ಕೊರಟಗೆರೆ, ಜೂ.27- ಮೈಕ್ರೋ ಫೈನಾನ್ಸ್ ಸಂಸ್ಥೆಯಿಂದ ಪಡೆದ ಸಾಲದ ಹೊರೆ, ಮನೆ ಜಪ್ತಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತಾಲೂಕಿನ ಥರಟಿ ಗ್ರಾಮದ ಕುಟುಂಬವೊಂದು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ದಯಾಮರಣಕ್ಕೆ ಅವಕಾಶ ನೀಡುವಂತೆ ಸರ್ಕಾರವನ್ನು ಕೋರಿರುವ ಘಟನೆ ಬೆಳಕಿಗೆ ಬಂದಿದೆ.
ತಾಲೂಕಿನ ಥರಟಿ ಗ್ರಾಮದ ಮಹಿಳೆಯೊಬ್ಬರು ತಮ ತಾಯಿಯ ಅನಾರೋಗ್ಯಕ್ಕೆ ಶಸ್ತ್ರಚಿಕಿತ್ಸೆಮಾಡಿಸಲು ತುಮಕೂರಿನ ಫೈನಾನ್ಸ್ ಸಂಸ್ಥೆಯೊಂದರಿಂದ 6 ಲಕ್ಷ ರೂ. ಸಾಲ ಪಡೆದಿದ್ದರು. ಸಾಲದ ಮರುಪಾವತಿಗಾಗಿ ತಿಂಗಳಿಗೆ 12,950 ರೂ.ಗಳಂತೆ 18 ಕಂತುಗಳನ್ನು ಪಾವತಿಸಿದ್ದರೂ, ಇನ್ನೂ ಸುಮಾರು 8 ಲಕ್ಷ ರೂ. ಪಾವತಿಸಿದರೆ ಮಾತ್ರ ಸಾಲ ಮುಕ್ತಗೊಳಿಸಲಾಗುವುದು ಎಂದು ಸಂಸ್ಥೆ ತಿಳಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಈ ನಡುವೆ ಸಾಲ ಮರುಪಾವತಿಯಲ್ಲಿ ಉಂಟಾದ ಸಮಸ್ಯೆಯಿಂದ ಸುಮಾ ಅವರ ಮನೆಯನ್ನು ಫೈನಾನ್ಸ್ ಸಂಸ್ಥೆ ಜಪ್ತಿ ಮಾಡಿದೆ ಎನ್ನಲಾಗಿದೆ. ಇದರಿಂದ ಕುಟುಂಬವು ತಮ ಸ್ವಗ್ರಾಮವನ್ನು ತೊರೆದು ತೋವಿನಕೆರೆಯಲ್ಲಿರುವ ಸಂಬಂಧಿಕರ ಮನೆಯಲ್ಲಿ ತಾತ್ಕಾಲಿಕವಾಗಿ ಆಶ್ರಯ ಪಡೆದಿದೆ.
ಮನೆ ಇಲ್ಲದ ಪರಿಸ್ಥಿತಿಯಿಂದ ಕುಟುಂಬದ ಮಕ್ಕಳು ಶಿಕ್ಷಣದಿಂದಲೂ ವಂಚಿತರಾಗಿದ್ದಾರೆ. ಸಾಲದ ಮೊತ್ತವನ್ನು ಕಡಿಮೆ ಮಾಡಿ, ಒಮೊತ್ತಿನ ಹಣ ಪಾವತಿಸಿ ಪ್ರಕರಣ ಮುಕ್ತಾಯಗೊಳಿಸಲು ಹಲವು ಬಾರಿ ಫೈನಾನ್್ಸ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆಯಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಮಹಿಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನಾನು, ನನ್ನ ತಾಯಿ ಹಾಗೂ ನನ್ನ ಇಬ್ಬರು ಮಕ್ಕಳು ದಿಕ್ಕು ಕಾಣದೆ ಬದುಕುತ್ತಿದ್ದೇವೆ. ಮನೆ ಕಳೆದುಕೊಂಡ ಅವಮಾನ, ಮಕ್ಕಳ ವಿದ್ಯಾಭ್ಯಾಸದ ಸಮಸ್ಯೆ ಮತ್ತು ಸಾಲದ ಒತ್ತಡದಿಂದ ಬದುಕೇ ಬೇಸರವಾಗಿದೆ.
ಸರ್ಕಾರ ನಮಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ದಯಾಮರಣಕ್ಕೆ ಅವಕಾಶ ನೀಡಬೇಕು ಎಂದು ಮಹಿಳೆ ಕಣ್ಣೀರಿಟ್ಟಿದ್ದಾರೆ. ಕುಟುಂಬದ ಪರಿಸ್ಥಿತಿ ಇದೀಗ ಮಾನವೀಯ ಕಳವಳಕ್ಕೆ ಕಾರಣವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕೆಂಬ ಒತ್ತಾಯ ಸ್ಥಳೀಯರಿಂದ ಕೇಳಿಬಂದಿದೆ.
