ಮೈಸೂರು,ಆ.20- ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಕರಾವಳಿಯ ಸಾಂಪ್ರದಾಯಿಕ ಮತ್ತು ಜನಪ್ರಿಯ ಕ್ರೀಡೆಯಾದ ಕಂಬಳವನ್ನು ಆಯೋಜಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ದಸರಾದಲ್ಲಿ ಕಂಬಳ ನಡೆಸಲು ಸರ್ಕಾರ ಈಗಾಗಲೇ ಸ್ಥಳ ಗುರುತಿಸಿ ಪರಿಶೀಲನೆ ನಡೆಸಿತ್ತು. ಆರಂಭದಲ್ಲಿ ಕೆಲವು ಕಡೆಯಿಂದ ವಿರೋಧ ವ್ಯಕ್ತವಾಗಿದ್ದರೂ, ಸರ್ಕಾರ ಕಂಬಳ ಆಯೋಜನೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕಂಬಳಕ್ಕಾಗಿ ಪ್ರತ್ಯೇಕ ಉಪಸಮಿತಿಯನ್ನು ರಚಿಸಲಾಗಿದ್ದು, ಈ ಬಾರಿ ಕಂಬಳ ನಡೆಯುವುದು ಬಹುತೇಕ ಖಚಿತವಾಗಿದೆ.
ಕಂಬಳ ಉಪಸಮಿತಿ ರಚನೆ :
ನಾಡಹಬ್ಬ ದಸರಾ ಆಚರಣೆಗಾಗಿ ರಾಜ್ಯ ಸರ್ಕಾರ ವಿವಿಧ ಉಪಸಮಿತಿಗಳನ್ನು ರಚಿಸಿದೆ. ಅದರಲ್ಲಿ ಕಂಬಳ ಉಪಸಮಿತಿಯೂ ಸೇರಿದೆ.ಈ ಉಪಸಮಿತಿಗೆ ಮೈಸೂರು ಜಿಲ್ಲಾ ಪಂಚಾಯತ್ ಸಿಇಒ ಎಸ್.ಯುಕೇಶ್ ಕುಮಾರ್ ಅವರನ್ನು ಉಪ ವಿಶೇಷಾಧಿಕಾರಿಯಾಗಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ ಅವರನ್ನು ಕಾರ್ಯಾಧ್ಯಕ್ಷರಾಗಿ, ಉಪ ಅರಣ್ಯಾಧಿಕಾರಿ ಪರಮೇಶ್ ಅವರನ್ನು ಸದಸ್ಯರಾಗಿ ನೇಮಿಸಲಾಗಿದೆ. ಪದನಾಭ ಮತ್ತು ಮೈತ್ರಿ ಅವರನ್ನು ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ.
ದಸರಾ ಉಪಸಮಿತಿಗಳು :
ಈ ಬಾರಿಯ ದಸರಾ ಆಚರಣೆಗಾಗಿ ಸ್ವಾಗತ, ಆಮಂತ್ರಣ ಮತ್ತು ಸ್ಥಳಾವಕಾಶ, ಬಂದೋಬಸ್ತ್, ಪಂಜಿನ ಕವಾಯತು, ಮೆರವಣಿಗೆ ಮತ್ತು ಸ್ತಬ್ಧಚಿತ್ರ, ರೈತ ದಸರಾ, ಸಾಂಸ್ಕೃತಿಕ ದಸರಾ, ಲಲಿತ ಕಲೆ ಮತ್ತು ಕರಕುಶಲ ಕಲೆ, ದೀಪಾಲಂಕಾರ, ಕವಿಗೋಷ್ಠಿ, ಯೋಗ ದಸರಾ, ಯುವ ಸಂಭ್ರಮ, ಯುವ ದಸರಾ, ಮಹಿಳಾ ಮತ್ತು ಮಕ್ಕಳ ದಸರಾ, ಆಹಾರ ಮೇಳ, ಕಂಬಳ, ಕುಸ್ತಿ, ಗಜಪಯಣ ಮತ್ತು ಕ್ರೀಡೆ ಸೇರಿದಂತೆ ವಿವಿಧ ಉಪಸಮಿತಿಗಳನ್ನು ರಚಿಸಲಾಗಿದೆ. ಕರಾವಳಿ ಭಾಗದಲ್ಲಿ ಜನಪ್ರಿಯವಾಗಿರುವ ಕಂಬಳ ಕ್ರೀಡೆ ಇದೇ ಮೊದಲ ಬಾರಿಗೆ ಮೈಸೂರು ದಸರಾ ಮಹೋತ್ಸವದಲ್ಲಿ ಸ್ಥಾನ ಪಡೆಯಲಿರುವುದು ವಿಶೇಷವಾಗಿದೆ.
