ಬೆಂಗಳೂರು,ಮಾ.8-ಆಟೋ ಚಾಲಕನೊಬ್ಬ ಪತ್ನಿ ಹಾಗೂ ಅತ್ತೆ,ಮಾವನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಪ್ರಯತ್ನಿಸಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊನ್ನೆ ನಡೆದಿದೆ.
ಗಾಯಗೊಂಡಿರುವ ತರಬನಹಳ್ಳಿಯ ನಿವಾಸಿ ಸುಮಲತಾ ಹಾಗೂ ಅವರ ತಂದೆ,ತಾಯಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮಹಾಲಕ್ಷ್ಮೀ ಲೇಔಟ್ ನಿವಾಸಿ ಆಟೋ ಚಾಲಕ ಪಾಂಡುರಂಗ ಮತ್ತು ಸುಮಲತಾ ಇಬ್ಬರ ನಡುವೆ ಸ್ನೇಹ ಬೆಳೆದು ಮದುವೆಯಾಗಿ ಜೊತೆಯಾಗಿ ಜೀವನ ನಡೆಸುತ್ತಿದ್ದರು.
ಈ ನಡುವೆ ಕೌಟುಂಬಿಕ ಕಾರಣದಿಂದ ಸುಮಲತಾ ಪತಿಯ ಮನೆಯನ್ನು ತೊರೆದು ತರಬನಹಳ್ಳಿಯ ತನ್ನ ತವರು ಮನೆಗೆ ಹೋಗಿ ಇದ್ದರು.ಮೊನ್ನೆ ಪಾಂಡುರಂಗ ಅವರ ಮನೆ ಬಳಿ ಹೋಗಿ ದ್ವಿಚಕ್ರ ವಾಹನವೊಂದನ್ನು ಕೊಡುವಂತೆ ಗಲಾಟೆ ತೆಗೆದು ಜಗಳ ಮಾಡಿದ್ದಾನೆ. ನಂತರ ಹೊರ ಹೋಗಿ ಪೆಟ್ರೋಲ್ ತಂದು ಮೂವರ ಮೇಲೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ.
ಅಕ್ಕಪಕ್ಕದ ಮನೆಯವರು ಮೂವರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ವಿಷಯವನ್ನು ಪೊಲೀಸರಿಗೆ ತಿಳಿಸಿದರು.ಸುದ್ದಿ ತಿಳಿದು ಸೋಲದೇವನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿದ್ದ ಪಾಂಡುರಂಗನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
