ಬೆಂಗಳೂರು,ಫೆ.26- ಗ್ಯಾರಂಟಿಗಳ ಬಗ್ಗೆ ಜನರಲ್ಲಿ ಗೊಂದಲ ಮೂಡಿಸದೆ ಸರ್ಕಾರ ಒಂದು ಸ್ಪಷ್ಟ ನಿರ್ಧಾರ ತಿಳಿಸಬೇಕು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಅವರು ಆಗ್ರಹಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮತಗಳಿಗಾಗಿ ಗ್ಯಾರಂಟಿಗಳನ್ನು ಜಾರಿಗೆ ತಂದರು. ಈಗ ಆ ಗ್ಯಾರಂಟಿಗಳ ಮೇಲೆಯೇ ಅವರಿಗೆ ನಂಬಿಕೆ ಇಲ್ಲದಾಗಿದೆ. ಅಲ್ಲಿ ಇಲ್ಲಿ ಮಾತಾಡಿ ಗೊಂದಲ ಮೂಡಿಸುವ ಬದಲು ನಿಮ ಉದ್ದೇಶ ಏನು ಹೇಳಿ? ಎಂದು ಪ್ರಶ್ನಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆಯಾಗಿವೆ ಎಂದು ಹೇಳಿದ್ದಾರೆ.
ಮುಂದೆ ನಾನು ಹಾಗೆ ಹೇಳೇ ಎಂದು ಉಲ್ಟಾ ಹೊಡೆಯುತ್ತಾರೆ. ಹಾಗಾಗಿ ಗ್ಯಾರಂಟಿಗಳ ಬಗ್ಗೆ ಮೊದಲು ಸರ್ಕಾರ ಸ್ಪಷ್ಟತೆ ಕೊಡಲಿ ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಮಕ್ಕಳ ನಾಪತ್ತೆ ಪ್ರಕರಣ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಬಹಳ ದು:ಖಕರ ವಿಚಾರ. ಸರ್ಕಾರ ಇದರ ಗಂಭೀರತೆ, ಸೂಕ್ಷ್ಮತೆ ಅರ್ಥಮಾಡಿಕೊಂಡು ಇದರ ಹಿಂದಿನ ಜಾಲಗಳನ್ನು ಪತ್ತೆ ಹಚ್ಚಬೇಕು ಎಂದು ಮನವಿ ಮಾಡಿಕೊಂಡರು.
ಅಕ್ರಮ ಬಾಂಗ್ಲಾ ನೆಲೆಗಳ ಮೇಲೆ ಪೆಲೀಸರು ದಾಳಿ ನಡೆಸಿರುವುದು ಉತ್ತಮ ಬೆಳವಣಿಗೆ. ರಾಜ್ಯದಲ್ಲಿ 25 ಲಕ್ಷ ಅಕ್ರಮ ಬಾಂಗ್ಲನ್ನರು ಇದ್ದಾರೆ. ಎಲ್ಲರನ್ನೂ ಪತ್ತೆ ಹಚ್ಚಿ ವಾಪಸ್ ಅವರ ದೇಶಕ್ಕೆ ಕಳಿಸಲಿ ಎಂದು ಸರ್ಕಾರಕ್ಕೆ ಅಶ್ವಥ್ನಾರಾಯಣ ಒತ್ತಾಯ ಮಾಡಿದರು.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಕುರಿತು, ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ನೇಮಕಾತಿ ಭರ್ತಿ ಮಾಡುವ ಭರವಸೆ ಕೊಟ್ಟಿದ್ದರು. ಅಧಿಕಾರಕ್ಕೆ ಬಂದು ಮೂರು ವರ್ಷ ಆದರೂ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಿಲ್ಲ. ಇದು ದುರುದ್ದೇಶಪೂರ್ವಕವಾಗಿಯೇ ವಿಳಂಬ ಮಾಡುತ್ತಿದ್ದಾರೆ. ಸರ್ಕಾರದಿಂದ ಯುವ ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರ ಒಂದು ವಾರದೊಳಗೆ ಅಧಿಸೂಚನೆ ಹೊರಡಿಸಿದಿದ್ದರೆ, ಬೆಂಗಳೂರಿನಲ್ಲಿ ಬಂದು ಪ್ರತಿಭಟನೆ ಮಾಡುವುದಾಗಿ ಯುವಕರು ಎಚ್ಚರಿಕೆ ಕೊಟ್ಟಿದ್ದಾರೆ. ಅವರ ಬೇಡಿಕೆ ಸರಿಯಾಗಿದೆ, ಸರ್ಕಾರ ಆದಷ್ಟು ಬೇಗ ಕ್ರಮ ಕೈಗೊಳ್ಳಲಿ ಎಂಧು ಅಶ್ವತ್ಥ ನಾರಾಯಣ ಆಗ್ರಹ ಮಾಡಿದರು.
