ಬೆಂಗಳೂರು, ಮಾ. 11-ಗೃಹ ಹಾಗೂ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಗಳ ಪೂರೈಕೆಯಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದು ಅನಿಲ ಕಂಪೆನಿಯ ಅಧಿಕಾರಿಗಳು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ವಸಂತನಗರದ ಆಹಾರ ಭವನದಲ್ಲಿಂದು ನಡೆದ ಐಒಸಿ, ಬಿಪಿಸಿ,ಎಚ್ಪಿಸಿ, ಜಿಎಐಎಲ್ (ಗಾಲಾ) ಸಂಸ್ಥೆಗಳ ಅಧಿಕಾರಿಗಳು ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪರೊಂದಿಗೆ ನಡೆದ ಸಭೆಯಲ್ಲಿ ಇಂಧನ ಕೊರತೆ, ಪೂರೈಕೆ ಬಗ್ಗೆ ವಿವರಗಳನ್ನು ನೀಡಿದರು.
ಜಾಗತಿಕ ಮಟ್ಟದಲ್ಲಿ ಯುದ್ಧದ ಕಾರಣದಿಂದ ಅನಿಲದ ವ್ಯಾಸಲ್ (ಶಿಫ್ಗಳಿಗೆ) ಹಾನಿ ಉಂಟಾದ ಹಿನ್ನೆಲೆಯಲ್ಲಿ ಅನಿಲ ಸಮಸ್ಯೆ ಉಂಟಾಗಿದ್ದರೂ ಗ್ರಾಹಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಾಮಾನ್ಯವಾಗಿ ಜನರು ಉಪಯೋಗಿಸುವ ಗೃಹ ಬಳಕೆ ಸಿಲಿಂಡರ್ ಮತ್ತು ವಾಣಿಜ್ಯ ಬಳಕೆ ಸಿಲಿಂಡರ್ಗಳ ಪೂರೈಕೆಯಲ್ಲಿ ಸದ್ಯ ಯಾವುದೇ ವ್ಯತ್ಯಯವಾಗುವುದಿಲ್ಲ. ಸುಮಾರು 1 ಸಾವಿರ ವೆುಟ್ರಿಕ್ ಟನ್, ಅಂದರೆ ಒಂದು ದಿನಕ್ಕೆ ಸುಮಾರು 50 ಸಾವಿರ ವಾಣಿಜ್ಯ ಬಳಕೆ ಸಿಲಿಂಡರ್ಗಳು (19 ಕೆಜಿ) ಬೇಕಾಗುತ್ತದೆ. ಗೃಹ ಬಳಕೆಗೆ ಸುಮಾರು 5 ಸಾವಿರ ಮೆಟ್ರಿಕ್ ಟನ್ ಅಂದರೆ ದಿನಕ್ಕೆ ಸುಮಾರು 3.5 ಕೋ. ಸಿಲಿಂಡರ್ಗಳು (14.2 ಕೆಜಿ) ಬೇಕಾಗುತ್ತದೆ.
ಇದು ಪ್ರತಿದಿನ ರಾಜ್ಯದ ಅವಶ್ಯಕತೆಯಾಗಿದ್ದು, ಸದ್ಯ ಇದರ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ಅಧಿಕಾರಿಗಳು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಜನರು ಆತಂಕಪಡುವ ಅಗತ್ಯವಿಲ್ಲ. 3.45 ಕೋಟಿ ಮನೆಗಳಿಗೆ ಸಿಲಿಂಡರ್ಗಳನ್ನು ನಿರಾಂತಕವಾಗಿ ಒದಗಿಸಬಹುದಾಗಿದೆ. ಭಾರತದಲ್ಲಿ ಶೇ.30ರಷ್ಟು ಮಾತ್ರ ಉತ್ಪಾದನೆ ಇದೆ, ಉಳಿದ ಶೇ.60 ರಿಂದ 70ರಷ್ಟು ಆಮದು ಮಾಡಿಕೊಳ್ಳುತ್ತಿದ್ದೇವೆ.
ಅಮೇರಿಕಾ, ಗಲ್್ಫ , ರಷ್ಯಾ ದೇಶಗಳಿಂದ ಆಮದು ಬರುತ್ತಿದೆ. ಯುದ್ಧದ ಪರಿಸ್ಥಿತಿಯಿಂದ ಸ್ವಲ್ಪ ತಡವಾಗುತ್ತಿದೆ. ಆದರೂ ಜನ ಆತಂಕಪಡುವ ಅಗತ್ಯವಿಲ್ಲ. ಹೊಟೇಲ್, ರೆಸ್ಟೋರೆಂಟ್, ಕಲ್ಯಾಣ ಮಂಟಪಗಳು ಸೇರಿದಂತೆ ವಿವಿಧೆಡೆ ವಾಣಿಜ್ಯ ಬಳಕೆಗೆ ನಿಗಧಿತ ಸಿಲಿಂಡರ್ಗಳನ್ನು ಒದಗಿಸಬಹುದಾಗಿದೆ. ಆದರೆ ಹೆಚ್ಚುವರಿ ಸಿಲಿಂಡರ್ಗಳನ್ನು ಕೇಳಿದರೆ ಕಷ್ಟ ಸಾಧ್ಯವಾಗುತ್ತದೆ.
ಮೊದಲು ಮನೆ ಬಳಕೆಗೆ ಆದ್ಯತೆ ನೀಡಿ, ಕಮರ್ಷಿಯಲ್ ವಿಚಾರದಲ್ಲಿ ಆದ್ಯತೆ ಮೇರೆಗೆ ಆಸ್ಪತ್ರೆಗಳು, ಶಾಲಾ, ಕಾಲೇಜುಗಳ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ನೋಡಿಕೊಂಡು ನಂತರ ಹೊಟೇಲ್, ಕಲ್ಯಾಣಮಂಟಪಗಳಿಗೆ ಆದ್ಯತೆಯ ಮೇರೆಗೆ ಸಿಲಿಂಡರ್ಗಳನ್ನು ವಿತರಿಸುವ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.
ಹಳ್ಳಿಗಳಗಲ್ಲಾಗಲೀ, ನಗರದಲ್ಲಾಗಲೀ ಜನರು ಮಿತವಾಗಿ ಗ್ಯಾಸ್ ಬಳಸಬೇಕು, ತೀರಾ ಅವಶ್ಯಕತೆ ಇದ್ದಲ್ಲಿ ಮಾತ್ರ ಉಪಯೋಗಿಸಬೇಕು. ಆತಂಕಪಟ್ಟು ಗ್ರಾಹಕರು ಹೆಚ್ಚು ಸಿಲಿಂಡರ್ ಬುಕ್ ಮಾಡಬಾರದು. ಅನಗತ್ಯವಾಗಿ ಪ್ಯಾನಿಕ್ಗೆ ಒಳಗಾಗಬಾರದು. ಸರ್ಕಾರ ಮತ್ತು ಆಯಿಲ್ ಕಂಪೆನಿಗಳ ಜೊತೆ ಸಾರ್ವಜನಿಕರು ಪರಿಸ್ಥಿತಿ ನಿಭಾಯಿಸಲು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿ ಕನಗವಲ್ಲಿ, ಆಯುಕ್ತರಾದ ರವಿಕುಮಾರ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್, ಅನಿಲ ಕಂಪನಿಗಳ ಅಧಿಕಾರಿಗಳಾದ ನೀರಾ ಸಿಂಗ್, ಅರುಂದಿ ಗೊಯಲ್, ದಿವ್ಯ, ಮುರಳಿ ಚಾರ್, ಸುಬ್ರತ್ ಚಟರ್ಜಿ, ರಾಜೇಶ್ ಸಿಂಗ್, ಸಂಜಯ್ ಕುಮಾರ್ ಸಿಂಗ್, ಪ್ರಣಯ ದೇವನಾಗನ್, ರವಿಕುಮಾರ್ ತಂಡಲ್, ಪ್ರಸೂನ್ ಮಾಲಿ ಹಾಗೂ ನಿಗಮದ ಪ್ರಧಾನ ವ್ಯವಸ್ಥಾಪಕರಾದ ಮಂಜುನಾಥ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
