ಮಂಡ್ಯ,ಜೂ.30- ಋಷಿಕೇಶ ಹಾಗೂ ಹರಿದ್ವಾರ ಮಾದರಿಯಲ್ಲಿ ಕಾಲುವೆ ನಿರ್ಮಿಸಿ ಭಕ್ತಾಧಿಗಳ ಸುರಕ್ಷತೆಗಾಗಿ ಮುತ್ತತ್ತಿಯಲ್ಲಿ ಸ್ನಾನಘಟ್ಟ ನಿರ್ಮಿಸಲಾಗುವುದು. ಯೋಜನೆಗೆ ಅಗತ್ಯವಿರುವ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.
ಜಿಲ್ಲೆಯ ಹಲಗೂರು ಸಮೀಪದ ಪ್ರಸಿದ್ಧ ಪ್ರವಾಸಿ ತಾಣ ಮುತ್ತತ್ತಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದ ಅವರು, ಕಾವೇರಿ ನದಿ ತೀರ ಹಾಗೂ ಅಗತ್ಯವಿರುವ ಕಡೆಗಳಲ್ಲಿ 20 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುವುದು. ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೂಡಿ ಪ್ರತಿದಿನ 8 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಸೂಚಿಸಲಾಗಿದೆ ಎಂದರು.
ಮುತ್ತತ್ತಿಯಲ್ಲಿ ಪೊಲೀಸ್ ಚೌಕಿ ನಿರ್ಮಿಸಿ ಹಬ್ಬ, ವಿಶೇಷ ದಿನಗಳು, ರಜಾ ದಿನಗಳಲ್ಲಿ ಒಬ್ಬ ಪೊಲೀಸ್ ಸಬ್ ಇನ್್ಸಪೆಕ್ಟರ್ ನಿಯೋಜಿಸಲು ಎಸ್ಪಿ ಅವರಿಗೆ ಸೂಚಿಸಲಾಗುವುದು, ಸರ್ಕಾರದ ಮಹತ್ವಾಕಾಂಕ್ಷೆಯ ಮೇಕೆದಾಟು ಅಣೆಕಟ್ಟು ನಿರ್ಮಾಣವಾದರೆ, ಅಲ್ಲಿಯವರೆಗೆ ಭಕ್ತಾಧಿಗಳ ಹಿತದೃಷ್ಟಿಯಿಂದ ಪ್ರವಾಸಿಗರಿಗೆ ಅಗತ್ಯವಿರುವ ಮೂಲಸೌಕರ್ಯ ಮತ್ತು ಶೌಚಾಲಯ ನಿರ್ಮಾಣಕ್ಕೂ ಕ್ರಮ ವಹಿಸಲಾಗುವುದು. ಮುತ್ತತ್ತಿ ವನ್ಯಜೀವಿ ವಲಯ ಪ್ರದೇಶವಾಗಿದ್ದು, ಕಾವೇರಿ ನದಿ ತೀರದಲ್ಲಿ ಪ್ಲಾಸ್ಟಿಕ್ ಹಾಕದಂತೆ ಕ್ರಮವಹಿಸಲಾಗುವುದು ಎಂದು ಸಚಿವರು ಹೇಳಿದರು.
ಕಳೆದ ಜೂ. 24ರಂದು ಮುತ್ತತ್ತಿಗೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಜೆ. ಬ್ಯಾಡರಹಳ್ಳಿ ಗ್ರಾಮದ 5 ಮಂದಿ ಪ್ರವಾಸಿಗರು ನೀರಿನಲ್ಲಿ ಮುಳುಗಿ ಮೃತಪಟ್ಟ ಹಿನ್ನೆಲೆಯಲ್ಲಿ ಸಚಿವರು ಮುತ್ತತ್ತಿಗೆ ಭೇಟಿ ನೀಡಿ ಪರಿಶೀಲಿಸಿದರು.
ತಮಿಳುನಾಡಿಗೆ ನೀರು ಬಿಡುವ ವಿಚಾರ:ತಮಿಳುನಾಡಿಗೆ ಇದುವರೆಗೆ ನೀರು ಬಿಟ್ಟಿಲ್ಲ. ಬಿಡಲು ಅಣೆಕಟ್ಟೆಯಲ್ಲಿ ನೀರು ಸಹ ಇಲ್ಲ. ಕುಡಿಯುವ ನೀರಿಗೆ ನಮ ಮೊದಲ ಆದ್ಯತೆ. ನಮಲ್ಲಿ ನೀರಿಲ್ಲವೆಂದು ಕಾವೇರಿ ಜಲ ಆಯೋಗಕ್ಕೆ ಮನವರಿಕೆ ಮಾಡಿದ್ದೇವೆ. ಸದ್ಯಕ್ಕೆ ಮಳೆ ಆಗುವವರೆಗೂ ನೀರು ಬಿಡಲು ಸಾಧ್ಯವಿಲ್ಲ. ಮಳೆ ಬಂದರೆ ಯಾವುದೇ ಸಮಸ್ಯೆ ಆಗಲ್ಲ. ಕೆಆರ್ಎಸ್ಗೆ ಬಾಗೀನ ಅರ್ಪಿಸಿ ಒಂದು ವರ್ಷ ಆಗಲಿದ್ದು, ಮಳೆ ಬಂದು ಅಣೆಕಟ್ಟು ತುಂಬಿದರೆ ಬಾಗೀನ ಅರ್ಪಿಸಲಾಗುವುದು ಎಂದರು.
ರೈತರ ಕೃಷಿ ಬಿತ್ತನೆಗೆ ಮೋಡ ಬಿತ್ತನೆ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದು, ಅಗತ್ಯ ಚಿಂತನೆ ನಡೆಸಲಾಗುವುದು. ಬರ ಪರಿಹಾರ ನೀಡುವ ಕುರಿತು ಸರ್ಕಾರದ ಮಾನದಂಡಗಳನ್ನು ನೋಡಿಕೊಂಡು ಮುಖ್ಯಮಂತ್ರಿ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಜಿಲ್ಲಾಧಿಕಾರಿ ಕುಮಾರ, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ. ಶೋಭಾರಾಣಿ, ಜಿ.ಪಂ. ಸಿಇಒ ನಂದಿನಿ, ಕಾವೇರಿ ವನ್ಯಜೀವಿ ವಲಯದ ಡಿಸಿಎ್ ಜಗನ್ನಾಥ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ತಹಶೀಲ್ದಾರ್ ಎಸ್.ವಿ. ಲೋಕೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
