ಬೆಂಗಳೂರು,ಜೂ.27- ನಗರದಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದ ಆರೋಪಿಗಳಿಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ ಹಣಕಾಸಿನ ವಿಚಾರಕ್ಕೆ ಹತ್ಯೆ ನಡೆದಿರುವುದು ಕೆಆರ್ಪುರ ಠಾಣೆ ಪೊಲೀಸರ ಇದುವರೆಗಿನ ತನಿಖೆಯಿಂದ ಗೊತ್ತಾಗಿದೆ.
ಮೂಲತಃ ತಿರುಚಿಯವರಾದ ಕೆನತ್ನ ತಂದೆ ಹೆಚ್ಎಎಲ್ ಕಂಪನಿಯ ಉದ್ಯೋಗಿಯಾಗಿದ್ದು, ಬೆಂಗಳೂರಿನಲ್ಲಿ ವಾಸವಾಗಿದ್ದರು.ಶ್ವೇತಾ ಪ್ರಿಯಕರನೊಂದಿಗೆ ಸೇರಿಕೊಂಡು ತನ್ನ ತಾಯಿ, ತಂದೆ, ಸಹೋದರಿಯನ್ನು ಕೊಲೆ ಮಾಡಿದ ನಂತರ ಸಿಕ್ಕಿ ಬೀಳುವ ಭಯದಲ್ಲಿ ಇವರಿಬ್ಬರೂ ಮೊಬೈಲ್ ಬಳಸಿಲ್ಲ.ಘಟನೆ ಬಳಿಕ ಇಬ್ಬರು ಬೈಕ್ನಲ್ಲಿ ತಮಿಳುನಾಡಿಗೆ ಹೋಗಿದ್ದಾರೆ. ನಂತರ ಹೊಸೂರಿನಲ್ಲಿ ಬೈಕ್ ಬಿಟ್ಟು ಇಬ್ಬರು ಬೇರೆ ಬೇರೆಯಾಗಿ ಬಸ್ನಲ್ಲಿ ತೆರಳಿದ್ದರು.
ಆರೋಪಿ ಕೆನತ್ಗೆ ಬೀಚ್ ಎಂದರೆ ಬಹಳ ಇಷ್ಟ.ಹಾಗಾಗಿ ಶ್ವೇತಾ ಆತನನ್ನು ಹುಡುಕಿಕೊಂಡು ಪುದುಚೇರಿಗೆ ಹೋಗಿದ್ದಳು. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಪುದುಚೇರಿಯ ರೈಲ್ವೆ ನಿಲ್ದಾಣದಲ್ಲಿ ಶ್ವೇತಾ ಇರುವ ಬಗ್ಗೆ ಮಾಹಿತಿ ಪಡೆದು ಅಲ್ಲಿಗೆ ಹೋದಾಗ ಸಿಕ್ಕಿ ಬಿದ್ದಿದ್ದಾಳೆ.
ತದ ನಂತರ ಆತನೂ ಸಹ ಪುದುಚೇರಿಯಲ್ಲೇ ನಿನ್ನೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರೋಪಿಗಳಿಬ್ಬರನ್ನು ಬೇರೆ ಬೇರೆಯಾಗಿ ವಿಚಾರಣೆ ನಡೆಸಿ ಪೊಲೀಸರು ವಿವರಗಳನ್ನು ಪಡೆದುಕೊಂಡಿದ್ದಾರೆ. ಆದರೆ ಅಂದು ರಕ್ತದ ಮಡುವಿನಲ್ಲಿದ್ದ ಶ್ವೇತಾ ತಂದೆ ಪೊಲೀಸರ ಬಳಿ ಹೇಳಿದ ಹೇಳಿಕೆಗೂ ಆರೋಪಿಗಳಿಬ್ಬರು ನೀಡಿರುವ ಹೇಳಿಕೆಗಳು ಹೊಂದಾಣಿಕೆಯಾಗುತ್ತಿಲ್ಲ.ಹಾಗಾಗಿ ಪೊಲೀಸರು ಈ ಎಲ್ಲಾ ಮಾಹಿತಿಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಆರೋಪಿತೆ ಶ್ವೇತಾ ತನ್ನ ಪ್ರಿಯಕರ ಕೆನತ್ ಜೊತೆ ಸೇರಿಕೊಂಡು ಸ್ವಂತ ಉದ್ಯಮ ಪ್ರಾರಂಭಿಸಲು ಹಾಗೂ ಐಷಾರಾಮಿ ಜೀವನ ನಡೆಸಲು 30 ಲಕ್ಷ ಸಾಲ ಮಾಡಿಕೊಂಡಿದ್ದರು.ಸಾಲದ ಹಣ ಪಾವತಿಸುವಂತೆ ಹಲವಾರು ಭಾರಿ ಶ್ವೇತಾ ಅವರ ತಂದೆ ಮನೆಗೆ ನೋಟೀಸ್ ಹೋಗುತ್ತಿತ್ತು. ಈ ವಿಚಾರವಾಗಿ ಶ್ವೇತಾ ಅವರ ಮನೆಯಲ್ಲಿ ಗಲಾಟೆಯೂ ಆಗಿದೆ.
ಈ ನಡುವೆ ಶ್ವೇತಾ ಅಪಾರ್ಟ್ಮೆಂಟ್ವೊಂದರ ಫ್ಲಾಟ್ ನಲ್ಲಿ ಪ್ರಿಯಕರ ಕೆನತ್ ಜೊತೆ ಲಿವಿಂಗ್ ಟು ಗೆದರ್ನಲ್ಲಿ ವಾಸವಿದ್ದರು. ಇದು ಶ್ವೇತಾ ತಂದೆಗೆ ಇಷ್ಟವಿರಲಿಲ್ಲ. ಮನೆಗೆ ವಾಪಸ್ ಬರುವಂತೆ ಆಕೆಗೆ ಹೇಳಿದರೂ ಕೇಳಿರಲಿಲ್ಲ. ಸಾಲ ತೀರಿಸಲು ಹಣ ಕೊಡದ ಪೋಷಕರ ಮೇಲೆ ಶ್ವೇತಾ ಹಗೆ ಸಾದಿಸುತ್ತಿದ್ದಳು.
ಹೇಗಾದರೂ ಮಾಡಿ ಅವರಿಂದ ಹಣ ಪಡೆದುಕೊಳ್ಳಬೇಕೆಂದು ಜಗಳವಾಡಿದ್ದಳು. ಕಳೆದ ಸೋಮವಾರ ರಾತ್ರಿ ತಾಯಿಯನ್ನು ಮನೆಗೆ ಕರೆಸಿಕೊಂಡು ಕೊಲೆ ಮಾಡಿದ ಈ ಇಬ್ಬರು ಆರೋಪಿಗಳು ಶವವನ್ನು ಸ್ನಾನದ ಕೋಣೆಯಲ್ಲಿ ಹಾಕಿ, ಶವವನ್ನು ಕತ್ತರಿಸಿ ಕುಂದಲಹಳ್ಳಿಯಲ್ಲಿರುವ ಕೆನತ್ನ ಬಾಡಿಗೆ ಮನೆಯಲ್ಲಿ ಹಾಕಲು ಯೋಜನೆ ರೂಪಿಸಿದ್ದರು.
ಆದರೆ ಅವರನ್ನು ಹುಡುಕಿಕೊಂಡು ತಂದೆ ಮತ್ತು ಸಹೋದರಿ ಶ್ವೇತಾ ಮನೆಗೆ ಬಂದರು. ಆಗ ಗಾಬರಿಯಾದ ಇಬ್ಬರು ಆರೋಪಿಗಳು ಅವರುಗಳನ್ನು ಹಿಡಿದುಕೊಂಡು ಚಾಕುವಿನಿಂದ ಇರಿದು ಕೊಲೆ ಮಾಡಿ ಇದೀಗ ಸಿಕ್ಕಿ ಬಿದ್ದು ಇಬ್ಬರೂ ಪೊಲೀಸರ ವಶದಲ್ಲಿದ್ದು, ಅವರಿಬ್ಬರ ವಿಚಾರಣೆ ಮುಂದುವರೆದಿದೆ.
