ್ದೀ? ಶೇ.5ರಷ್ಟು ಕಸದ ವೆಚ್ಚ ಯಾಕೆ ಎಂದು ಆರ್ಥಿಕ ಇಲಾಖೆ ಸರ್ಕಾರಕ್ಕೆ ಕೇಳಿದೆ.

ಇದು ಅಪಾಯಕಾರಿ ಟೆಂಡರ್‌ ಅಂತನೂ ಆರ್ಥಿಕ ಇಲಾಖೆ ತಿಳಿಸಿದೆ ಎಂದು ಉಲ್ಲೇಖಿಸಿದರು.
ಈ ಸರ್ಕಾರದಲ್ಲಿ ಎಲ್ಲವೂ ಗೋಲಾಲ್‌ ನಡೆದಿದೆ. ರೈಟ್‌್ಸ ಕಂಪನಿ ತೆಗೆದು, ರಾಮ್ಕಿ ಸಂಸ್ಥೆಗೆ ನೀಡಿರುವುದರಿಂದ ಉತ್ತರ ಮತ್ತು ದಕ್ಷಿಣ ಪ್ಯಾಕೇಜ್‌ಗೆ ಶೇ.19.43ರಷ್ಟು ಹೆಚ್ಚುವರಿ ಹಣ ಕೊಟ್ಟಿದ್ದಾರೆ. ಟೆಂಡರ್‌ ಕರೆದು, ಟೆಂಡರ್‌ಗೆ ಅರ್ಜಿ ಹಾಕಿದವರ ವಜಾ ಮಾಡುತ್ತಾರೆ ಎಂದು ಆರೋಪಿಸಿದರು.

RELATED ARTICLES
spot_img

Latest News