ಬೆಂಗಳೂರು, ಫೆ.25- ಕಾವೇರಿ 6ನೇ ಹಂತದ ಯೋಜನೆ ಜಾರಿಗೆ ಜಲಮಂಡಳಿ ಸಿದ್ದತೆ ನಡೆಸಿದೆ.ಕಾವೇರಿ ನೀರು ಸರಬರಾಜು ಯೋಜನೆಯ 5ನೇ ಹಂತ ಬಹುತೇಕ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ 6ನೇ ಹಂತದ ಯೋಜನೆ ಅನುಷ್ಠಾನಕ್ಕೆ ತೀರ್ಮಾನಿಸಲಾಗಿದೆ ಎಂದು ಜಲ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಆರನೇ ಹಂತದ ಯೋಜನೆ ಜಾರಿಗೆ ಸಿದ್ದಪಡಿಸಿರುವ ಡಿಪಿಆರ್ಗೆ ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.ಈಗಾಗಲೇ 5ನೇ ಹಂತದ ಮೂಲಕ ನಗರಕ್ಕೆ ಒಟ್ಟು 2225 ಎಂಎಲ್ಡಿ ನೀರು ಪೂರೈಕೆ ಆಗುತ್ತಿದೆ. ಸುಮಾರು 1.50 ಕೋಟಿ ಜನರಿಗೆ ಕಾವೇರಿ ನೀರು ಸರಬರಾಜು ಮಾಡಲಾಗುತ್ತಿದೆ, ಬಿಬಿಎಂಪಿಗೆ ಸೇರ್ಪಡೆಯಾದ ಹೊಸ ಪ್ರದೇಶಗಳ ಕುಡಿಯುವ ನೀರಿನ ಅಗತ್ಯವನ್ನು ಗಮನದಲ್ಲಿಟ್ಟು 6ನೇ ಹಂತ ರೂಪಿಸಲಾಗಿದೆ.
ಒಟ್ಟು 6 ಟಿಎಂಸಿ ನೀರು .
ಅಂದಾಜು ವೆಚ್ಚ – 6,939 ಕೋಟಿ.
ಯೋಜನಾ ವೆಚ್ಚ-5,177 ಕೋಟಿ.
ಭೂಸ್ವಾಧೀನ 130 ಎಕರೆ – 1,822 ಕೋಟಿ
ಯೋಜನೆಯಿಂದ ಯಾವ ಪ್ರದೇಶಗಳಿಗೆ ಲಾಭ;
ನಗರ ಭಾಗಗಳಿಗೆ 4 ಟಿಎಂಸಿ ನೀರು..
ನಾಡಪ್ರಭು ಕೆಂಪೇಗೌಡ ಬಡಾವಣೆ
ಶಿವರಾಮ ಕಾರಂತ ಬಡಾವಣೆ
ಇತರೆ ಪ್ರಮುಖ ವಿಸ್ತಾರ ಪ್ರದೇಶಗಳು.
ಗ್ರಾಮೀಣ ಭಾಗಕ್ಕೆ 2 ಟಿಎಂಸಿ ನೀರು ;
ದೇವನಹಳ್ಳಿ
ಹೊಸಕೋಟೆ
ಹುಣಸಮಾರನಹಳ್ಳಿ
ಮಾದನಾಯಕನಹಳ್ಳಿ
ನೆಲಮಂಗಲ
ಚಿಕ್ಕಬಾಣಾವಾರ
ಇವುಗಳಿಗೆ ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬೇಡಿಕೆಯಂತೆ ನೀರು ಹಂಚಿಕೆ ಮಾಡಲಾಗುತ್ತದೆ.ಕಟ್ಟೇರಿ ಗ್ರಾಮದ ಸಮೀಪ ನೀರು ಸಂಸ್ಕರಣಾ ಘಟಕದಲ್ಲಿ ಅಗತ್ಯ ನೀರು ಶೇಖರಣೆ ಗುರುತ್ವಾಕರ್ಷಣಾ ಬಲದಿಂದ ರಾಮನಗರದ ದೇವರ ಹೊಸಹಳ್ಳಿಗೆ ಹರಿವು ಬಳಿಕ ಕೆಂಗೇರಿ (ನೈಸ್ ರಸ್ತೆ ಜಂಕ್ಷನ್) ಶೇಖರಣಾ ಸಂಗ್ರಹಗಾರಕ್ಕೆ ಪಂಪಿಂಗ್ ಮೂಲಕ ನೀರು ಶೇಖರಣೆ ಮಾಡಲಾಗುವುದು.ಅಲ್ಲಿಂದ ವಿವಿಧ ಬಡಾವಣೆಗಳಿಗೆ ಪೂರೈಕೆ ಮಾಡಲಾಗುತ್ತದೆ.
ಬೆಂಗಳೂರು ನಗರ ಹೊರಭಾಗದಲ್ಲಿನ ನೀರಿನ ಸಮಸ್ಯೆ ನೀಗಿಸಲು ಕಾವೇರಿ 6ನೇ ಹಂತದ ಯೋಜನೆ ರೂಪಿಸಲಾಗಿದ್ದು, ಸಚಿವ ಸಂಪುಟದ ಅನುಮೋದನೆ ದೊರೆತತೆ ತಕ್ಷಣವೇ ಆರ್ಥಿಕ ನೆರವು ಹಾಗೂ ಭೂಸ್ವಾಧೀನ ಪ್ರಕ್ರಿಯೆಗಳು ಆರಂಭವಾಗುವ ಸಾಧ್ಯತೆ ಇದೆ ರಾಮ್ ಪ್ರಸಾತ್ ಮನೋಹರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
