ಶಿಮ್ಲಾ, ಜು.24: ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿತಿ ಜಿಲ್ಲೆಯ ಉದಯಪುರ–ಕಿಲ್ಲಾರ್ ಮಾರ್ಗದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಟಾಟಾ ಸುಮೋ ಟ್ಯಾಕ್ಸಿ ಮಣ್ಣಿನಡಿ ಹಾಗೂ ಬಂಡೆಗಳಡಿ ಸಿಲುಕಿ 13 ಮಂದಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಮಾಹಿತಿಯ ಪ್ರಕಾರ, ಟಾಟಾ ಸುಮೋ ವಾಹನವು ಕುಲ್ಲುವಿನಿಂದ ಪಾಂಗಿ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಕಾಹು-ದು ನಾಲಾ ಸಮೀಪ ಏಕಾಏಕಿ ಬೆಟ್ಟದಿಂದ ಭಾರೀ ಬಂಡೆಗಳು ಹಾಗೂ ಮಣ್ಣು ಕುಸಿದು ವಾಹನದ ಮೇಲೆ ಬಿದ್ದಿವೆ. ಪರಿಣಾಮವಾಗಿ ಸಂಪೂರ್ಣ ವಾಹನ ಅವಶೇಷಗಳಡಿ ಹೂತು ಹೋಗಿದ್ದು, ಸ್ಥಳದಲ್ಲೇ ಅನೇಕರು ಸಾವನ್ನಪ್ಪಿದ್ದಾರೆ.
ಪ್ರಾಥಮಿಕ ಮಾಹಿತಿಯಂತೆ, ವಾಹನದಲ್ಲಿ ಚಾಲಕ ಸೇರಿ 12ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಅಪಘಾತದ ಮಾಹಿತಿ ದೊರೆಯುತ್ತಿದ್ದಂತೆ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ರಕ್ಷಣಾ ಕಾರ್ಯಾಚರಣೆಯಲ್ಲಿ ಒಬ್ಬ ಗಾಯಾಳುವನ್ನು ಜೀವಂತವಾಗಿ ರಕ್ಷಿಸಲಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರಿಗಾಗಿ ಅವಶೇಷ ತೆರವು ಕಾರ್ಯ ಮುಂದುವರಿದಿದ್ದು, ನಂತರ ಮೃತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತಕ್ಕೀಡಾದ ವಾಹನದ ಚಾಲಕನನ್ನು ಬೀರ್ ಸಿಂಗ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳದ ದೃಶ್ಯಗಳಲ್ಲಿ ಸಂಪೂರ್ಣ ನಜ್ಜುಗುಜ್ಜಾದ ವಾಹನವು ಬಂಡೆಗಳು ಹಾಗೂ ಮಣ್ಣಿನ ರಾಶಿಯಡಿ ಸಿಲುಕಿರುವುದು ಕಂಡುಬಂದಿದೆ.
ಭೂಕುಸಿತದ ನಿಖರ ಕಾರಣದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಮಳೆಗಾಲದ ಹಿನ್ನೆಲೆಯಲ್ಲಿ ಪರ್ವತ ಪ್ರದೇಶಗಳಲ್ಲಿ ಸಂಚರಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಆಡಳಿತ ಸಾರ್ವಜನಿಕರಿಗೆ ಮನವಿ ಮಾಡಿದೆ.
