ಬೆಂಗಳೂರು,ಜು.30-ಎಸ್ಐಆರ್ ಸಮೀಕ್ಷೆಗೆ ತೆರಳಿದ್ದ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೇ ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜಿಬಿಎ ಹಾಗೂ ಸ್ಲಂ ಡೆವಲಪ್ಮೆಂಟ್ ಬೋರ್ಡ್ನ ಅಧಿಕಾರಿಗಳ ತಂಡ ಎಸ್ಐಆರ್ ಸಮೀಕ್ಷಾ ಕಾರ್ಯಕ್ಕಾಗಿ ನಿನ್ನೆ ಡಿಜೆಹಳ್ಳಿಯ ರೋಶನ್ನಗರದಲ್ಲಿರುವ ಕೌಸರ್ ಮಸೀದಿ ಬಳಿ ತೆರಳಿತ್ತು. ಆ ಸಂದರ್ಭದಲ್ಲಿ ಇವರ ಬಳಿ ಬಂದ ದಸ್ತಗೀರ್ ಎಂಬಾತ ಎಸ್ಐಆರ್ ಫಾರಂ ನೀಡುವಂತೆ ಒತ್ತಾಯಿಸಿದ್ದಾನೆ. ಈಗಾಗಲೇ ನೀವು ಜಯನಗರಕ್ಕೆ ವಾಸ್ತವ್ಯ ಬದಲಿಸಿರುವುದರಿಂದ ನಿಮ ಹೆಸರು ಅಲ್ಲಿನ ಮತದಾರರ ಪಟ್ಟಿಯಲ್ಲಿರುತ್ತದೆ ಫಾರಂ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದರೂ ಗಲಾಟೆ ಮಾಡಿದ್ದಾನೆ.
ಅಧಿಕಾರಿಗಳ ಮಾತಿನಿಂದ ಕೋಪಗೊಂಡ ದಸ್ತಗೀರ್ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದಲ್ಲದೇ ತನ್ನ ಜೊತೆಯಲ್ಲಿದ್ದ ಯಾರಬ್ ಎಂಬಾತನೊಂದಿಗೆ ಸೇರಿಕೊಂಡು ಅಧಿಕಾರಿ ಫಕೀರಪ್ಪ ಅವರ ಮುಖ ಮತ್ತು ತುಟಿಗೆ ಕೈಗಳಿಂದ ಗುದ್ದಿ ಗಾಯಗೊಳಿಸಿದ್ದಾರೆ.
ಗಲಾಟೆ ತೀವ್ರಗೊಳ್ಳುತ್ತಿದ್ದಂತೆ ಸಾರ್ವಜನಿಕರು ಮಧ್ಯಪ್ರವೇಶಿಸಿ ಜಗಳ ಬಿಡಿಸಿ ಗಾಯಗೊಂಡ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಲ್ಲಿ ನೆರವಾಗಿದ್ದಾರೆ.ನಂತರ ಪೊಲೀಸರಿಗೆ ಈ ಬಗ್ಗೆ ಫಕೀರಪ್ಪ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತಕ್ಷಣ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
