ಬೆಂಗಳೂರು, ಫೆ.23- ಸರ್ವಾಂಗೀಣ ಆಟ ಪ್ರದರ್ಶಿಸಿದ ಎಟಿಎಸ್ ಅಟ್ಯಾಕರ್ಸ್ ತಂಡ 2026ರ ಚೊಚ್ಚಲ ಸಿಎಂ ಕಪ್ ಬ್ಯಾಡ್ಮಿಂಟನ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.9 ಡ್ರೀಮ್ಸೌ ಸಂಸ್ಥೆ ಆಯೋಜಿಸಿದ್ದ ಪ್ರತಿಷ್ಠಿತ ಸಿಎಂ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪ್ರೋವಿನ್ ಪ್ಯಾಂಥರ್ಸ್ ತಂಡವನ್ನು ಮಣಿಸಿ ಎಟಿಎಸ್ ಅಟ್ಯಾಕರ್ಸ್ ತಂಡ ಗೆಲುವಿನ ನಗೆ ಬೀರಿತು.
ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಹಾಗೂ ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರು ಚಾಂಪಿಯನ್ ಹಾಗೂ ರನ್ನರ್ ಅಪ್ ತಂಡಗಳಿಗೆ ಪ್ರಶಸ್ತಿ ವಿತರಿಸಿದರು.
ಸಮಾರೋಪ ಸಮಾರಂಭ ದಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಶಿವ ಕುಮಾರ್ ಬೆಳ್ಳಿತಟ್ಟೆ. ಕವಳ ಚಿತ್ರದ ನಿರ್ಮಾಪಕ ಬಿ. ಲೋಕೇಶ್ ಉಪಸ್ಥಿತರಿದ್ದರು.ಶನಿವಾರ ಮತ್ತು ಭಾನುವಾರ ಕನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಂಗಣದಲ್ಲಿ ನಡೆದ ಬ್ಯಾಡ್ಮಿಂಟನ್ ಟೂರ್ನಿ ಅದ್ಧೂರಿಯಾಗಿ ನಡೆಯಿತು.
ಟ್ರೋಫಿಗಾಗಿ ಕಣಕ್ಕಿಳಿದಿದ್ದ 8 ತಂಡಗಳು ಎರಡೂ ದಿನವೂ ರೋಚಕವಾದ ಪಂದ್ಯಗಳಿಗೆ ಸಾಕ್ಷಿಯಾದವು.ಲೀಗ್ ಹಂತದಲ್ಲಿ 8 ತಂಡಗಳ ಪೈಕಿ ಎ ಬಣದಲ್ಲಿ ಇನ್ಸ್ಪೈರ್ ಚಾಲೆಂಜರ್ಸ್, ಎಲೈಟ್ ಬ್ಯಾಡ್ಮಿಂಟನ್ ಕ್ಲಬ್, ಎಸ್ಥೆಟಿಕ್ ಅಟ್ಯಾಕರ್ಸ್, ಕೆಫೆ ದಿವ್ಯಂ ತಂಡಗಳು ಹಾಗೂ ಬಿ ಬಣದಲ್ಲಿ ಎಟಿಎಸ್ ಅಟ್ಯಾಕರ್ಸ್, ಪ್ರೋವಿನ್ ಪ್ಯಾಂಥರ್ಸ್, ಟೆಲಿಕಾಂ ಸ್ಕೈ ಸ್ಟ್ರೈಕರ್ಸ್, ಕೆಜಿಎಫ್ ಸ್ಮಾಶರ್ಸ್ ತಂಡಗಳು ಕಣಕ್ಕಿಳಿದಿದ್ದವು.
ಮೊದಲ ಸೆಮಿಫೈನಲ್ನಲ್ಲಿ ಎಟಿಎಸ್ ಅಟ್ಯಾಕರ್ಸ್ ತಂಡವು ಎಲೈಟ್ ಬ್ಯಾಡ್ಮಿಂಟನ್ ಕ್ಲಬ್ ತಂಡವನ್ನು ಮಣಿಸಿದರೆ, ಎರಡನೇ ಸೆಮಿಫೈನಲ್ನಲ್ಲಿ ಪ್ರೋವಿನ್ ಪ್ಯಾಂಥರ್ಸ್ ತಂಡವು ಇನ್ಸ್ಪೈರ್ ಚಾಲೆಂಜರ್ಸ್ ತಂಡವನ್ನು ನೇರ ಸೆಟ್ಗಳಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿದವು. ಸಮಬಲದ ಹೋರಾಟದಲ್ಲಿ ಅಂತಿಮವಾಗಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಎಟಿಎಸ್ ಅಟ್ಯಾಕರ್ಸ್ ತಂಡ ಮೊದಲ ಆವೃತ್ತಿಯ ಸಿಎಂ ಕಪ್ನ್ನು ಕೈವಶ ಮಾಡಿಕೊಂಡಿತು.
ವಿನೂತನ ಮಾದರಿಯ ಪಂದ್ಯಾವಳಿ:9 ಡ್ರೀಮ್ಸೌ ಸಂಸ್ಥೆ ಆಯೋಜಿಸಿದ್ದ ಸಿಎಂ ಕಪ್ 2026 ಟೂರ್ನಿ ರಾಜ್ಯದ ಕ್ರೀಡಾ ಕ್ಷೇತ್ರದಲ್ಲಿ ವಿಭಿನ್ನ ಮಾದರಿಯದ್ದಾಗಿತ್ತು. ಜನಪ್ರತಿನಿಧಿಗಳು, ಐಎಎಸ್ ಮತ್ತು ಐಪಿಎಸ್, ಪೊಲೀಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ವೈದ್ಯರು, ಚಲನಚಿತ್ರ ರಂಗ ಹಾಗೂ ಮಾಧ್ಯಮ ಕ್ಷೇತ್ರದವರು ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ಸಚಿವರಾದ ಡಾ. ಎಂ.ಸಿ. ಸುಧಾಕರ್, ಮಾಜಿ ಎಂಎಲ್ಸಿ ನಾರಾಯಣಸ್ವಾಮಿ, ಐಎಎಸ್ ಅಧಿಕಾರಿ ಸೆಲ್ವಕುಮಾರ್, ಐಪಿಎಸ್ ಅಧಿಕಾರಿಗಳಾದ ಮಿಥುನ್, ರಮೇಶ್ ಬಾನೋಥ್, ಕೆಎಎಸ್ ಅಧಿಕಾರಿಗಳಾದ ಸತೀಶ್, ಯೋಗೀಶ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಪರಮೇಶ್ವರ್ ಸೇರಿದಂತೆ ಹಲವರು ಸ್ಪರ್ಧಿಗಳಾಗಿ ಕಣಕ್ಕಿಳಿದಿದ್ದರು.
