ಬೆಂಗಳೂರು,ಫೆ.18-ತಾಳೆ ಕಳೆದುಕೊಂಡು ಪತ್ನಿಯನ್ನು ಕುತ್ತಿಗೆ ಬಿಗಿದು ಪತಿಯೇ ಕೊಲೆ ಮಾಡಿರುವ ಘಟನೆ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಬೊಮನಹಳ್ಳಿಯ ಬಿದರಹಳ್ಳಿ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಾಗಿದ್ದ ಸಂಧ್ಯಾಶ್ರೀ (65) ಪತಿಯಂದಲೇ ಕೊಲೆಯಾದ ದುರ್ದೈವಿ.
ಮೂಲತಃ ಆಂಧ್ರಪ್ರದೇಶದ ವಿಜಯವಾಡದವರಾದ ನಾಗೇಶ್ವರ್ ರಾವ್ (72) ಅವರು ಇಸ್ರೋ ನಿವೃತ್ತ ಉದ್ಯೋಗಿ. ಪತ್ನಿ ಸಂಧ್ಯಾಶ್ರೀ ಜೊತೆ ಈ ಫ್ಲಾಟ್ನಲ್ಲಿ ವಾಸವಾಗಿದ್ದರು. ಇಂದು ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ದಂಪತಿ ನಡುವೆ ಯಾವುದೋ ವಿಚಾರವಾಗಿ ಜಗಳವಾಗಿದೆ. ಕೋಪದಲ್ಲಿ ತಾಳ್ಮೆ ಕಳೆದುಕೊಂಡ ನಾಗೇಶ್ವರ್ ರಾವ್ ಟವಲ್ನಿಂದ ಪತ್ನಿಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ನಂತರ ಆತಹತ್ಯೆ ಮಾಡಿಕೊಳ್ಳಲು ಆತ ಯೋಚಿಸುತ್ತಿದ್ದಾಗ ಜ್ಞಾನೋಧಯವಾಗಿ ತನ್ನ ನಿರ್ಧಾರ ಬದಲಿಸಿ ಪತ್ನಿ ಕೊಲೆ ಮಾಡಿರುವ ವಿಷಯವನ್ನು ಪಕ್ಕದ ಮನೆಗೆ ಫೋನ್ ಮಾಡಿ ತಿಳಿಸಿದ್ದಾನೆ.
ನೆರೆಮನೆ ನಿವಾಸಿ ಬಂದು ನೋಡಿ ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.ಪ್ರಕರಣ ಸಂಬಂಧ ನಾಗೇಶ್ವರ್ ರಾವ್ನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
